ಕೊಡಗಿನ ಹೋಮ್ಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಪೊಲೀಸರಿಗೆ ಗೊತ್ತಾದ ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೋಮ್ಸ್ಟೇಮ್ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಅದರ ಪ್ರಕಾರ ಹೋಮ್ಸ್ಟೇ ಮಾಲೀಕರು ನಡೆದುಕೊಳ್ಳಬೇಕು. ಯಾರು ಹೋಮ್ಸ್ಟೇ ನಡೆಸುತ್ತಾರೆ, ಲೈಸೆನ್ಸ್ ಇದಿಯೇ? ಹೋಮ್ಸ್ಟೇ ಮಾಡಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಎಸ್ಒಪಿ ಕೊಟ್ಟಿರುತ್ತೇವೆ.
ಅದನ್ನು ಮೀರಿ ಘಟನೆಗಳಾದಾಗ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕೊಡಗಿನಲ್ಲಿ ನಡೆದ ಘಟನೆಯ ಬಗ್ಗೆ ಗೊತ್ತಾದ ತಕ್ಷಣ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಇಂತಹ ಘಟನೆಗಳಿಂದ ರಾಜ್ಯಕ್ಕಾಗಲಿ ಅಥವಾ ಸಮಾಜಕ್ಕಾಗಲಿ ಒಳ್ಳೆಯ ಸಂದೇಶ ಕೊಡುವುದಿಲ್ಲ. ಹೊರಗಿನಿಂದ ಬಂದವರ ಮೇಲೆ ಇತರ ಆದಾಗ ಏನು ಸಂದೇಶ ಹೋಗುತ್ತೆ. ನಮ್ಮ ಸಮಾಜ, ದೇಶದ ಬಗ್ಗೆ ಹೊರಗಡೆ ಯಾವ ರೀತಿಯ ಸಂದೇಶ ಹೋಗುತ್ತದೆ. ಈ ವಿಚಾರದಲ್ಲಿ ಕಠಿಣವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಘಟನೆ ಆದ ಬಳಿಕ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಅನ್ನಿಸುತ್ತದೆ. ಪೊಲೀಸರಿಗೆ ಗೊತ್ತಾದ ತಕ್ಷಣ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಜಾರ್ಖಂಡ್ ಮೂಲದವನು ಎಂದು ಹೇಳಲಾಗುತ್ತಿದೆ. ಪರಿಶೀಲನೆ ಮಾಡುತ್ತಾರೆ ಎಂದು ಹೇಳಿದರು.
ಬೆಟ್ಟಿಂಗ್ ಕುರಿತಂತೆ ಕೋರ್ಟ್ ಆದೇಶದ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಕಬ್ಬಡಿ ಆಟ ನಡೆಯುವಾಗ ಹಳ್ಳಿಯಲ್ಲಿ ಎಲ್ಲರು ಮಾತಾಡುವ ಹಾಗೆ ನಾನು ಹೇಳಿದ್ದೇನೆ. ಕಾನೂನು ದೃಷ್ಟಿಯಿಂದ ಅದು ತಪ್ಪು. ಆದರೆ ನಾನು ಯಾವ ರೀತಿ ಹೇಳಿದ್ದೇನೆ ಎನ್ನುವುದು ಮುಖ್ಯವಾಗುತ್ತದೆ. ನಾನೇನಾದರೂ ಬೆಟ್ಟಿಂಗ್ ಪ್ರಮೋಟ್ ಮಾಡಿ ಎಂದು ಹೇಳಿದ್ದರೆ ಸರಿಯಲ್ಲ. ನಾನು ಒಬ್ಬ ಜವಾಬ್ದಾರಿ ಸ್ಥಾನದವನಾಗಿ, ಪ್ರಮೋಟ್ ಮಾಡ್ತೇನೆ ಎಂದರೆ ಶುದ್ದ ಸುಳ್ಳು. ಅರ್ಥೈಸಿಕೊಳ್ಳುವುದರ ಮೇಲೆ ಹೋಗುತ್ತದೆ.
ತಮಾಷೆನೂ ಮಾಡುವಂತಿಲ್ಲ ಎಂಬಂತಾಗಿದೆ. ನಾನು ಕಾನೂನನ್ನು ಗೌರವಿಸುವವನು. ಕಾನೂನು ರಕ್ಷಣೆ ಮಾಡುವ ಖಾತೆ ನಿಭಾಯಿಸುತ್ತಿದ್ದೇನೆ. ನಾನು ಕಾನೂನಿಗೆ ಗೌರವ ಕೊಡಬೇಕಲ್ಲವೇ? ಕಾನೂನು ಏನು ಕ್ರಮ ತೆಗೆದುಕೊಳ್ಳುತ್ತದೆ, ಅದಕ್ಕೆ ಬಿಟ್ಟಿದ್ದೇನೆ ಎಂದರು.
ಕೋರ್ಟ್ನಿಂದ ನೋಟಿಸ್ ಕೊಟ್ಟಿರಲಿಲ್ಲ. ನೋಟಿಸ್ ಬಂದಿದ್ದರೆ ಅರ್ಥೈಸಲಾಗುತ್ತಿತ್ತು. ಗಂಭಿರವಾಗಿ ಪರಿಗಣಿಸಬೇಡಿ ಎಂದು ಮನವರಿಕೆ ಮಾಡಲಾಗುತ್ತಿತ್ತು. ನೋಟಿಸ್ ಬಂದಿಲ್ಲ. ಏಕಾಏಕಿಯಾಗಿ ಆದೇಶ ಮಾಡಿದ್ದಾರೆ. ಕಾನೂನಿಗೆ ಗೌರವ ಕೊಡಬೇಕು, ಗೌರವಿಸುತ್ತೇನೆ ಎಂದು ಹೇಳಿದರು.
ಸಚಿವ ಸಂಪುಟ ಪುನರ್ ರಚನೆ ವಿಚಾರ ಮುಖ್ಯಮಂತ್ರಿಗಳಿಗೆ ಮತ್ತು ಹೈಕಮಾಂಡ್ಗೆ ಬಿಟ್ಟಿರುವುದು. ನಾವು ಹೇಳಿದರೆ ಅಪ್ರಸ್ತುತವಾಗುತ್ತದೆ ಎಂದರು.


