ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2025-26ನೇ ಸಾಲಿನ ವಿವಿಧ ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ ದೇವನೂರು ಮಹಾದೇವ ಅವರು ಅತ್ಯುನ್ನತ ‘ಪಂಪ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಬೆಲ್ದಾಳದ ಶ್ರೀ ಸಿದ್ದರಾಮ ಶರಣರಿಗೆ ಪ್ರತಿಷ್ಠಿತ ‘ಬಸವ ರಾಷ್ಟ್ರೀಯ ಪುರಸ್ಕಾರ’, ಕಂಬದಹಳ್ಳಿಯ ಶ್ರೀ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ, ಡಾ. ಸುಕನ್ಯಾ ಮಾರುತಿ ಅವರಿಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಜಿ. ವಿ. ಶಾರದಾಬಿ ಅವರಿಗೆ ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ, ಪ್ರಸನ್ನ ಶಿವಮೊಗ್ಗ ಅವರಿಗೆ ವಿ. ಕಾರಂತ ಪ್ರಶಸ್ತಿ ಸಂದಿದೆ. ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಧಾರವಾಡದ ಸಿದ್ದನಗೌಡ ಪಾಟೀಲ್, ಅಕ್ಕಮಹಾದೇವಿ ಪ್ರಶಸ್ತಿಗೆ ಕೆ. ನೀಲಾಕಾಯಕ, ಯೋಗಿ ಸಿದ್ದರಾಮೇಶ್ವರ ಪ್ರಶಸ್ತಿಗೆ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.
ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಕೋಲಾರದ ಗಂಗಾರಾಮ ಚಂಡಾಳ, ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಅಲ್ಲಾಭಕ್ಷ್ ಮೀರಸಾಹೇಬ ಮಿರ್ಜಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ವಿ. ಹರಿರಾಮ್, ಜಕಣಾಚಾರಿ ಪ್ರಶಸ್ತಿಗೆ ಅಶೋಕ್ ಗುಡಿಗಾರ್, ಕುಮಾರವ್ಯಾಸ ಪ್ರಶಸ್ತಿಗೆ ಗದಗದ ಕಲ್ಲಿನಾಥ ಶಾಸ್ತ್ರಿ ಪ್ರಶಸ್ತಿ ಪಡೆದಿದ್ದಾರೆ. ನಾಟ್ಯರಾಣಿ ಶಾಂತಲಾ ಪ್ರಶಸ್ತಿಗೆ ಪ್ರತಿಭಾ ಪ್ರಹ್ಲಾದ್, ಜಾನಪದ ಶ್ರೀ ಪ್ರಶಸ್ತಿಗೆ ಎಂ. ಮಹದೇವಯ್ಯ ಮತ್ತು ಬಿ. ಲಕ್ಷ್ಮಣ ಭಾಜನರಾಗಿದ್ದಾರೆ.
1990ರ ದಶಕದಲ್ಲಿ ಬರಹಗಾರರ ಕೋಟಾದಡಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸರ್ಕಾರದ ಪ್ರಸ್ತಾಪವನ್ನು ದೇವನೂರ ಮಹಾದೇವ ಅವರು ನಿರಾಕರಿಸಿದ್ದರು. ದೇವನೂರು ಮಹಾದೇವ ಅವರ ‘ಕುಸುಮಬಾಲೆ’ ಕೃತಿಗೆ 1990ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2016ರಲ್ಲಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿ, 2024ರಲ್ಲಿ ತಮಿಳುನಾಡು ಸರ್ಕಾರದಿಂದ ವೈಕಂ ಪ್ರಶಸ್ತಿ ಸಂದಿದ್ದನ್ನು ಇಲ್ಲಿ ಸ್ಮರಿಸಬಹುದು.


