Homeಕರ್ನಾಟಕರಾಜ್ಯದಲ್ಲಿ ಇನ್ಮುಂದೆ ಅಸ್ಪೃಶ್ಯತಾ ಆಚರಣೆ ಘಟನೆ ನಡೆಯಬಾರದು: ಹೆಚ್‌ ಸಿ ಮಹದೇವಪ್ಪ

ರಾಜ್ಯದಲ್ಲಿ ಇನ್ಮುಂದೆ ಅಸ್ಪೃಶ್ಯತಾ ಆಚರಣೆ ಘಟನೆ ನಡೆಯಬಾರದು: ಹೆಚ್‌ ಸಿ ಮಹದೇವಪ್ಪ

ತರೀಕೆರೆ ತಾಲ್ಲೂಕಿನ ಗೇರಮರಡಿ ಪ್ರದೇಶದಲ್ಲಿ ಜರುಗಿರುವ ಅಸ್ಪೃಶ್ಯತಾ ಆಚರಣೆಯ ಘಟನೆಯು ಎಂದಿನಂತೆಯೇ ಸಂವಿಧಾನ ಮತ್ತು ಸ್ವಾತಂತ್ರ್ಯದ ಆಶಯಗಳಾ ಸಮಾನತೆ ಮತ್ತು ಭ್ರಾತೃತತ್ವದ ಅಂಶಗಳಿಗೆ ವಿರುದ್ಧವಾದ ಸಂಗತಿಯಾಗಿದೆ ಎಂದು ಸಚಿವ ಹೆಚ್‌ ಸಿ ಮಹದೇವಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಶೂಗಳನ್ನೇ ಕೊಂಡುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯನ್ನು ಎದುರಿಸುತ್ತಿರುವ ಬಡ ವರ್ಗದ ಜನರು ಇರುವ ಸಮುದಾಯಗಳಲ್ಲೇ ಶಾಲಾ ಶೂಗಳನ್ನು ಧರಿಸಿ ನಡೆಯುವುದು ಮೈಲಿಗೆಗೆ ಕಾರಣವಾಗುತ್ತದೆ ಎಂಬ ಸಂಗತಿಯು ತಲೆ ತಗ್ಗಿಸುವಂತದ್ದು” ಎಂದಿದ್ದಾರೆ.

“ಇದೇ ರೀತಿಯಲ್ಲಿ ಮೈಸೂರು ತಾಲ್ಲೂಕಿನ ಕೆಂಚಲಗೂಡು ಗ್ರಾಮದ ವ್ಯಾಪ್ತಿಯಲ್ಲೂ ದಲಿತರು ದೇವಸ್ಥಾನ ಪ್ರವೇಶ ಮಾಡುತ್ತಾರೆಂದು ಪ್ರತ್ಯೇಕ ದೇವಸ್ಥಾನ ನಿರ್ಮಾಣ ಮಾಡುವ ಮನಸ್ಥಿತಿಯನ್ನು ಕಂಡೂ ನನ್ನ ಮನಸ್ಸು ಘಾಸಿಗೊಂಡಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಬಾಬಾ ಸಾಹೇಬರು ಹೇಳಿದಂತೆ ನಮ್ಮ ಜನರು ಅದರಲ್ಲೂ ಮುಖ್ಯವಾಗಿ ಯುವಕರು ಮೌಢ್ಯತೆಯಿಂದ ಹೊರಬಂದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಶಿಕ್ಷಣವನ್ನು ಪಡೆದು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುವತ್ತ ಗಮನಹರಿಸಬೇಕು. ಇಲ್ಲದೇ ಹೋದರೆ ಹಲವಾರು ತ್ಯಾಗ ಬಲಿದಾನಗಳಿಂದ ರೂಪುಗೊಂಡ ಸಂವಿಧಾನದ ಆಶಯಗಳು ನಾಶವಾಗುತ್ತವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಯಾವ ಮನುವಾದಿ ಮಾದರಿಯ ಮಾರ್ಗವನ್ನು ನಮ್ಮ ಕೆಳವರ್ಗದ ಜನರು ಹಿಡಿಯಬಾರದೆಂದು ಬಾಬಾ ಸಾಹೇಬರು ಬಯಸಿದ್ದರೋ ಅದೇ ಮಾರ್ಗವನ್ನೇ ಕೆಲವರು ಹಿಡಿದಿರುವುದು ಅತ್ಯಂತ ಶೋಚನೀಯ ಮತ್ತು ಬೇಸರದ ಸಂಗತಿಯಾಗಿದೆ” ಎಂದಿದ್ದಾರೆ.

“ಇನ್ನು ಮುಂದೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಂತಹ ಅಸ್ಪೃಶ್ಯತಾ ಆಚರಣೆ ಘಟನೆಗಳು ತಲೆದೋರದಂತೆ ನಮ್ಮ ಅಧಿಕಾರಿ ವರ್ಗವು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು, ಸರ್ಕಾರವೂ ಈ ಕುರಿತಂತೆ ಅಗತ್ಯವಾದ ಸಂವಿಧಾನಿಮ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದು ಈ ಮೂಲಕ ಅಧಿಕಾರಿಗಳಿಗೆ ಸೂಚಿಸುತ್ತೇನೆ ಮತ್ತು ಸಮಾನ ಸಮಾಜ ನಿರ್ಮಾಣದ ಆಶಯವನ್ನು ವ್ಯಕ್ತಪಡಿಸುತ್ತೇನೆ” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments