ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಸುಮಾರು 400 ಕೋಟಿಯ ಭ್ರಷ್ಟಾಚಾರ ನಡೆದಿದ್ದು, ಇದರ ಸಿಬಿಐ ತನಿಖೆ ಮಾಡಿಸಿ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಇಂದು ಅವರು ಕೆಪಿಎಸ್ಸಿ ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಭ್ರಷ್ಟಾಚಾರ ಭ್ರಷ್ಟಾಚಾರವೇ; ಯಾರ ಅವಧಿಯಲ್ಲಿ ನೇಮಕಾತಿ ಆಗಿದೆ ಎಂಬುದು ಪರಿಗಣನೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸದನದಲ್ಲಿ ಸಮಗ್ರ ಚರ್ಚೆ
ರಾಜ್ಯ ಸರಕಾರ ಸಿಬಿಐ ತನಿಖೆಗೆ ಕೊಡಲು ಯಾಕೆ ಮೀನಮೇಷ ಎಣಿಸುತ್ತಿದೆ ಎಂದು ಪ್ರಶ್ನಿಸಿದರು. ಪಶುವೈದ್ಯಾಧಿಕಾರಿಗಳ ನೇಮಕದ 400 ಕೋಟಿ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಮತ್ತು ಸರಕಾರಕ್ಕೆ ಎಷ್ಟು ಪಾಲು ಬಂದಿದೆ ಎಂದು ಕೇಳಿದರು. ಹಾಗಾಗಿ ವಿದ್ಯಾರ್ಥಿ ಜೀವನದ ಜೊತೆ ಚೆಲ್ಲಾಟ ಆಡಬೇಡಿ; ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಕಲು ಕೆಪಿಎಸ್ಸಿಯಲ್ಲಿ ಸುಧಾರಣೆ ತರಬೇಕಾಗುತ್ತದೆ. ಸದನದಲ್ಲಿ ಸಮಗ್ರ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮೂಲೆಮೂಲೆಗಳಿಂದ ಯುವಜನರು ಇಲ್ಲಿ ಹೋರಾಟ ಆರಂಭಿಸಿದ್ದಾರೆ. ಕೆಪಿಎಸ್ಸಿಯಲ್ಲಿ ನಡೆದ ಹಗರಣ ಆಗಿದೆ. 400 ಕೋಟಿಯ ಹಗರಣ ಇದಾಗಿದೆ. ಇಷ್ಟು ದೊಡ್ಡ ಹಗರಣದ ತನಿಖೆಯನ್ನು ಆಂತರಿಕ ಸಮಿತಿಗೆ ನೀಡಲು ಹೇಗೆ ಸಾಧ್ಯ ಎಂದು ಕೇಳಿದರು. ಬೇಲಿಯೇ ಎದ್ದು ಹೊಲ ಮೇಯ್ದಾಗ ಆಂತರಿಕ ತನಿಖೆಯಿಂದ ನ್ಯಾಯ ಸಿಗಲಾರದು ಎಂದು ತಿಳಿಸಿದರು.
ಯುವಜನರ ಜೀವನದ ಜೊತೆ ಚೆಲ್ಲಾಟ
ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ನೀಡುವುದಾಗಿ ಹೇಳಿ ಯಾವುದೇ ನೇಮಕಾತಿ ಮಾಡದೇ ಯುವಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಟೀಕಿಸಿದರು. ಇದಕ್ಕೆ ಸರಕಾರ, ಮುಖ್ಯಮಂತ್ರಿಗಳು ಉತ್ತರ ಕೊಡಬೇಕೆಂದು ಒತ್ತಾಯಿಸಿದರು. ಈ ಸಮಸ್ಯೆ ಕುರಿತು ಸದನದಲ್ಲೂ ಚರ್ಚಿಸಲಿದ್ದೇವೆ ಎಂದು ತಿಳಿಸಿದರು. ಇಡೀ ದೇಶದಲ್ಲಿ ಇಲ್ಲದ ಪರೀಕ್ಷಾ ಪದ್ಧತಿಯನ್ನು ಇಲ್ಲಿ ಜಾರಿಗೊಳಿಸುತ್ತಿರುವುದು ಯಾಕೆ? ಇವರು ಕಮಾಯಿ ದೃಷ್ಟಿಯಿಂದ ಭ್ರಷ್ಟಾಚಾರಕ್ಕಾಗಿ ಇದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.


