Homeಕರ್ನಾಟಕಜನಾರ್ದನ ರೆಡ್ಡಿಯಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ಲೂಟಿ: ವಿ ಎಸ್‌ ಉಗ್ರಪ್ಪ

ಜನಾರ್ದನ ರೆಡ್ಡಿಯಿಂದ ಒಂದು ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ಲೂಟಿ: ವಿ ಎಸ್‌ ಉಗ್ರಪ್ಪ

29 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಜನಾರ್ದನ ರೆಡ್ಡಿ ಮತ್ತು ತಂಡ ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಿತ್ತು. ಇದರ ಮೌಲ್ಯ 884 ಕೋಟಿ ಎಂದು ನ್ಯಾಯಾಧೀಶರೇ ಹೇಳಿದ್ದಾರೆ. ಈಗ ಅವರಿಗೆ ಶಿಕ್ಷೆಯಾಗಿದೆ. ಇವರ ಜೊತೆಯಿದ್ದ ಬಿಜೆಪಿ ನಾಯಕರು, ಪ್ರಧಾನಿ ಮೋದಿ ಈ ಬಗ್ಗೆ ಉತ್ತರಿಸಬೇಕು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಗ್ರಹಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ನನ್ನ ವರದಿಯಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ಲೂಟಿಯಾಗಿದೆ ಎಂದು ಹೇಳಿದ್ದೇನೆ. ಅರಿಯರ್ಸ್ ಆಫ್ ಲ್ಯಾಂಡ್ ರೆವಿನ್ಯೂ ಎಂದು ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಲೂಟಿಯನ್ನು ಪರಿಗಣಿಸಿ ಇದರ ಹಿಂದೆ ಇರುವ ಎಲ್ಲರ ಆಸ್ತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಇದರಿಂದ ಲಾಭ ಪಡೆದ ಅಂದಿನ ರಾಜ್ಯ ಸರ್ಕಾರ ಮುನ್ನಡೆಸುತ್ತಿದ್ದವರು, ಅಧಿಕಾರಿಗಳ ವಿರುದ್ದವು ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.

“ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಿಬಿಐ ವಿಶೇಷ ನ್ಯಾಯಲಯ ಜನಾರ್ದನ ರೆಡ್ಡಿ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ನೀಡಿರುವುದು ಇಡೀ ದೇಶಕ್ಕೆ ಹಾಗೂ ಭ್ರಷ್ಟರಿಗೆ ಸ್ಪಷ್ಟ ಸಂದೇಶ ನೀಡಿದಂತಾಗುತ್ತದೆ. ದುರಂಹಕಾರಿ ರಾಜಕಾರಣಿಗಳು ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆ ಅನುಭವಿಸಲೇ ಬೇಕು ಎಂಬುದಕ್ಕೆ ತಕ್ಕ ಉದಾಹರಣೆ” ಎಂದರು.

“2000- 2006 ರಿಂದ ನಡೆದ ಅಕ್ರಮ ಗಣಿಗಾರಿಗೆ ನಡೆದಾಗ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಅಂದು ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಇಟ್ಟುಕೊಂಡು ನಾನು ಸದನದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ದ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದೆ. ಅಂದಿನ ಸರ್ಕಾರ ಜಸ್ಟೀಸ್ ಯು.ಎಲ್.ಭಟ್ ನೇತೃತ್ವದ ತನಿಖಾ ಆಯೋಗ ನೇಮಕ ಮಾಡಿತು. ಈ ಆಯೋಗವು ಸಿಬಿಐ ತನಿಖೆಗೆ ನೀಡಬೇಕು ಎಂದು ಶಿಫಾರಸ್ಸು ಮಾಡಿತು. ನಾವು ತನಿಖೆಗೆ ಒತ್ತಾಯ ಮಾಡಿದಾಗ ಲೋಕಾಯುಕ್ತ ತನಿಖೆಗೆ ನೀಡಲಾಯಿತು. ಈ ಹೋರಾಟದ ಹಿಂದೆ ಇರುವುದು ಕಾಂಗ್ರೆಸ್ ಪಕ್ಷ. ಕೆ.ಸಿ.ಕೊಂಡಯ್ಯ ಮತ್ತು ನಾನು” ಎಂದು ನೆನಪಿಸಿಕೊಂಡರು.

