Homeಕರ್ನಾಟಕಆಪರೇಷನ್ ಸಿಂಧೂರ | ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ನಾಯಕರ ಪ್ರತಿಕ್ರಿಯೆ ಏನು?

ಆಪರೇಷನ್ ಸಿಂಧೂರ | ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ನಾಯಕರ ಪ್ರತಿಕ್ರಿಯೆ ಏನು?

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಬುಧವಾರ ಮುಂಜಾನೆ ಕ್ಷಿಪಣಿ ದಾಳಿ ನಡೆಸಿದೆ. ಈ ಪ್ರತೀಕಾರದ ದಾಳಿಯ ಬಗ್ಗೆ ರಾಜಕೀಯ ಮುಖಂಡರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪಾಕ್ ಮೇಲೆ ಭಾರತ ನಡೆಸಿರುವ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ವಿಡಿಯೊ ಮತ್ತು ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ, ‘ಭಾರತ್‌ ಮಾತಾ ಕಿ ಜೈ’ ಮತ್ತು ‘ಜೈ ಹಿಂದ್’ ದೇಶಭಕ್ತಿಯ ಘೋಷಣೆಗಳನ್ನು ಪೋಸ್ಟ್ ಮಾಡಿದ್ದಾರೆ.

ಭಾರತೀಯರಿಗೆ ನ್ಯಾಯ ಒದಗಿಸುವ ಪ್ರತಿಜ್ಞೆ: ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಟ್ವೀಟ್‌ ಮಾಡಿದ್ದು, “ಆಪರೇಷನ್ ಸಿಂಧೂರ್ ಹಿಂದಿನ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯಕ್ಕೆ ನಾನು ವಂದಿಸುತ್ತೇನೆ. ಭಾರತದ ಈ ದಿಟ್ಟ ನಿರ್ಧಾರ ಯಾವುದೇ ರೀತಿಯ ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಪುನರುಚ್ಚರಿಸುತ್ತದೆ” ಎಂದಿದ್ದಾರೆ.

“ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ದಾಳಿಯು ಕೇವಲ ಮುಗ್ಧ ಜೀವಗಳ ಮೇಲೆ ಅಲ್ಲ, ಇದು ಭಾರತದ ಕನಸುಗಳು ಮತ್ತು ಚೈತನ್ಯದ ಮೇಲಿನ ದಾಳಿಯಾಗಿದೆ. ನಮ್ಮ ಧೈರ್ಯಶಾಲಿ ಸೈನಿಕರ ಪ್ರತಿಯೊಂದು ಪ್ರಯತ್ನವು ಬಲಿಪಶುಗಳು, ಅವರ ಕುಟುಂಬಗಳು ಮತ್ತು ಶಾಂತಿ ಮತ್ತು ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬ ಭಾರತೀಯರಿಗೂ ನ್ಯಾಯವನ್ನು ಒದಗಿಸುವ ಪ್ರತಿಜ್ಞೆಯಾಗಿದೆ” ಎಂದು ಹೇಳಿದ್ದಾರೆ.

“ಕರ್ನಾಟಕವು ನಮ್ಮ ಪಡೆಗಳೊಂದಿಗೆ ಅಚಲವಾದ ಒಗ್ಗಟ್ಟನ್ನು ವ್ಯಕ್ತಪಡಿಸುವಲ್ಲಿ ರಾಷ್ಟ್ರದೊಂದಿಗೆ ಸೇರುತ್ತದೆ. ನಿಮ್ಮ ಶೌರ್ಯ, ತ್ಯಾಗ ಮತ್ತು ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಭೂಮಿಯಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ” ಎಂದು ತಿಳಿಸಿದ್ದಾರೆ.

“ಪಹಲ್ಗಾಮ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ್ ಸೂಕ್ತ ಪ್ರತ್ಯುತ್ತರ. ನಾವು ಸರ್ಕಾರದೊಂದಿಗೆ, ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ. ಜೈ ಹಿಂದ್” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ತಿಳಿಸಿದ್ದಾರೆ.

“ನಮ್ಮ ನೆಲದಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ. ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾವು ನಮಸ್ಕರಿಸುತ್ತೇವೆ. ಪಹಲ್ಗಾಮ್ ದಾಳಿಯ ನಂತರ, ಭಾರತವನ್ನು ರಕ್ಷಿಸುವ ಪ್ರತಿಯೊಂದು ನಿರ್ಣಾಯಕ ಹೆಜ್ಜೆಗೂ ಕಾಂಗ್ರೆಸ್ ರಾಷ್ಟ್ರದೊಂದಿಗೆ ದೃಢವಾಗಿ ನಿಂತಿದೆ. ಜೈ ಹಿಂದ್” ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಜಮೀರ್ ಅಹಮದ್ ಖಾನ್ ಹೇಳಿದ್ದೇನು?

