Homeಕರ್ನಾಟಕಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ: ಯತೀಂದ್ರ ಸಿದ್ದರಾಮಯ್ಯ

ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ: ಯತೀಂದ್ರ ಸಿದ್ದರಾಮಯ್ಯ

ರಾಜ್ಯ ಮತ್ತು ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂ.ಎಸ್.ಎಂ.ಇ.) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವುಗಳ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಹಮ್ಮಿಕೊಂಡಿದ್ದ ‘ಇ-ಖಾತಾ ಮತ್ತು ನಗರ ಅಭಿವೃದ್ಧಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಮತ್ತು ದೇಶದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವುದು ಎಂಎಸ್‌ಎಂಇ ವಲಯವಾಗಿದೆ. ದೇಶದ ಜಿಡಿಪಿಗೆ ಶೇ. 31 ರಷ್ಟು ಹಾಗೂ ರಫ್ತು ವಲಯಕ್ಕೆ ಶೇ. 45 ರಿಂದ 48 ರಷ್ಟು ಕೊಡುಗೆಯನ್ನು ಈ ವಲಯ ನೀಡುತ್ತಿದ್ದು, ಇದನ್ನು ಯಾವುದೇ ಸರ್ಕಾರ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

ಗ್ರಾಮೀಣ ಅಥವಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುವ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆ ಪಾವತಿ ಕುರಿತು ಇರುವ ಗೊಂದಲಗಳನ್ನು ಬಗೆಹರಿಸಲಾಗುವುದು. ಈ ಬಗ್ಗೆ ಕೆಐಎಡಿಬಿ (KIADB) ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಸ್ತಿಗಳನ್ನು ಪಾಲಿಕೆ ವ್ಯಾಪ್ತಿಗೆ ಸಮರ್ಪಕವಾಗಿ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಾರದರ್ಶಕತೆ ಹಾಗೂ ತ್ವರಿತ ಸೇವೆಗಾಗಿ ಇ-ಖಾತಾ ವ್ಯವಸ್ಥೆಯನ್ನು ತರಲಾಗಿದೆ. ಪ್ರಸ್ತುತ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಸುಮಾರು 20.26 ಲಕ್ಷ ಆಸ್ತಿಗಳ ಪೈಕಿ ಶೇ. 40 ರಷ್ಟು ಆಸ್ತಿಗಳಿಗೆ ಮಾತ್ರ ಇ-ಖಾತಾ ನೀಡಲಾಗಿದೆ. ತಾಂತ್ರಿಕ ತೊಂದರೆಗಳು ಮತ್ತು ಕಾಗುಣಿತ ದೋಷಗಳ  ತಿದ್ದುಪಡಿಗೆ ಈಗಾಗಲೇ ಶೇ. 10 ರಷ್ಟು ವಿನಾಯಿತಿ ನೀಡಲಾಗಿದ್ದು, ಇದನ್ನು ಇನ್ನಷ್ಟು ಸರಳಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಕೈಗಾರಿಕಾ ಪ್ರದೇಶಗಳಿಗೆ ಟ್ಯಾಂಕರ್ ಮುಕ್ತ ನೀರು ಸರಬರಾಜು ಮತ್ತು ಒಳಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಆದ್ಯತೆ ನೀಡಲಿದೆ. ಅಲ್ಲದೆ, ಕೈಗಾರಿಕೆಗಳಿಗೆ ಹೊರೆಯಾಗುತ್ತಿರುವ ನೀರಿನ ದರ ಹಾಗೂ ಆಸ್ತಿ ತೆರಿಗೆಯನ್ನು ಮರುಪರಿಶೀಲಿಸಿ, ಉದ್ಯಮ ಸ್ನೇಹಿಯಾಗಿ ಪರಿಷ್ಕರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ವಿವಿಧ ಇಲಾಖೆಗಳಿಂದ ಪರವಾನಗಿ ಮತ್ತು ಪ್ರಮಾಣಪತ್ರಗಳನ್ನು ಪಡೆಯಲು ಉದ್ಯಮಿಗಳಿಗೆ ಆಗುತ್ತಿರುವ ಸಮಯದ ವಿಳಂಬವನ್ನು ತಪ್ಪಿಸಲು, ಕೈಗಾರಿಕೆಗಳಿಗಾಗಿಯೇ ಪ್ರತ್ಯೇಕವಾಗಿ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ಉದ್ಯಮಿಗಳ ಸಮಸ್ಯೆಗಳಿಗೆ ಕೇವಲ ಭರವಸೆ ನೀಡದೆ, ಎಫ್.ಕೆ.ಸಿ.ಸಿ.ಐ. ನೀಡುವ ನಿರ್ದಿಷ್ಟ ಸಮಸ್ಯೆಗಳ ಲಿಖಿತ ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಮುಂಬರುವ ದಿನಗಳಲ್ಲೂ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕ ಮತ್ತು ಸಮಾಲೋಚನೆ ನಡೆಸುವ ಮೂಲಕ ಕೈಗಾರಿಕಾ ವಲಯದ ಏಳಿಗೆಗೆ ಶ್ರಮಿಸುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ‌ ಬಿ.ಬಿ.ಕಾವೇರಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಉಮಾ ರೆಡ್ಡಿ, ನಿಕಟಪೂರ್ವ ಅಧ್ಯಕ್ಷರಾದ ಆರ್. ಶಿವಕುಮಾರ್, ಹಿರಿಯ ಉಪಾಧ್ಯಕ್ಷರಾದ ಸಾಯಿರಾಂ ಪ್ರಸಾದ್, ಉಪಾಧ್ಯಕ್ಷರಾದ ಶಶಿಧರ್, ಅರವಿಂದ್ ಬುರ್ಜಿ, ತಲ್ಲಂ ವೆಂಕಟೇಶ್, ಸುಗ್ನೇನ್ ಹಿರೇಮಠ್ ಸೇರಿದಂತೆ FKCCIಯ ಪದಾಧಿಕಾರಿಗಳು, ವಿವಿಧ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments