ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಯೋಜನೆಯಾದ “ಭೂ ಗ್ಯಾರಂಟಿ” ಯೋಜನೆಯಡಿ ಆಯೋಜಿಸಲಾಗಿರುವ “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನಕ್ಕೆ ಇಂದು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಬೆಂಗಳೂರು ನಗರದ ಭೂ ಮಾಲೀಕರಿಗೆ ಸುಲಭ, ಪಾರದರ್ಶಕ ಹಾಗೂ ನಾಗರಿಕ ಸ್ನೇಹಿ ಕಂದಾಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ವಿಶೇಷ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಯಿತು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ 12 ಕೇಂದ್ರಗಳಲ್ಲಿ ಅಭಿಯಾನ ನಡೆಯುತ್ತಿದ್ದು, ಇ-ಖಾತಾ, ಹೊಸ ಖಾತಾ, ಬಿ ಖಾತಾದಿಂದ ಎ ಖಾತಾ ಪರಿವರ್ತನೆ, ಖಾತಾ ತಿದ್ದುಪಡಿ, ಖಾತಾ ಅಮಾನ್ಯೀಕರಣ, ಆಸ್ತಿ ತೆರಿಗೆ ಸಂಬಂಧಿತ ಸೇವೆಗಳು ಹಾಗೂ ಬಾಕಿ ಇರುವ ಸಾರ್ವಜನಿಕ ಅಹವಾಲುಗಳ ವಿಲೇವಾರಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ನಗರ ಪಾಲಿಕೆಯ ಆಯುಕ್ತರು ಖುದ್ದು ಪರಿಶೀಲನೆ
ಸರ್ವಜ್ಞನಗರ ವಿಭಾಗದ ಮಾರುತಿ ಸೇವಾನಗರ ವ್ಯಾಪ್ತಿಯ ಸೀತಾರಾಮ ಕಲ್ಯಾಣ ಮಂಟಪ ಹಾಗೂ ವಿವಿದೆಡೆ ನಗರ ಪಾಲಿಕೆಯ ಆಯುಕ್ತರು ಖುದ್ದು ಭೇಟಿ ನೀಡಿ ಕಾರ್ಯಪ್ರಗತಿ ಪರಿಶೀಲನೆ ನಡೆಸಿದರು.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ವಿಶೇಷ ಅವಕಾಶ
ಭೂ ಗ್ಯಾರಂಟಿ ಯೋಜನೆಯಡಿ ಮಾರ್ಗಸೂಚಿ ಮೌಲ್ಯದ ಶೇ.5ರ ಬದಲಿಗೆ ಕೇವಲ ಶೇ.2ರಷ್ಟು ಶುಲ್ಕ ಪಾವತಿಸಿ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಈ ವಿಶೇಷ ಸೌಲಭ್ಯವು 100 ದಿನಗಳವರೆಗೆ ಲಭ್ಯವಿರಲಿದೆ.
ಅಭಿಯಾನ ಕೇಂದ್ರಗಳಲ್ಲಿ ನಾಗರಿಕರಿಗೆ ಸಹಾಯ ಕೇಂದ್ರಗಳು, ವಿಶೇಷ ಕೌಂಟರ್ಗಳು, ಆಸನ ವ್ಯವಸ್ಥೆ, ಇಂಟರ್ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್ಗಳು, ಸ್ಕ್ಯಾನರ್, ಪ್ರಿಂಟರ್ ಹಾಗೂ ಪಾವತಿ ನೆರವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅರ್ಜಿದಾರರಿಗೆ ಸ್ಥಳದಲ್ಲಿಯೇ ಮಾರ್ಗದರ್ಶನ ಹಾಗೂ ದಾಖಲೆ ಪರಿಶೀಲನೆ ನಡೆಸಿ ತ್ವರಿತ ಸೇವೆ ಒದಗಿಸಲಾಗುತ್ತಿದೆ.
ಸಹಾಯಕ ಕಂದಾಯ ಅಧಿಕಾರಿಗಳು (AROs), ಕಂದಾಯ ನಿರೀಕ್ಷಕರು (RIs), ತಾಂತ್ರಿಕ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಅಭಿಯಾನ ಕೇಂದ್ರಗಳು
1. ಕೊಡಿಗೆಹಳ್ಳಿ – ಸರ್ಕಾರಿ ಪ್ರಾಥಮಿಕ ಶಾಲೆ, ಅಮೃತಹಳ್ಳಿ ಮುಖ್ಯರಸ್ತೆ, ಬ್ಯಾಟರಾಯನಪುರ
2. ವಿದ್ಯಾರಣ್ಯಪುರ – ಬಿಬಿಎಂಪಿ ಸಮುದಾಯಭವನ ಕಟ್ಟಡ, ಎಚ್ಎಂಟಿ ಲೇಔಟ್
3. ಪುಲಿಕೇಶಿನಗರ – ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ
4. ಕೆ.ಜಿ. ಹಳ್ಳಿ – ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ
5. ಮಾರುತಿಸೇವಾನಗರ – ಸೀತಾರಾಮ ಕಲ್ಯಾಣ ಮಂಟಪ, ಬಾಣಸವಾಡಿ ಮುಖ್ಯರಸ್ತೆ
6. ಎಚ್.ಬಿ.ಆರ್. ಲೇಔಟ್ – ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಶಾಲೆ
7. ದಾಸರಹಳ್ಳಿ – ಸೌಂದರ್ಯ ಶಾಲೆ ಹಾಗೂ ಕಾಂಪೋಸಿಟ್ ಪಿಯು ಕಾಲೇಜು
8. ಯಶವಂತಪುರ – ಸೌಂದರ್ಯ ಶಾಲೆ ಹಾಗೂ ಕಾಂಪೋಸಿಟ್ ಪಿಯು ಕಾಲೇಜು
9. ಶೆಟ್ಟಿಹಳ್ಳಿ – ಆರ್ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಮೇಡರಹಳ್ಳಿ
10. ಹೆಬ್ಬಾಳ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು
11. ಜೆ.ಸಿ.ನಗರ – ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಆರ್.ಟಿ.ನಗರ
12. ಯಲಹಂಕ – ಮಿನಿ ವಿಧಾನಸೌಧ, ಯಲಹಂಕ ನ್ಯೂ ಟೌನ್
ಪ್ರತಿ ಶನಿವಾರವೂ ಈ ಅಭಿಯಾನ ಮುಂದುವರಿಯಲಿದ್ದು, ನಾಗರಿಕರು ತಮ್ಮ ಆಸ್ತಿ ದಾಖಲೆಗಳು, ಗುರುತಿನ ಚೀಟಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಕೇಂದ್ರಗಳಿಗೆ ಭೇಟಿ ನೀಡಿ ಸೇವೆ ಪಡೆಯುವಂತೆ ಕೋರಲಾಗಿದೆ.


