ಪುಲ್ವಾಮ ದಾಳಿಯ ತನಿಖೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಇನ್ನೂ ತುಟಿ ಬಿಚ್ಚದಿರಲು ಕಾರಣ ಆರ್ ಎಸ್ ಎಸ್ ಎಂಬುದು ಈಗ ಬಟಾಬಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು,”ಮೋಹನ್ ಭಾಗವತ್ ಎರಡನೇ ಬಾರಿ ಪಾಕಿಸ್ತಾನದ ಪರ ಮಾತನಾಡಿದ್ದಾರೆ. “ಪಾಕಿಸ್ತಾನಿಯರೆಲ್ಲರೂ ಶತ್ರುಗಳಲ್ಲ” ಎಂದು Rashtriya Swayamsevak Sangh (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು, ಆರ್ ಎಸ್ ಎಸ್ ಗೂ ಪಾಕಿಸ್ತಾನಕ್ಕೂ ಇರುವ ಲಿಂಕ್ ಬಗ್ಗೆ ತನಿಖೆಯಾಗಬೇಕಿದೆ” ಎಂದು ಆಗ್ರಹಿಸಿದ್ದಾರೆ.
“ಈ ಹಿಂದೆ ಪಾಕಿಸ್ತಾನದ ಐಎಸ್ಐ ಉಗ್ರಗಾಮಿ ಸಂಘಟನೆಗಳೊಂದಿಗೆ ಆರ್ ಎಸ್ ಎಸ್ ಪ್ರಮುಖರು ರಹಸ್ಯ ಸಭೆಗಳನ್ನು ನಡೆಸಿದ್ದರು. ಈಗ ಮೋಹನ್ ಭಾಗವತ್ “ಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲ” ಎಂದು ಹೇಳುವ ಮೂಲಕ ಎಲ್ಲವೂ ಪೂರ್ವನಿಯೋಜಿತ ಎಂಬುದನ್ನು ಬಯಲು ಮಾಡಿದೆ” ಎಂದು ತಿಳಿಸಿದ್ದಾರೆ.
“2026ರ ಫೆಬ್ರವರಿ 6ರಂದು ಮೋದಿ ಸರ್ಕಾರದ ವಿದೇಶಾಂಗ ಸಚಿವಾಲಯವೇ ಸಂಸತ್ತಿಗೆ ನೀಡಿದ ಅಧಿಕೃತ ಉತ್ತರದಲ್ಲಿ ಪಾಕಿಸ್ತಾನವನ್ನು ಭಾರತದ “neighbouring countries” ಪಟ್ಟಿಯಲ್ಲಿ ಸೇರಿಸಿದೆ. ಹಾಗಿದ್ದರೆ, ವಿಧಾನ ಪರಿಷತ್ತಿನಲ್ಲಿ ನಾನು ಹೇಳಿದ “ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ” ಎಂಬ ಮಾತಿಗೆ ಗಟಾರದಲ್ಲಿ ಬಿದ್ದು ಹೊರಳಾಡಿದಂತೆ ನಟಿಸಿದ್ದ ನಕಲಿ ದೇಶಪ್ರೇಮಿಗಳು ಈಗ ಎಲ್ಲಿದ್ದಾರೆ? ಆಗ ನನ್ನ ಮೇಲೆ ಹರಿಹಾಯ್ದಿದ್ದ ಬಾಡಿಗೆ ದೇಶಭಕ್ತರ ನಾಲಿಗೆಗೆ ಈಗ ನಾಗಪುರದಿಂದ ಬೀಗ ಬಿದ್ದಿದೆಯೇ” ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಉಗ್ರ ಭಾಷಣಗಳನ್ನು ಮಾಡುವ Bharatiya Janata Party (BJP) ಹಾಗೂ ಸಂಘಪರಿವಾರದ ನಾಯಕರ ಪಾಕಿಸ್ತಾನದ ಕುರಿತ ವರಸೆ ಈಗ ಬದಲಾಗಿದೆಯೇ? ಅಥವಾ ತಮ್ಮ ಪೂರ್ವಜರ ‘ಪಾಕ್’ ಪ್ರೇಮದ ಪರಂಪರೆಯನ್ನೇ ಮುಂದುವರಿಸುತ್ತಿದ್ದಾರೆಯೇ? ಭಾರತವನ್ನು ವಿಭಜಿಸಿದ ಮಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಸೇರಿ ಬಂಗಾಳದಲ್ಲಿ ಮುಸ್ಲಿಂ ಲೀಗ್ನೊಂದಿಗೆ ಸರ್ಕಾರ ನಡೆಸಿದ ಜನಸಂಘದ ಶ್ಯಾಮಪ್ರಸಾದ್ ಮುಖರ್ಜಿಯಿಂದ ಹಿಡಿದು, ಜಿನ್ನಾ ಅವರ ಸಮಾಧಿಗೆ ಭೇಟಿ ನೀಡಿ ಅವರನ್ನು “ಜಾತ್ಯತೀತ ನಾಯಕ” ಎಂದು ಹೊಗಳಿದ ಅಡ್ವಾಣಿಯವರೆಗೆ, ಪಾಕಿಸ್ತಾನದ ಪ್ರಧಾನಿಯ ಮನೆಗೆ ಆಹ್ವಾನವಿಲ್ಲದಿದ್ದರೂ ಅಚ್ಚರಿಯ ರೀತಿಯಲ್ಲಿ ಬಿರಿಯಾನಿ ಸವಿದ ನರೇಂದ್ರ ಮೋದಿಯವರೆಗೆ ಬಿಜೆಪಿ ಹಾಗೂ ಅದರ ಪೂರ್ವಜರ ‘ಪಾಕ್’ ಪ್ರೇಮದ ಪರಂಪರೆ ಮುಂದುವರಿಯುತ್ತಲೇ ಇದೆ ಎಂಬ ಆರೋಪಗಳಿಗೆ ಈ ಬೆಳವಣಿಗೆಗಳು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ” ಎಂಂದಿದ್ದಾರೆ.
ಒಂದು ಕಡೆ ಚುನಾವಣಾ ರಾಜಕಾರಣಕ್ಕಾಗಿ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಬಿಂಬಿಸುವುದು. ಮತ್ತೊಂದು ಕಡೆ ಅಧಿಕಾರದಲ್ಲಿರುವಾಗ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರಿಸುವುದು ಇದು ಬಿಜೆಪಿ/ಆರ್ ಎಸ್ ಎಸ್ ಯ ದ್ವಂದ್ವ ನೀತಿಯಲ್ಲವೇ? ಗಡಿಯಲ್ಲಿ ನಮ್ಮ ವೀರ ಯೋಧರು ಪ್ರಾಣ ಕಳೆದುಕೊಳ್ಳುತ್ತಿರುವಾಗ, ಪುಲ್ವಾಮಾ ಮತ್ತು ಪಹಲ್ಗಾಮ್ನಂತಹ ಭೀಕರ ದಾಳಿಗಳಲ್ಲಿ ಅಮಾಯಕ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಬಲಿಯಾಗುತ್ತಿರುವಾಗ, “ಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲ” ಎಂದು ಹೇಳುವ ಮೋಹನ್ ಭಾಗವತ್ ಅವರ ಮಾತಿನ ಅರ್ಥವೇನು” ಎಂದು ಕೇಳಿದ್ದಾರೆ.
“ಪಾಕಿಸ್ತಾನದ ಭಯವನ್ನು ಚುನಾವಣಾ ಭಾಷಣಗಳಲ್ಲಿ ರಾಜಕೀಯ ಅಸ್ತ್ರವನ್ನಾಗಿ ಬಳಸುವ ಬಿಜೆಪಿ ನಾಯಕರು, ಈಗ ತಮ್ಮದೇ ಸರಸಂಘಚಾಲಕರ ಹೇಳಿಕೆಯ ಬಗ್ಗೆ ಮೌನವಾಗಿರುವುದೇಕೆ? ದೇಶಭಕ್ತಿಯ ಗುತ್ತಿಗೆ ಪಡೆದವರೇ, ನಿಮ್ಮ ವರಸೆ ಬದಲಾಗಿದೆಯೇ? ಅಥವಾ ನಾಗಪುರದಿಂದ ಬಂದ ಹೊಸ ನಿರ್ದೇಶನದ ನಿರೀಕ್ಷೆಯಲ್ಲಿದ್ದೀರಾ? ಎಂದು ಹರಿಪ್ರಸಾದ್ ಕುಟುಕಿದ್ದಾರೆ.


