Homeಕರ್ನಾಟಕನಿಮ್ಮ ತರಹ ಯಾವುದೇ "ಮಾಫಿಯಾ" ಹಿತಾಸಕ್ತಿ ಕಾಯುವ ಕಮಿಷನ್ ಏಜೆಂಟ್ ನಾನಲ್ಲ: ಡಿಕೆಶಿಗೆ ಆರ್ ಅಶೋಕ್...

ನಿಮ್ಮ ತರಹ ಯಾವುದೇ “ಮಾಫಿಯಾ” ಹಿತಾಸಕ್ತಿ ಕಾಯುವ ಕಮಿಷನ್ ಏಜೆಂಟ್ ನಾನಲ್ಲ: ಡಿಕೆಶಿಗೆ ಆರ್ ಅಶೋಕ್ ಕೌಂಟರ್

ಸಿಎಂ ಡಿ ಕೆ ಶಿವಕುಮಾರ್ ಅವರೇ, ನಾನು ಕಸ ಮಾಫಿಯಾದ ಏಜೆಂಟ್ ಆಗಿಯೇ ಮಾತನಾಡುತ್ತಿದ್ದೇನೆ! ಆದರೆ ನಿಮ್ಮ ತರಹ ಯಾವುದೋ “ಮಾಫಿಯಾ” ಹಿತಾಸಕ್ತಿ ಕಾಯುವ ಕಮಿಷನ್ ಏಜೆಂಟ್ ಆಗಿ ಅಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.

ಆರ್ ಅಶೋಕ್ ಕಸ ಮಾಫಿಯಾದ ಏಜೆಂಟ್ ಎಂದು ಸಿಎಂ ಟೀಕಿಸಿರುವ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಆರ್ ಅಶೋಕ್, “ಕರ್ನಾಟಕದ ಏಳೂವರೆ ಕೋಟಿ ಕನ್ನಡಿಗರ ಹಕ್ಕಿಗಾಗಿ, ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರ ಧ್ವನಿಯಾಗಿ ನಿಂತಿರುವ ಜನತಾ ಏಜೆಂಟ್ ನಾನು. ವಿಪಕ್ಷ ನಾಯಕನಾಗಿ ನಿಮ್ಮ ಲೂಟಿ-ದಂದೆಯನ್ನು ಪ್ರಶ್ನಿಸುವುದು ನನ್ನ ಸಂವಿಧಾನಬದ್ಧ ಕರ್ತವ್ಯ, ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ” ಎಂದಿದ್ದಾರೆ.

“ಹೈಕಮಾಂಡ್ ಬಾಗಿಲಲ್ಲಿ ಕಾಡಿ-ಬೇಡಿ, ಅತ್ತು-ಕರೆದು, ಕೊನೆಗೂ ಸಿಎಂ ಸೀಟು ಗಿಟ್ಟಿಸಿಕೊಂಡಿರುವ ತಮಗೆ ವಿಪಕ್ಷಗಳು ಕನಿಷ್ಠ ‘ಹನಿಮೂನ್ ಪೀರಿಯಡ್’ ಕೂಡ ಕೊಡ್ತಿಲ್ಲವಲ್ಲ ಅನ್ನೋ ಹತಾಶೆ, ಭಯ, ಆತಂಕ ನನಗೆ ಅರ್ಥವಾಗುತ್ತದೆ. ಆದರೆ ನಿಮ್ಮ ಸ್ವಂತ ಪಕ್ಷದ ಶಾಸಕರೇ ದಿನಬೆಳಗಾದರೆ ಮಾಧ್ಯಮಗಳ ಮುಂದೆ ನಿಮ್ಮ ವಿರುದ್ಧ ಅಸಮಾಧಾನದ ಜಾಗಟೆ ಬಾರಿಸುತ್ತಾ, ದೆಹಲಿಗೆ ದಂಡೆತ್ತಿ ಹೋಗುತ್ತಿರುವಾಗ ನಿಮಗೆ ಹನಿಮೂನ್ ಪೀರಿಯಡ್ ಎಲ್ಲಿಂದ ಸಿಗಬೇಕು ಡಿ.ಕೆ.ಶಿವಕುಮಾರ್ ಅವರೇ? ನಿಮ್ಮ ಮನೆಯಲ್ಲೇ ಬೆಂಕಿ ಉರಿಯುತ್ತಿರುವಾಗ ನನ್ನ ಮೇಲೆ ರಾಜಕೀಯ ಗೂಬೆ ಕೂರಿಸಬೇಡಿ” ಎಂದು ತಿವಿದಿದ್ದಾರೆ.

“ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ” ಎಂಬ ನಿಮ್ಮ ಹೇಳಿಕೆ ಶತಮಾನದ ಅತಿ ದೊಡ್ಡ ಹಾಸ್ಯ! ನಿಮ್ಮ ಹಿನ್ನೆಲೆ ಏನು, ನಿಮ್ಮ ‘ಆಡಳಿತ ವೈಖರಿ’ಯ ಅಸಲಿ ಚರಿತ್ರೆ ಏನು, ತಾವು ಕಟ್ಟಿಕೊಂಡಿರುವ “ಪಾರದರ್ಶಕ ಸಾಮ್ರಾಜ್ಯ” ಎಂಥದ್ದು ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ನಿಮ್ಮಿಂದ ಪಾರದರ್ಶಕತೆಯ ಪಾಠ ಕಲಿಯುವ ದೌರ್ಭಾಗ್ಯ ಕನ್ನಡಿಗರಿಗಿಲ್ಲ ಎಂದು ಕುಟುಕಿದ್ದಾರೆ.

ಟೆಂಡರ್ ನಿಯಮಗಳ ಅಕ್ರಮವನ್ನು ಮುಚ್ಚಿಹಾಕಲು ನೀವೇ ಸ್ವತಃ ಉನ್ನತ ಮಟ್ಟದ ಸಮಿತಿ ರಚಿಸಿ, ವರದಿ ನೀಡಲು ಕೊಟ್ಟಿದ್ದ ಒಂದು ವಾರದ ಗಡುವು ಇಂದಿಗೆ ಮುಕ್ತಾಯವಾಗಿದೆ. ತಾಕತ್ತಿದ್ದರೆ, ನಿಮ್ಮಲ್ಲಿ ಕಿಂಚಿತ್ತಾದರೂ ಪಾರದರ್ಶಕತೆ ಉಳಿದಿದ್ದರೆ, ಆ ವರದಿಯನ್ನು ಅಡಗಿಸಿಡದೆ ತಕ್ಷಣ ಬಹಿರಂಗಪಡಿಸಿ! ವರದಿಯನ್ನು ಇಡೀ ರಾಜ್ಯದ ಜನರ ಮುಂದಿಡಿ. ನಿಮ್ಮ “ಅಸಲಿ ಮುಖವಾಡ” ಕಳಚಿ ಬೀಳಲಿ, ಯಾರ ಕಾರ್ಯವೈಖರಿ ಎಂಥದ್ದು ಅಂತ ಜನರೇ ತೀರ್ಮಾನಿಸಲಿ! ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments