ನನ್ನ ಸೋಲಿಗೆ ಕಾರಣ ಯಾರು ಎಂಬುದು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಗೊತ್ತಿದೆ. ಅವರ ಮೇಲೆ ಶೀಘ್ರ ಕ್ರಮ ಆಗದಿದ್ದರೆ ನಾನು ಸಿಡಿದೇಳುವುದು ಖಚಿತ ಎಂದು ಮಾಜಿ ಸಚಿವ ವಿ ಸೋಮಣ್ಣ ಎಚ್ಚರಿಕೆ ನೀಡಿದರು.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಲೋಕಸಭೆ ಚುನಾವಣೆ ಇರುವುದರಿಂದ ಕೆಲ ವಿಚಾರ ಮಾತನಾಡಲ್ಲ. ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು, ಎಲ್ಲ ಸರಿಪಡಿಸುವುದು, ಬಿಡುವುದು ಅವರಿಗೆ ಬಿಟ್ಟಿದ್ದು” ಎಂದು ಹೇಳಿದರು.
“ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಇನ್ನೂ ಯುವಕ. ಅವನು ಬೆಳೆಯಬೇಕು, ರಾಜ್ಯದಲ್ಲಿ ದೊಡ್ಡ ನಾಯಕರು ಅಂತ ಇದ್ದಾರೆ. ಸೋಲಿಗೆ ಕಾರಣರಾದ ಮನೆಹಾಳರನ್ನು ಜೊತೆಯಲ್ಲಿ ಇಟ್ಟುಕೊಳ್ಳಬಾರದು. ಇದರ ಮೇಲೆ ಅವರಿಗೇ ಅಂಟಿಕೊಂಡು ಹೋಗುತ್ತಾನೆ ಅಂದರೇ ನಾನು ಬೇರೆ ಮಾತಾಡಬೇಕಾಗುತ್ತದೆ” ಎಂದು ತಿಳಿಸಿದರು.
ಆರ್ ಅಶೋಕ್ ಜೊತೆ ಸಣ್ಣ ಭಿನ್ನಾಭಿಪ್ರಾಯ ಸಹ ಇಲ್ಲ. ಅವರು ನನ್ನ ಭೇಟಿಗೆ ಪ್ರಯತ್ನ ಮಾಡಿದ್ದರು. ನಾನು ಮತ್ತು ಅಶೋಕ್ ಸ್ನೇಹಿತರು. ಅಶೋಕ್ ಮೊದಲು ಶಾಸಕನಾದಾಗ ನಾನು ಮಂತ್ರಿಯಾಗಿದ್ದೆ. ವಿಪಕ್ಷ ನಾಯಕ ಅಶೋಕ್ ನನಗಿಂತ 14 ವರ್ಷ ಚಿಕ್ಕವರು. ಅಶೋಕ್ ಮೇಲೆ ನನಗೆ ಪ್ರೀತಿ, ವಿಶ್ವಾಸ ಇದೆ. ನಮ್ಮವರಿಂದಲೇ ನೋವಾದಾಗ ನನ್ನ ಭಾವನೆ ಹೇಳಿಕೊಂಡಿದ್ದೇನೆ. ಸಂಕ್ರಾಂತಿ ಬಳಿಕ ಎಲ್ಲವೂ ಸುಖಾಂತ್ಯವಾಗಬೇಕು” ಎಂದು ಹೇಳಿದರು.
“ನಮ್ಮಂತಹವರ ಮೇಲೆ ಗದಾಪ್ರಹಾರ ಆದರೆ ಪರಿಣಾಮ ಬೇರೆಯೇ ಇರುತ್ತದೆ. ಎಷ್ಟರ ಮಟ್ಟಿಗೆ ಪರಿಣಾಮ ಆಗುತ್ತದೆ ಅಂತಾ ಯೋಚನೆ ಮಾಡಬೇಕು. ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಹಿಂದಿನದ್ದೇ ನಡೆಸಿಕೊಂಡು ಹೋಗುತ್ತೇನೆ ಎಂಬುದನ್ನು ಬಿಡಬೇಕು” ಎಂದರು.