“ಆಂಧ್ರಪ್ರದೇಶದ ಮಲ್ಪನಗುಡಿ, ಕರ್ನಾಟಕದ ತುಮಟಿ, ವಿಠಲಾಪುರ ಮಧ್ಯದ ಸುಮಾರು 32 ಕಿಮೀ ಭೂಭಾಗದಲ್ಲಿರುವ ಉತೃಷ್ಟವಾದ 29 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಜನಾರ್ದನ ರೆಡ್ಡಿ ಮತ್ತು ತಂಡ ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಿತ್ತು. ಅಕ್ರಮ ಗಣಿಗಾರಿಕೆ ಬಗ್ಗೆ ಅತ್ಯಂತ ನಿಖರವಾದ ವರದಿಯನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. ನನ್ನ ನೇತೃತ್ವದ ಸತ್ಯಶೋದನಾ ಸಮಿತಿ 16.11.2008 ರಲ್ಲಿ ಇದನ್ನು ಬಿಡುಗಡೆಗೊಳಿಸಿತ್ತು. ಲೋಕಾಯುಕ್ತದವರು ನನ್ನ ವರದಿಯನ್ನು ಇಟ್ಟುಕೊಂಡು ಪ್ರಾಥಮಿಕ ವರದಿ ನಿಡುತ್ತಾರೆ. ಕಾಂಗ್ರೆಸ್ ಪಕ್ಷ ರಿಪಬ್ಲಿಕ್ ಬಳ್ಳಾರಿಯ ವಿರುದ್ದ ಪಾದಯಾತ್ರೆ ನಡೆಸಿ ದೊಡ್ಡ ಹೋರಾಟ ಮಾಡಿತ್ತು” ಎಂದು ಸ್ಮರಿಸಿದರು.

“ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾತನಾಡುವಾಗ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿದ್ದರು. ಈ ಅಕ್ರಮ ಗಣಿಗಾರಿಕೆ ಹಿಂದೆ ಇದ್ದಿದ್ದೆ ಅಂದಿನ ರಾಜ್ಯ ಸರ್ಕಾರ. ಅಂದು ಶ್ರೀರಾಮುಲು ಅವರು ಅರಣ್ಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರ ಬಗ್ಗೆ ದೂರು ದಾಖಲಾಗಿತ್ತು. ಅಂದು ಅಧಿಕಾರದಲ್ಲಿ ಇದ್ದುಕೊಂಡೆ ಅನ್ಯಾಯ ಎಸಗಿದವರಿಗೆ ಇಂದು ತಕ್ಕ ಶಿಕ್ಷೆಯಾಗಿದೆ. ನಾನು ತಯಾರು ಮಾಡಿದ ಸತ್ಯಶೋಧನಾ ವರದಿಯಲ್ಲಿ ಜರ್ನಾರ್ಧನ ರೆಡ್ಡಿ ಮತ್ತು ತಂಡದ ಸಂಪೂರ್ಣ ಅಕ್ರಮ, ಅನ್ಯಾಯಗಳನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟಿದ್ದೇನೆ. ಬ್ರಿಟಿಷರ ಕಾಲದಲ್ಲಿ ಇದ್ದಂತಹ ಗಡಿ ಗುರುತು ಕಲ್ಲುಗಳನ್ನು ಸಹ ಇವರು ಸ್ಪೋಟಿಸಿದ್ದರು” ಎಂದು ದೂರಿದರು.

ಭಾರತ ದಾಳಿಗೆ ಸ್ವಾಗತ

“ಏ.22 ರಂದು ಪಹಲ್ಗಾಮ್ ಉಗ್ರ ದಾಳಿಯಲ್ಲಿ ರಾಜ್ಯದ 3 ಜನ ನಾಗರಿಕರು ಒಟ್ಟು ದೇಶದ 26 ಮಂದಿಯನ್ನು ಕೊಂದ ನಂತರ ನಮ್ಮ ದೇಶದ ಸೈನಿಕರು ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ಮಾಡಿ ನಾಶ ಪಡಿಸಿದ್ದಾರೆ. ಪಾಕಿಸ್ತಾನ ನಮ್ಮ ಶತ್ರು ದೇಶ. ದಾಳಿ ಮಾಡಿ ಬುದ್ಧಿ ಕಲಿಸುವ ಕೆಲಸ ಮಾಡಲಾಗಿದೆ. ಇದು ಸ್ವಾಗತಾರ್ಹ ವಿಚಾರ” ಎಂದರು.

“ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆಗೆ ಬುದ್ಧಿ ಕಲಿಸಲಾಗಿದೆ. ಕಾಂಗ್ರೆಸ್ ಪಕ್ಷ ಈ ದೇಶದ ರಕ್ಷಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ರೀತಿಯ ನಿರ್ಧಾರಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ. ಈ ನಿರ್ಧಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರು ಬೆಂಬಲಿಸಿದ್ದಾರೆ” ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಯುದ್ಧ ಬೇಡ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಹೀಗಾಗಲೇ ಅವರು ಸ್ಪಷ್ಟನೆ ನೀಡಿದ್ದಾರೆ. ಸರ್ವಪಕ್ಷಗಳ ಸಭೆ ಕರೆದಾಗ ಯಾವುದೇ ಷರತ್ತುಗಳು ಇಲ್ಲದೇ ವಿರೋಧ ಪಕ್ಷದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶ ರಕ್ಷಣೆಯ ದೃಷ್ಟಿಯಿಂದ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳಿಗೆ ಕಾಂಗ್ರೆಸ್ ಬದ್ಧವಾಗಿದೆ. ದೇಶ ಮುಖ್ಯ, ನಂತರ ರಾಜಕೀಯ ವಿಚಾರಗಳು. ಇಂದಿರಾಗಾಂಧಿ ಅವರು, ರಾಜೀವ್ ಗಾಂಧಿ ಅವರ ಬಲಿದಾನ ಈ ದೇಶಕ್ಕಾಗಿ ನಡೆದಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments