ತಮಿಳುನಾಡಿನ ಕಾಂಗ್ರೆಸ್ ಪಕ್ಷದ ಮೈತ್ರಿ ರಾಜಕಾರಣದ ಬಗ್ಗೆ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ನೀಡುತ್ತಿರುವ ಉಪದೇಶಗಳು ಹಾಸ್ಯಾಸ್ಪದ ಮಾತ್ರವಲ್ಲ, ಆತ್ಮದ್ರೋಹಿತನದ ಪರಮಾವಧಿ ಎಂದು ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ದೇಶದ ಜಾತ್ಯಾತೀತ, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ. ಆದರೆ ಬಿಜೆಪಿ ಪಕ್ಷ ನಡೆಸಿರುವ ಅಪವಿತ್ರ ಮೈತ್ರಿಗಳ ಇತಿಹಾಸವನ್ನು ದೇಶ ಮರೆತಿಲ್ಲ. ತಮಿಳುನಾಡಿನಲ್ಲಿ ಜಾತ್ಯಾತೀತ ಶಕ್ತಿಗಳ ಒಕ್ಕೂಟವನ್ನು ಪ್ರಶ್ನಿಸುವ ಬಿಜೆಪಿ ಪಕ್ಷ, ಮೊದಲು ತನ್ನ ರಾಜಕೀಯ ಕನ್ನಡಿಯಲ್ಲಿ ತನ್ನದೇ ಮುಖವನ್ನು ನೋಡಿಕೊಂಡರೆ ಸಾಕು ಮುಖವಾಡಗಳೇ ಕಾಣುತ್ತದೆ ಎಂದು ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.
“ಕಾಶ್ಮೀರದಲ್ಲಿ ಪ್ರತ್ಯೇಕತಾವಾದದ ರಾಜಕೀಯ ನೆರಳಿನ ನಡುವೆ ಅಧಿಕಾರ ಹಂಚಿಕೊಂಡಿದ್ದು ಯಾರು? ಪಂಜಾಬಿನಲ್ಲಿ ಪ್ರತ್ಯೇಕತಾವಾದದ ರಾಜಕೀಯ ಆರೋಪಗಳಿಂದ ಸುತ್ತುವರಿದ ಅಕಾಲಿದಳದೊಂದಿಗೆ ದಶಕಗಳ ಕಾಲ ಅಧಿಕಾರ ಸವಿದದ್ದು ಯಾರು? ತ್ರಿಪುರಾದಲ್ಲಿ ‘ಟಿಪ್ರಾಲ್ಯಾಂಡ್’ ಬೇಡಿಕೆಯನ್ನು ಎತ್ತಿ ಹಿಡಿಯುವ ಐಪಿಎಫ್ಟಿ ಪಕ್ಷದ ಜೊತೆ ಸರ್ಕಾರ ನಡೆಸುತ್ತಿರುವುದು ಯಾವ ರಾಷ್ಟ್ರಭಕ್ತಿಯ ರಾಜಕೀಯ? ಬಿಹಾರದಲ್ಲಿ “ಜಂಗಲ್ ರಾಜ” ಎಂದು ಹೀಯಾಳಿಸುತ್ತಿದ್ದವರ ಮನೆ ಬಾಗಿಲಿಗೆ ಹೋಗಿ ಅಪ್ಪಿಕೊಂಡು ಸರ್ಕಾರ ನಡೆಸುತ್ತಿರುವುದು ಯಾವ ಮಾಸ್ಟರ್ ಸ್ಟ್ರೋಕ್” ಎಂದು ಪ್ರಶ್ನಿಸಿದ್ದಾರೆ.
“ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರದ ಪ್ರತೀಕವಾಗಿದ್ದವರನ್ನೇ ಉಪಮುಖ್ಯಮಂತ್ರಿ ಮಾಡಿದ್ದು ಯಾವ ಚುನಾವಣಾ ತಂತ್ರಗಾರಿಕೆ? ಭ್ರಷ್ಟರನ್ನು ಪ್ರಮಾಣಿಕರನ್ನಾಗಿ ಮಾಡುವ, ದೇಶದ್ರೋಹಿಗಳನ್ನು ದೇಶಪ್ರೇಮಿಗಳನ್ನಾಗಿ ನೋಡುವ, ಪ್ರತ್ಯೇಕತಾವಾದಿಗಳನ್ನು ಕೂಡ ರಾಷ್ಟ್ರಭಕ್ತರ ಕೂಟವನ್ನಾಗಿ ಮಾಡುವುದು ಬಿಜೆಪಿಯ ಅತ್ಯಂತ ಹೀನ ರಾಜಕೀಯ ನೀತಿಯಲ್ಲವೇ? ಇಡಿ, ಐಟಿ, ಸಿಬಿಐಗಳನ್ನೇ ರಾಜಕೀಯ ಶಾಖೆಗಳಂತೆ ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಬೆದರಿಸುವುದು, ಸರ್ಕಾರಗಳನ್ನು ಉರುಳಿಸುವುದು, ಜನಾದೇಶವನ್ನು ಖರೀದಿಸುವುದು — ಇದೇ ಬಿಜೆಪಿ ಕಟ್ಟಿಕೊಂಡಿರುವ ‘ಹೊಸ ಪ್ರಜಾಪ್ರಭುತ್ವ’!” ಎಂದು ಲೇವಡಿ ಮಾಡಿದ್ದಾರೆ.
“ತಮಿಳುನಾಡಿನಲ್ಲಿ ಜನರು ಬಿಜೆಪಿಯನ್ನು ಅತ್ಯಂತ ಹೀನಾಯವಾಗಿ ಸೋಲಿಸುವುದು ಮಾತ್ರವಲ್ಲ ತಮಿಳುನಾಡಿನ ಜಾತ್ಯಾತೀತ ನೆಲ ಬಿಜೆಪಿ ಸಿದ್ದಾಂತವನ್ನು ಸ್ಪಷ್ಟವಾಗಿ ತಿರಸ್ಕಾರ ಮಾಡಿದೆ. ಸ್ವತಂತ್ರವಾಗಿ ನೆಲೆಯೇ ಇಲ್ಲದ ಪಕ್ಷ, ಮೈತ್ರಿಗಳ ಬಗ್ಗೆ ನೀತಿ ಪಾಠ ಹೇಳುವುದು ರಾಜಕೀಯ ವ್ಯಂಗ್ಯದ ಪರಾಕಾಷ್ಠೆ. ಕಾಂಗ್ರೆಸ್ ಪಕ್ಷ ದೇಶದ ಏಕತೆ, ಸಂವಿಧಾನ ಮತ್ತು ಜಾತ್ಯಾತೀತ ಮೌಲ್ಯಗಳಿಗಾಗಿ ಮೈತ್ರಿ ಮಾಡುತ್ತದೆ. ಬಿಜೆಪಿ ಪಕ್ಷ ಅಧಿಕಾರಕ್ಕಾಗಿ ಯಾವುದರೊಂದಿಗಾದರೂ ಒಪ್ಪಂದ ಮಾಡುತ್ತದೆ. ಇದೇ ಎರಡರ ನಡುವಿನ ಮೂಲಭೂತ ವ್ಯತ್ಯಾಸ” ಎಂದಿದ್ದಾರೆ.


