ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಆವರಣದಲ್ಲಿಂದು ನಡೆದ ಶ್ರೀಗುರು ಸಿದ್ದರಾಮೇಶ್ವರರ 852ನೇ ಜಯಂತ್ಯುತ್ಸವದಲ್ಲಿ ನೊಳಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಸವಕಲ್ಯಾಣದ ಅನುಭವ ಮಂಟಪ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ವಿಶ್ವಕ್ಕೆ ನೀಡಿದ ಕೀರ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದರು.
“ಈಗಿರುವ ಅನುಭವ ಮಂಟಪ ನಿರ್ಮಾಣಕ್ಕೆ ಲಿಂಗೈಕ್ಯ ಚನ್ನಬಸವ ಪಟ್ಟದೇವರು ಮತ್ತು ಶತಾಯುಷಿ ಲೋಕನಾಯಕ ಭೀಮಣ್ಣ ಖಂಡ್ರೆ ಅವರ ಕೊಡುಗೆ ಸ್ಮರಿಸಿದ ಈಶ್ವರ ಖಂಡ್ರೆ, ಆಧುನಿಕ ಅನುಭವ ಮಂಟಪದ 770 ಕಂಬಗಳಲ್ಲಿ ಬಸವಾದಿ ಶರಣರುಗಳೆಲ್ಲರ ವಚನಗಳನ್ನು ಕೆತ್ತಿಸಲಾಗುವುದು. ಈ ಮೂಲಕ ಶರಣ ಸಾಹಿತ್ಯ, ವಚನ ಸಾಹಿತ್ಯ ಚಿರಸ್ಥಾಯಿಯಾಗಿ ಉಳಿಯುಂತೆ ಮಾಡಲಾಗುವುದು” ಎಂದರು.
“ಗುರು ಸಿದ್ಧರಾಮೇಶ್ವರರು ಶರಣ, ವಚನಕಾರರಷ್ಟೇ ಅಲ್ಲ ಅವರು ಸಮಾಜ ಸೇವಕರೂ ಆಗಿದ್ದರೂ, ಕೆರೆಗಳನ್ನು ಕಟ್ಟಿಸಿದ್ದರು. ಅವರ ಬದುಕು ಎಲ್ಲರಿಗೂ ಪ್ರೇರಣೆಯಾಗಬೇಕು. ಸಿದ್ಧರಾಮೇಶ್ವರರ ವಚನಗಳ ಅನುಭಾವ ಓದುಗರ ಜ್ಞಾನಚಕ್ಷುವನ್ನು ತೆರೆಸುತ್ತದೆ. ಅವರು ಸಾವಿರಾರು ವಚನಗಳನ್ನು ರಚಿಸಿದ್ದು, ಅವುಗಳ ಪೈಕಿ ಕೆಲವು ಮಾತ್ರವೇ ಲಭ್ಯವಾಗಿವೆ. ಅವರ ಸಮಗ್ರ ಜೀವನ ಚರಿತ್ರೆಯು ಜಗತ್ತಿಗೆ ತಿಳಿಯಬೇಕು” ಎಂದು ಹೇಳಿದರು.
ಕೇಂದ್ರ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸತ್ ಸದಸ್ಯರಾದ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕರುಗಳಾದ ಬಿ.ವೈ. ವಿಜಯೇಂದ್ರ, ಎಸ್.ಆರ್. ವಿಶ್ವನಾಥ್, ಜ್ಯೋತಿ ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.