ಶಿರಾ ತಾಲೂಕು ಮುದಿಗೆರೆಯ ಅಮೃತ ಮಹಲಾ ಕಾವಲ್ನ 3,025 ಎಕರೆ ಅರಣ್ಯ ಪ್ರದೇಶವನ್ನು ಅರಣ್ಯವಾಗಿ ಉಳಿಸಿ, ಅಭಿವೃದ್ಧಿ ಪಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ವಿಧಾನ ಪರಿಷತ್ತಿನಲ್ಲಿ ಸೋಮವಾರ ಸದಸ್ಯ ಚಿದಾನಂದ್ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಮುದಿಗೆರೆ ಅಮೃತ ಮಹಲ್ ಅನ್ನು ರಾಜ್ಯ ಅರಣ್ಯ ಎಂದು ಅಂದಿನ ಮೈಸೂರು ಮಹಾರಾಜರು 1900ರಲ್ಲಿ ಅಧಿಸೂಚನೆ ಹೊರಡಿಸಿರುತ್ತಾರೆ. ಒಂದು ಬಾರಿ ಅರಣ್ಯ ಎಂದು ಅಧಿಸೂಚನೆ ಆದ ಮೇಲೆ ಅದು ಅರಣ್ಯವಾಗೇ ಇರುತ್ತದೆ. ಅರಣ್ಯ ಭೂಮಿಯನ್ನು ಮಂಜೂರು, ದಾನ ಮಾಡಲು ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ತುಮಕೂರು ಜಿಲ್ಲೆಯಲ್ಲಿ 113123.23 ಹೆಕ್ಟೇರ್ ಅರಣ್ಯ
“ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆ 113123.23 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ಪೈಕಿ 4001 ಪ್ರಕರಣಗಳಲ್ಲಿ 8024.70 ಎಕರೆ ಅರಣ್ಯ ಭೂಮಿ ಒತ್ತುವರಿ ಅಥವಾ ಮಂಜೂರಾತಿ ಆಗಿದೆ. ಒತ್ತುವರಿ ತೆರೆವಿಗೆ 500 ಪ್ರಕರಣ ದಾಖಲಿಸಲಾಗದ್ದು, ತುಮಕೂರು, ಮಧುಗಿರಿ ಮತ್ತು ತಿಪಟೂರು ಉಪ ವಿಭಾಗದಲ್ಲಿ ಈವರೆಗೆ 457.35 ಎಕರೆ ಒತ್ತುವರಿ ತೆರವಿಗೆ ಆದೇಶ ನೀಡಲಾಗಿದೆ, 146.22 ಎಕರೆ ಒತ್ತುವರಿ ತೆರವು ಮಾಡಲಾಗಿದೆ” ಎಂದು ವಿವರಿಸಿದರು.