Homeಕರ್ನಾಟಕಮಹದಾಯಿ ಹೋರಾಟಗಾರ ಕುತುಬುದ್ದೀನ್ ಖಾಜಿ ಬಂಧನದ ಹಿಂದೆ ಪ್ರಲ್ಹಾದ್ ಜೋಶಿ ಕೈವಾಡ: ರೈತರ ಆರೋಪ

ಮಹದಾಯಿ ಹೋರಾಟಗಾರ ಕುತುಬುದ್ದೀನ್ ಖಾಜಿ ಬಂಧನದ ಹಿಂದೆ ಪ್ರಲ್ಹಾದ್ ಜೋಶಿ ಕೈವಾಡ: ರೈತರ ಆರೋಪ

ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ಹಾಗೂ ರೈಲ್ವೆ ಹೋರಾಟ ಸಮಿತಿ‌ ಅಧ್ಯಕ್ಷ‌ ಬಾಗಲಕೋಟೆಯ ಕುತುಬುದ್ದೀನ್ ಖಾಜಿ ಅವರ ಬಂಧನ ಖಂಡಿಸಿ ಮಹದಾಯಿ ಹೋರಾಟ ಸಮಿತಿ‌ ಸದಸ್ಯರು ಶುಕ್ರವಾರ ಹುಬ್ಬಳ್ಳಿಯ ರಾಣಿ‌ ಚನ್ನಮ್ಮ‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕುತುಬುದ್ದೀನ್ ಖಾಜಿ ಅವರನ್ನು ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಮಹದಾಯಿ ಹೋರಾಟ ಸಮಿತಿ‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, “ಮಹದಾಯಿ ಯೋಜನೆ ಅನುಷ್ಠಾನಕ್ಕಿರುವ ಕಾನೂನು ತೊಡಕು ಬಗೆಹರಿಸಲಾಗದ‌ ರಾಜ್ಯ ಮತ್ತು ಕೇಂದ್ರ ಸರ್ಕಾರ, ಪ್ರತಿಭಟನೆಯನ್ನು ಹತ್ತಿಕ್ಕಲು ಹೋರಾಟಗಾರರನ್ನು ಬಂಧಿಸುವ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.

“ರೈತ ಹೋರಾಟಗಾರ ಕುತುಬುದ್ದೀನ್ ಖಾಜಿ ಅವರನ್ನು ಬಂಧಿಸಿ ಜೈಲಿಗೆ ಕಳಹಿಸಿರುವುದು ಅತ್ಯಂತ ಖಂಡನೀಯ. ಇದಕ್ಕೆಲ್ಲ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯೇ ಕಾರಣ” ಎಂದು ರೈತ ಸೇನಾ ಕರ್ನಾಟಕ‌ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ಆರೋಪಿಸಿದ್ದಾರೆ.

“ಕೇಂದ್ರ ಸಚಿವರಿಗೆ ಮಹದಾಯಿ ಯೋಜನೆ ಅನುಷ್ಠಾನ ಮಾಡುವ ಆಸಕ್ತಿಗಿಂತ ಹೆಚ್ಚಾಗಿ, ರೈತರನ್ನು ಜೈಲಿಗೆ ಕಳುಹಿಸುವುದರಲ್ಲಿ ಹೆಚ್ಚು ಆಸಕ್ತಿ ಇದ್ದಂತಿದೆ” ಎಂದು ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರಕಟಣೆಯಲ್ಲಿ ಆಕ್ರೋಶ‌ ಹೊರಹಾಕಿದ್ದಾರೆ.

“ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 2016ರಲ್ಲಿ ಸಾಂಕೇತಿಕವಾಗಿ ಹುಬ್ಬಳ್ಳಿಯಲ್ಲಿ ರೈಲು ರೋಖೋ ಚಳವಳಿ ಮಾಡಲಾಗಿತ್ತು. ಆದರೆ, ರೈಲ್ವೆ ಪೊಲೀಸರು ಏಳು, ಎಂಟು ತಾಸು ರೈಲು‌ ಸಂಚಾರ ತಡೆದಿದ್ದಾರೆ ಎಂದು ಸುಳ್ಳು‌ ಪ್ರಕರಣ ದಾಖಲಿಸಿದ್ದರು. ಅದಕ್ಕೆ ಪೂರಕವಾಗಿ ಯಾವ ನೋಟಿಸ್, ವಾರಂಟ್ ಸಹ ನೀಡಿರಲಿಲ್ಲ. ಗುರುವಾರ ಏಕಾಏಕಿ ಕುತುಬುದ್ದೀನ್ ಖಾಜಿ ಅವರನ್ನು ಆರ್.ಪಿ.ಎಫ್. ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿ, ಹುಬ್ಬಳ್ಳಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಈ ನಡೆ ಖಂಡನೀಯವಾಗಿದೆ” ಎಂದು ಸಿದ್ದು ತೇಜಿ ಹೇಳಿದ್ದಾರೆ.

“ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆದು, ಬಂಧನವಾಗಿರುವ ಅಮಾಯಕ ರೈತರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಹೋರಾಟಗಾರರು ಮತ್ತು ಸಮಿತಿಗಳ ಸದಸ್ಯರು ಚುನಾವಣಾ ಪ್ರಚಾರಕ್ಕೆ ಬಂದಾಗ ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments