ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಣೆ ಸಂಬಂಧ ಬಂಧಿತರಾಗಿರುವ ಮಾಣಿಕ್ಯ ನಟಿ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ರನ್ಯಾ ರಾವ್ ಅವರಿಂದ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಇಬ್ಬರು ಮಂತ್ರಿಗಳು ಸೇರಿ ಹಲವು ರಾಜಕಾರಣಿಗಳಿಗೆ ಭೀತಿ ಶುರುವಾಗಿದೆ.
ರನ್ಯಾ ಅವರು ಸಿಕ್ಕಿಬಿದ್ದಿರುವ ಬಹು ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಕಾಣಿಕೆ ಪ್ರಕರಣದಲ್ಲಿ ಹವಾಲ ನಂಟು ಕೂಡ ಬೆಸೆದುಕೊಂಡಿರುವುದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ.
ಹಲವು ಆಯಾಮಗಳಲ್ಲಿ ಸಿಲುಕಿಕೊಂಡಿರುವ ಈ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ತೀವ್ರ ಆಸಕ್ತಿ ವಹಿಸಿ ಪರಿಶೀಲನೆ ನಡೆಸುತ್ತಿವೆ. ಈ ನಡುವೆ ರನ್ಯಾ ಅವರನ್ನು ಗುಪ್ತಚರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿರುವ ಬೆನ್ನಲ್ಲೇ ಆಕೆಯ ಜತೆಗೆ ಸಂಪರ್ಕದಲ್ಲಿದ್ದ ರಾಜಕಾರಣಿಗಳು ನಡುಕ ಉಂಟಾಗಿದೆ.
ರನ್ಯಾ ಜೊತೆ ಸಂಪರ್ಕದಲ್ಲಿದ್ದ ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಮಾಹಿತಿಯನ್ನು ಡಿಆರ್ಐ ಅಧಿಕಾರಿಗಳು ಕಲೆ ಹಾಕಿದ್ದಾರೆ.
ರನ್ಯಾ ವಿಚಾರಣೆಯಲ್ಲಿ ಆಕೆಯ ಸಂಪರ್ಕದಲ್ಲಿರುವವರ ಮಾಹಿತಿ ಪಡೆಯಲಾಗಿದೆ,ಅಲ್ಲದೇ ಆಕೆಯ ಮೊಬೈಲ್ ನಲ್ಲಿ ಹೆಚ್ಚಿನ ಸಂಪರ್ಕವಿರುವವರ ವಿವರ ಪಡೆದು ಅವರುಗಳ ಪಾತ್ರದ ಬಗ್ಗೆ ಡಿಆರ್ಐ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ.
ದುಬೈನಿಂದ ಕೆಜಿ ಗಟ್ಟಲೇ ಚಿನ್ನ ಖರೀದಿಸಲು ಹಣ ಕೊಟ್ಟವರು ಯಾರೆಂದು ರನ್ಯಾ ಅವರು ಈವರೆಗೂ ಬಾಯ್ಬಿಟ್ಟಿಲ್ಲ. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ತನಿಖೆಯ ಆರಂಭದಲ್ಲಿ ಹೇಳಿದ್ದ ರನ್ಯಾ, ಟ್ರ್ಯಾಪ್ ಮಾಡಿದವರು ಯಾರೆಂಬ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಈ ನಡುವೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ಸಿಬಿಐ ಅಧಿಕಾರಿಗಳು ರನ್ಯಾ ಅವರನ್ನು ವಿಚಾರಣೆ ನಡೆಸುವ ಉದ್ದೇಶಕ್ಕೆ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.