ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತರಾದ ಎನ್. ಉದಯಕುಮಾರ್ ಅವರಿಗೆ ಲಭಿಸಿದೆ. ಪ್ರಶಸ್ತಿ 15 ಸಾವಿರ ರೂ. ನಗದು ಹಾಗೂ ಫಲಕ ಹೊಂದಿದೆ.
ಉದಯಕುಮಾರ್ ಅವರು ಮೂಲತಃ ಚಿಂತಾಮಣಿ ತಾಲೂಕಿನ ಆಂಧ್ರ ಗಡಿಗೆ ತಾಗಿಕೊಂಡಿರುವ ಅಂಕಾಲಮಡುಗು ಗ್ರಾಮದವರು. ಸಂಪೂರ್ಣ ತೆಲುಗು ಪರಿಸರದ ಗ್ರಾಮ. ಸರ್ಕಾರಿ ಶಾಲೆಯಲ್ಲಿ ಕನ್ನಡ ಕಲಿಕೆ. ಬೆಂಗಳೂರು ವಿವಿಯಲ್ಲಿ ಎಂಎಸ್ಡಬ್ಲ್ಯು ಮತ್ತು ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.
1992 ರಲ್ಲಿ ಪ್ರಜಾವಾಣಿ ವರದಿಗಾರರಾಗಿ ಬೆಳಗಾವಿಯಲ್ಲೂ ಹಲವು ವರ್ಷ ಸೇವೆಸಲ್ಲಿಸಿ ಬೆಂಗಳೂರಿಗೆ ಆಗಮನ. ‘ಮಯೂರ’ದಲ್ಲೂ ಸೇವೆ. ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕ ಹುದ್ದೆಗೆ ತಲುಪುವವರೆಗೆ ವಿವಿಧ ವಿಭಾಗಗಳಲ್ಲಿ ಸೇವೆ. 33 ವರ್ಷ ಕಳೆದದ್ದು ತಿಳಿಯಲೇ ಇಲ್ಲ. ಜೂನ್ 2025 ರಂದು ವೃತ್ತಿಗೆ ವಿರಾಮ. ಈಗ ಪತ್ನಿ ಸುನೀತಾ, ಮಗಳು ಅನನ್ಯ, ಅಳಿಯ ನವೀನ್ ಕುಮಾರ್, ಮೊಮ್ಮಗ ಆರಿವ್ ಅವರೊಂದಿಗೆ ಸುಖ ಸಂಸಾರ. ಸದಾ ನಗುಮುಖದ ಉದಯಕುಮಾರ್ ಸದ್ದುಗದ್ದಲವಿಲ್ಲದ ಕರ್ಮಯೋಗಿ. ಇವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ. ಕ
ಕಳೆದ ವರ್ಷ ಮೈಸೂರಿನ ಡಾ. ಕೂಡ್ಲಿ ಗುರುರಾಜ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು ಎಂದು ಟ್ರಸ್ಟ್ ಪರವಾಗಿ ಪತ್ರಕರ್ತ ಎಚ್.ಆರ್. ಶ್ರೀಶ ತಿಳಿಸಿದ್ದಾರೆ.