“ಪಹಲ್ಗಾಮ್ ದಾಳಿಯಲ್ಲಿ ಅಮಾಯಕರ ಜೀವ ಪಡೆದ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್ ‘ ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ” ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.‌

ಈ ಕುರಿತು ಹೇಳಿಕೆ ನೀಡಿರುವ ಅವರು, “ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನ ಕ್ಕೆ ತಕ್ಕ ಪಾಠ. ನಮ್ಮ ತಂಟೆಗೆ ಬಂದರೆ ಉಗ್ರರಿಗೆ ಹಾಗೂ ಪಾಕಿಸ್ತಾನ ಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನೆ ಯಾಗಿದೆ. ‘ನಮ್ಮ ಸೇನೆ ನಮ್ಮ ಹೆಮ್ಮೆ’ ಎಂದು ಹೇಳಿದ್ದಾರೆ.
ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದಕ ಕೃತ್ಯ ಎಸಗುವ ಉಗ್ರಗಾಮಿ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜತೆ ಇದ್ದೇವೆ” ಎಂದು ಹೇಳಿದ್ದಾರೆ.

“ಭಯೋತ್ಪಾದಕರು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಎಸಗಿದ ಹೇಡಿತನದ ಪೈಶಾಚಿಕ ಕೃತ್ಯಕ್ಕೆ ನಮ್ಮ ಹೆಮ್ಮೆಯ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಯೋತ್ಪಾದನೆಯ ಮೂಲೋತ್ಪಾಟನೆಗೆ ಈ ದಿಟ್ಟ ಕ್ರಮ ಮುನ್ನುಡಿಯಾಗಲಿ. ಭಾರತೀಯ ಸೇನೆಯ ಪರಾಕ್ರಮ, ಶೌರ್ಯ, ನಿಖರತೆ ಶ್ಲಾಘನೀಯ. ಭಯೋತ್ಪಾದನೆಯ ವಿರುದ್ಧ, ದೇಶದ ಐಕ್ಯತೆ, ಸಮಗ್ರತೆ, ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದ ಎಲ್ಲ ಕ್ರಮಗಳನ್ನೂ ನಾವು ಬೆಂಬಲಿಸುತ್ತೇವೆ” ಎಂದು ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.

“ಭಾರತದ ದೃಢಸಂಕಲ್ಪವನ್ನು ಕನಿಷ್ಠವಾಗಿ ನೋಡುವವರಿಗೆ ಆಪರೇಷನ್ ಸಿಂಧೂರ್ ಸೂಕ್ತ ಉತ್ತರ. ರಾಷ್ಟ್ರವು ಒಗ್ಗಟ್ಟಿನಿಂದ, ಹೆಮ್ಮೆಯಿಂದ ಮತ್ತು ನಮ್ಮ ಸಶಸ್ತ್ರ ಪಡೆಗಳಿಗೆ ಶಾಶ್ವತವಾಗಿ ಕೃತಜ್ಞರಾಗಿ ನಿಂತಿದೆ. ಜೈ ಹಿಂದ್” ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

ಹಣೆಯ ಮೇಲೆ ಹಚ್ಚಿದ ರಾಷ್ಟ್ರೀಯ ಸಿಂಧೂರ

“ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡಿರುವುದು ಆಪರೇಷನ್ ಸಿಂಧೂರ ಕೇವಲ ದಾಳಿಯಲ್ಲ, ಇದು ಭಾರತದ ಸಾರ್ವಭೌಮತ್ವದ ಸಂಕೇತ. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಿರ್ಭೀತ ನಾಯಕತ್ವಕ್ಕೆ ಧನ್ಯವಾದಗಳು” ಎಂದು ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

“ಆಪರೇಷನ್ ಸಿಂಧೂರ್” ಇದು ಕೇವಲ ಒಂದು ದಾಳಿಯಲ್ಲ, ಇದು ಹಣೆಯ ಮೇಲೆ ಹಚ್ಚಿದ ರಾಷ್ಟ್ರೀಯ ಸಿಂಧೂರ. ಭಾರತ ಹೊಡೆದಾಗ ಜಗತ್ತು ನೋಡುತ್ತದೆ… ಮತ್ತು ಸ್ವಲ್ಪ ನಡುಗುತ್ತದೆ. ನವಭಾರತವು ಎಚ್ಚರಿಸುವುದಷ್ಟೇ ಅಲ್ಲ, ಅದು ತನ್ನ ಕರ್ತವ್ಯ ನಿರ್ವಹಿಸುತ್ತದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಲಿ” ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments