- 27ರಂದು ಬಿಡದಿಗೆ ಬರುವಂತೆ ಮನವಿ ಮಾಡಿದ ಕೇಂದ್ರ ಸಚಿವರು
ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಬೈರಮಂಗಲಕ್ಕೆ ಬರುವಂತೆ ಕೋರಲಾಗಿದ್ದ ಪತ್ರಕ್ಕೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಂದ ಯಾವುದೇ ಪ್ರತ್ಯುತ್ತರ ಬಾರದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೊಂದು ಪತ್ರವನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ.
ನೊಂದ ರೈತರ ಸಮ್ಮುಖದಲ್ಲಿಯೇ ಚರ್ಚೆ ನಡೆಯಬೇಕು ಎಂಬ ತಮ್ಮ ನಿಲುವಿಗೆ ಬದ್ಧರಾಗಿರುವ ಕೇಂದ್ರ ಸಚಿವರು, ತಮ್ಮ ಅಧಿಕಾರಿಗಳೊಂದಿಗೆ ಭೈರಮಂಗಲಕ್ಕೆ ಬರುವಂತೆ ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಕೋರಿದ್ದಾರೆ.
ಈ ಸಂಬಂಧ ಗುರುವಾರ ಮುಖ್ಯಮಂತ್ರಿಗಳಿಗೆ ಮತ್ತೊಂದು ಪತ್ರವನ್ನು ಬರೆದಿರುವ ಸಚಿವರು, ತಮ್ಮಿಂದ ಉತ್ತರದ ನಿರೀಕ್ಷೆಯಲ್ಲಿ ಇದ್ದೇನೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರು ಬರೆದಿರುವ ಪತ್ರದ ಒಕ್ಕಣಿ ಹೀಗಿದೆ;
ಶ್ರೀ ಡಿ.ಕೆ. ಶಿವಕುಮಾರ್ ರವರೇ,
ತಾವು ದಿನಾಂಕ: 22-06-2026ರಂದು ನನಗೆ ಬರೆದಿರುವ ಪತ್ರ ಮತ್ತು ನಾನು ಅದೇ ದಿನ ಉತ್ತರವಾಗಿ ಬರೆದಿರುವ ಪತ್ರದ ಕಡೆ ತಮ್ಮ ಅಧ್ಯ ಗಮನ ಸೆಳೆಯಬಯಸುತ್ತೇನೆ.
ನನ್ನ ದಿನಾಂಕ: 22-06-2026ರ ಪತ್ರವನ್ನು ತಾವು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ ಮತ್ತು ನನ್ನ ಈ ಪತ್ರಕ್ಕೆ ತಮ್ಮಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ.
ಮುಂದುವರೆದು, ನನ್ನ ಪತ್ರದಲ್ಲಿ ಕಾಣಿಸಿದಂತೆ ಬಿಡದಿಯಲ್ಲಿ ರಚಿಸಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಿಂದ ಭಾಧಿತರಾಗುವ ರೈತರು. ಕೃಷಿ ಕಾರ್ಮಿಕರು. ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಮಹಿಳೆಯರು. ಸಣ್ಣ ಉದ್ಯಮಿಗಳು ಹಾಗೂ ಗ್ರಾಮಸ್ಥರ ಅಹವಾಲನ್ನು ಮತ್ತು ಕುಂದು ಕೊರತೆಗಳನ್ನು ಕೇಳಲು ದಿನಾಂಕ: 27-06-2026ರಂದು ನಾನು ಬೈರಮಂಗಲ ಗ್ರಾಮಕ್ಕೆ ಭೇಟಿ ನೀಡಲಿದ್ದೇನೆ.
ದಿನಾಂಕ: 27-06-2026ರ ಪ್ರವಾಸ ಕಾರ್ಯಕ್ರಮವನ್ನು ತಮ್ಮ ಅವಗಾಹನೆಗೆ ಈ ಪತ್ರದೊಂದಿಗೆ ಲಗತ್ತಿಸಿದ್ದೇನೆ
ಆದ್ದರಿಂದ, ತಾವು ಕೂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಭೈರಮಂಗಲ ಗ್ರಾಮಕ್ಕೆ ದಿನಾಂಕ: 27-06-2026ರಂದು ಭೇಟಿ ನೀಡಿದರೆ ನಾವಿಬ್ಬರು ಖುದ್ದಾಗಿ ಭಾದೀತ ವರ್ಗದ ಜನರ ಸಂಕಷ್ಟಗಳನ್ನು ಆಲಿಸಿ ಸ್ಥಳದಲ್ಲಿಯೇ ಪರ್ಯಾಯ ಮಾರ್ಗಗಳನ್ನು ಯೋಚಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಪತ್ರವನ್ನು ಸಚಿವರು ತಮ್ಮ ಆಪ್ತ ಸಿಬ್ಬಂದಿ ಮೂಲಕ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಗೆ ತಲುಪಿಸಿದ್ದಾರೆ. ಅಲ್ಲದೆ ಮಾಧ್ಯಮಗಳಿಗೂ ಪತ್ರವನ್ನು ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ.


