ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ 1.30 ವೇಳೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ.
ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ನಡೆಸಿದ “ಆಪರೇಷನ್ ಸಿಂಧೂರ” ಎಂಬ ಕಾರ್ಯಾಚರಣೆಯು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ನೆಲೆ ಮತ್ತು ಲಾಹೋರ್ ಮತ್ತು ಸಿಯಾಲ್ಕೋಟ್ ಬಳಿಯ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಮರ್ಕಾಜ್ನಂತಹ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿದೆ.
ಈ ದಾಳಿಯು “ಕೇಂದ್ರೀಕೃತ, ವಿವೇಚನೆಯ ಹಾಗೂ ಮತ್ತು ಉಲ್ಬಣವಾಗದಂತಹ” ಕಾರ್ಯಾಚರಣೆ ಎಂದು ಭಾರತದ ಸೇನೆ ಹೇಳಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಲ್ಲ, ಭಾರತವು ನಿಖರ ಗುರಿಗಳ ಆಯ್ಕೆ ಮತ್ತು ದಾಳಿಗಳಲ್ಲಿ ಸಂಯಮವನ್ನು ಪ್ರದರ್ಶಿಸಿದೆ. ಎಲ್ಇಟಿ ಮತ್ತು ಜೆಇಎಂ ಶಿಬಿರಗಳನ್ನು ಹೊಂದಿರುವ ಪಿಒಕೆಯ ಕೋಟಿಲ್ ಮತ್ತು ಮುಜಫರಾಬಾದ್ ಕೂಡ ಗುರಿಯಾಗಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ದಾಳಿಯ ನಂತರ, “ನ್ಯಾಯ ಒದಗಿಸಲಾಗಿದೆ” ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ. ಪಾಕಿಸ್ತಾನವೂ ದಾಳಿಗಳ ಬಗ್ಗೆ ದೃಢಪಡಿಸಿದೆ. ಪಾಕ್ ವಿದೇಶಾಂಗ ಸಚಿವಾಲಯವು ಇದನ್ನು ಅಪ್ರಚೋದಿತ ಯುದ್ಧ ಕೃತ್ಯ ಎಂದಿದೆ. ನಾಗರಿಕರ ಸಾವುನೋವುಗಳು ಸಂಭವಿಸಿವೆ ಎಂದು ಆರೋಪಿಸಿದೆ. ಇದಕ್ಕೆ ಸೂಕ್ತ ಉತ್ತರ ನೀಡುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಮೂರು ಯುದ್ಧ ವಿಮಾನಗಳು ಪತನ
ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ನಾಲ್ಕು ಸ್ಥಳೀಯ ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಹೆಚ್ಚಿನ ಪ್ರವಾಸಿಗರು ಸೇರಿದಂತೆ 26 ಮಂದಿಯ ಹತ್ಯೆ ಮಾಡಲಾದ ಪಹಲ್ಗಾಮ್ ದಾಳಿ ಬಳಿಕ ಭಾರತ ‘ಆಪರೇಷನ್ ಸಿಂಧೂರ’ ಆರಂಭಿಸಿದೆ. ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿದೆ. ಇದಾದ ಕೆಲವೇ ಗಂಟೆಗಳ ನಂತರ ಜಮ್ಮು ಕಾಶ್ಮೀರದಲ್ಲಿ ಮೂರು ಯುದ್ಧ ವಿಮಾನಗಳು ಪತನಗೊಂಡಿವೆ.
ಇನ್ನು ಐದು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರರು ಹೇಳಿಕೊಂಡಿದ್ದಾರೆ. ಆದರೆ ಭಾರತ ಇದನ್ನು ದೃಢಪಡಿಸಿಲ್ಲ. ಪಾಕಿಸ್ತಾನ ಭಾರತದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ನಡುವೆಯೇ ಭಾರತೀಯ ವಾಯುಪಡೆಯು (ಐಎಎಫ್) ಶ್ರೀನಗರ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ಪಡೆದುಕೊಂಡಿದೆ.