ಕಾರ್ಮಿಕರ ಕನಿಷ್ಠ ವೇತನವನ್ನು 60% ಏರಿಕೆ ಮಾಡಿ ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ನಾಡಿನ ಶ್ರಮಿಕರ ಬಹು ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
“ಈ ಅಧಿಸೂಚನೆಯು ರಾಜ್ಯದ ಅಸಂಘಟಿತ ವಲಯ ಹಾಗೂ ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ. ಕನಿಷ್ಠ ವೇತನ ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ನ ಘನ ನ್ಯಾಯ ಪೀಠದ ನಿರ್ದೇಶನವನ್ನು ಪಾಲಿಸಿ, ಈ ಪರಿಷ್ಕರಣೆ ಮಾಡಲಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ಈ ಮೊದಲಿದ್ದ ನಾಲ್ಕು ವಲಯಗಳ ವರ್ಗೀಕರಣದ ಬದಲಾಗಿ ಇದೇ ಮೊದಲ ಬಾರಿಗೆ ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ. ಒಟ್ಟಿನಲ್ಲಿ ನಾಡಿನ 81 ಅನುಸೂಚಿತ ಉದ್ಯೋಗಗಳಲ್ಲಿ ದುಡಿಯುವ ಲಕ್ಷಾಂತರ ಶ್ರಮಿಕರ ಬಾಳಿಗೆ ಈ ಪರಿಷ್ಕೃತ ವೇತನ ಹೊಸ ಭರವಸೆ ತುಂಬಲಿದೆ” ಎಂದಿದ್ದಾರೆ.
“ನಮ್ಮ ಕಾರ್ಮಿಕ ಇಲಾಖೆಯ ಇಂತಹ ದಿಟ್ಟ ನಿರ್ಧಾರಕ್ಕೆ ಸಲಹೆ ಸೂಚನೆಗಳನ್ನು ನೀಡಿ, ಪ್ರೋತ್ಸಾಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ಅಮೂಲ್ಯ ಸಲಹೆಗಳನ್ನು ನೀಡಿದ ಎಲ್ಲ ತಜ್ಞರಿಗೆ ಸಮಸ್ತ ಶ್ರಮಿಕ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು” ಎಂದು ತಿಳಿಸಿದ್ದಾರೆ.


