ಸಿಕ್ಕ ಸಿಕ್ಕ ಕಡೆಯಲ್ಲಿ ಲೂಟಿ ಮಾಡುವ ಕಾಂಗ್ರೆಸ್ ಭ್ರಷ್ಟಾಚಾರ ಮಾಡದೆ ಬದುಕುವುದೇ ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಲೂಟಿ ಮಾಡಲು ಸರ್ಕಾರವೇ ಅವಕಾಶ ನೀಡುತ್ತಿದೆ . ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ವಾಲ್ಮೀಕಿ ನಿಗಮದಿಂದ ಆರಂಭವಾಗಿ ಬೆಂಗಳೂರು ರಸ್ತೆ ಗುಂಡಿಗಳನ್ನ ತುಂಬಲು ಲಕ್ಷಾಂತರ ಕೋಟಿವರೆಗೆ ಲೂಟಿ ನಡೆಯುತ್ತಿದೆ. ಕಸದಲ್ಲೀ ಕಂಟ್ರಾಕ್ಟರ್ ಲೂಟಿ ಮಾಡುತ್ತಿದ್ದಾರೆ. ಐವತ್ತು ಕೋಟಿ ಅರವತ್ತು ಕೋಟಿಯನ್ನು ಅವರದೇ ಕಂಪನಿಗಳಿಗೆ ಹಾಕಿಕೊಂಡಿದ್ದಾರೆ. ಲೂಟಿ ಬಗ್ಗೆ ನಾವು ಪ್ರಶ್ನೆ ಮಾಡಿದರೂ ಇವರು ಕೇಳುವುದಿಲ್ಲ ಎಂದು ಹೇಳಿದರು.
ಬೇಲ್ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲ…
ಸಚಿವ ನಾಗೇಂದ್ರ ವಿರುದ್ಧ ಸದನದಲ್ಲಿ ಹೋರಾಟ ಮಾಡುತ್ತಿದ್ದೇವೆ. ನಾಗೇಂದ್ರ ರಾಜೀನಾಮೆ ಕೊಡುವವರೆಗೆ ನಾವು ಹೋರಾಟ ಕೈ ಬಿಡುವುದಿಲ್ಲ. ನಾಗೇಂದ್ರ ಕೈ ಬಿಡಲ್ಲ ಎಂದು ಸರ್ಕಾರ ಹಠಕ್ಕೆ ಬಿದ್ದಿದೆ. ಅವರಿಗೆ ಬೇಲ್ ಸಿಕ್ಕಿದೆ ಅಂತೆ ಬೇಲ್ ಎಂದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲ. ಅವರಿಗೆ ಕ್ಲೀನ್ ಚಿಟ್ ಸಿಕ್ಕಿಲ್ಲ. ಅವರು ಕಾಂಗ್ರೆಸ್ ಅನ್ನು ಬ್ಲಾಕ್ ಮೇಲ್ ಮಾಡಿದ್ದಕ್ಕೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಕಾಂಗ್ರೆಸ್ ನಾಯಕರ ಹೆಸರು ಹೇಳಿಬಿಡ್ತಾರೆ ಎಂದು ಸಚಿವರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಹೋರಾಟದ ಬಿಸಿ ಹೇಗಿದೆ ಎಂದರೆ ಬಿಲದಲ್ಲಿ ಇರುವವರು ಈಗ ಹೊರ ಬಂದಿದ್ದಾರೆ. ಭ್ರಷ್ಟಾಚಾರಿಗಳು ಈಗ ಗಾಂಧಿ ಪ್ರತಿಮೆ ಮುಂದೆ ಬಂದಿದ್ದಾರೆ ಎಂದರು.
ದಲಿತರ ಮೇಲಿನ ದೌರ್ಜನ್ಯ, ಜಾತಿ ನಿಂದನೆ ಹೆಚ್ಚಾಗಿದೆ ದಲಿತರ ರಕ್ಷಣೆಗೆ ಸರ್ಕಾರ ಬಂದಿಲ್ಲ. ದೇವದುರ್ಗ ದಲಿತ ಅನ್ನೋ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ದಲಿತರ ಮೇಲೆ ಅತ್ಯಾಚಾರ ಕೊಲೆಗಳಾಗುತ್ತಿದ್ದರು ಗೃಹ ಇಲಾಖೆ ಕಣ್ಣು ಮುಚ್ಚಿ ಕೂತಿದೆ. ದಲಿತರನ್ನು ರಕ್ಷಿಸದ ಸರ್ಕಾರ ಏನೂ ಮಾಡುತ್ತಿಲ್ಲ. ಗೃಹ ಸಚಿವರು ಬೆಳಗಾದರೆ ಆರ್ ಎಸ್ ಎಸ್ ಸಚಿವರಾಗಿದ್ದಾರೆ ಎಂದು ವ್ಯಂಗವಾಗಿ ಮಾತನಾಡಿದರು.
ಕಾಶಪ್ಪನವರ್ ವಿರುದ್ಧ ಕ್ರಮ ಆಗಬೇಕು
ಬೀದಿ ಕಾಮಣ್ಣನ ರೀತಿ ಆಡಿದ ಸಚಿವ ಕಾಶಪ್ಪನವರ್ ಮೋದಿ ಬಗ್ಗೆ ಮಾತಾಡಿದ್ದಾರೆ. ಮೋದಿ ದೇಶವನ್ನು ಹೊಲಗೇರಿ ಮಾಡಿದ್ದಾರೆ ಎಂದು ಹೀಯಾಳಿಸಿದ್ದಾರೆ. ಅಟ್ರಾಸಿಟಿ ಕೇಸ್ ಆದರೂ ಅವರನ್ನು ಬಂಧಿಸಿಲ್ಲ. ಎಫ್ ಐಆರ್ ಅಗಿಲ್ಲ. ಸದನದಲ್ಲಿ ಸಿಎಂ ಮುಂದೆ ಈ ಕುರಿತು ಪ್ರಸ್ತಾಪ ಮಾಡಿದ್ದೇವೆ. ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಿದ್ದನ್ನು ನಾವು ಖಂಡಿಸುತ್ತೇವೆ. ಈ ಕೆಲಸವನ್ನು ಬಿಜೆಪಿ ಮಾಡಿಲ್ಲ ಎಂದು ಹೇಳಿದರು.
ಬರ ಅಧ್ಯಯನ ಮಾಡಿ ವರದಿ ಕೊಟ್ಟಿದ್ದೇವೆ. ಸರ್ಕಾರಕ್ಕೆ ಅರಿವೆ ಇಲ್ಲ. ಸರ್ಕಾರ ನೆಕ್ಕುವುದೇ ಮಾಡುತ್ತಿದೆ. ಬರ ನಿರ್ವಹಿಸದ ಸರ್ಕಾರ ಮಾತೆತ್ತಿದ್ದರೆ ಬಿಡದಿ ಟೌನ್ ಶಿಪ್ ಬಗ್ಗೆ ಮಾತನಾಡುತ್ತೆ. ಮಾಡೇ ಮಾಡ್ತಿವಿ ಅಂತಾರೆ. ಎಂಜಲನ್ನೇ ತಿನ್ನುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಡಿ ರೈತರ ಹಣ ಲೂಟಿ ಮಾಡಲು ಮುಂದಾಗಿದ್ದಾರೆ ಎಂದರು.
ನಾಗೇಂದ್ರ ವಿಷಯದ ಕುರಿತು ಚರ್ಚೆಗೆ ಬನ್ನಿ ಎಂದು ಸರ್ಕಾರ ಹೇಳುತ್ತಿದೆ. ಭ್ರಷ್ಟಾಚಾರ ಆಗಿದ್ದು ಸರ್ಕಾರ ಹಿಂದೆ ಒಪ್ಪಿಕೊಂಡಿದೆ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಅವರು ಈಗಲೂ ದೋಷಿ. ಮತ್ತೆ ಯಾಕೆ ಸಚಿವರಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಹಗರಣದ ಹಣ ಎಲ್ಲಿ ಹೋಗಿದೆ ಎಂದು ವಿವರ ನೀಡಿದ್ದಾರೆ. ಈ ಕುರಿತು ಚರ್ಚೆ ಬೇಡ. ನಾಗೇಂದ್ರ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಕಲಾಪ ಸರಿಯಾಗಿ ನಡೆಯದೆ ಹಣ ವ್ಯರ್ಥವಾಗುತ್ತಿದೆ. ಸರ್ಕಾರ ಹಠಮಾರಿತನ ಬಿಡಲಿ. ನಾಗೇಂದ್ರ ರಾಜೀನಾಮೆ ನಂತರವೇ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ. ಇದು ಚಿಲ್ಲರೆ ಕಾಂಗ್ರೆಸ್ ಎಂದು ಟೀಕಿಸಿದರು.


