7000 ಸಫಾಯಿ ಕರ್ಮಚಾರಿಗಳಿಗೆ ವಸತಿ ಮತ್ತು ಬದುಕು ಕಲ್ಪಿಸುವೆಡೆ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.
ಇಂದು ವಿಕಾಸಸೌಧದಲ್ಲಿ ಮಹದೇವಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರ ಸೆಕ್ಷನ್ 26 ರ ಅಡಿ ನಡೆಯುವ ” 9 ನೇ ರಾಜ್ಯ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ” ಭಾಗವಹಿಸಿ ಮಾತನಾಡಿದರು.
ಮ್ಯಾನುಯಲ್ ಸ್ಕ್ಯಾವೆಂಜರ್ ನಂತಹ ಅಮಾನವೀಯ ಪದ್ದತಿಯು ರದ್ದಾಗಿದ್ದರೂ ಕೂಡಾ ಎಷ್ಟೋ ಸಲ ಸರ್ಕಾರದ ಗಮನಕ್ಕೆ ಬಾರದ ರೀತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳನ್ನು ಬಳಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆದರೆ 21 ನೇ ಶತಮಾನದಲ್ಲಿ ಜಗತ್ತು ಯಾಂತ್ರಿಕವಾಗಿ ಬಹಳಷ್ಟು ಮುಂದುವರೆದಿದ್ದು, ಸ್ವಚ್ಛತಾ ಕಾರ್ಯಗಳಿಗೆ ಮ್ಯಾನುಯಲ್ ಸ್ಕ್ಯಾವೆಂಜರ್ ಗಳನ್ನು ಬಳಸಿಕೊಳ್ಳದೇ ಯಂತ್ರಗಳನ್ನೇ ಬಳಸಿಕೊಳ್ಳುವ ರೀತಿಯ ವಾತಾವರಣವು ಹೆಚ್ಚಾಗಬೇಕಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಸುಮಾರು 7000 ಕ್ಕೂ ಹೆಚ್ಚು ಮಂದಿ ಸಫಾಯಿ ಕರ್ಮಚಾರಿಗಳು ಇದ್ದು ಅವರೆಲ್ಲರಿಗೂ ಬದುಕಿನ ಭದ್ರತೆ, ವಸತಿ ಸೌಲಭ್ಯ, ಉದ್ಯೋಗ ಸೌಲಭ್ಯ ಹಾಗೂ ಅವರ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರದ ಎಲ್ಲ ಇಲಾಖೆಗಳೂ ಕೂಡಾ ವ್ಯವಸ್ಥಿತವಾಗಿ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ನಮ್ಮ ರಾಜ್ಯದಲ್ಲಿರುವ ಈ ಸಫಾಯಿ ಕರ್ಮಚಾರಿಗಳ ಸಂಖ್ಯೆ, ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದವರು ರಾಜ್ಯಾದ್ಯಂತ ಪ್ರವಾಸ ಮಾಡಿ ದತ್ತಾಂಶ ಸಂಗ್ರಹಿಸಿದ್ದು ಈ ದತ್ತಾಂಶದ ಆಧಾರದ ಮೇಲೆಯೇ ಸಫಾಯಿ ಕರ್ಮಚಾರಿಗಳಿಗೆ ವಸತಿ, ಶಿಕ್ಷಣ ಮತ್ತು ಇತರೆ ಮೂಲ ಸೌಕರ್ಯ ಹಾಗೂ ಆರೋಗ್ಯ ಸೌಲಭ್ಯವನ್ನು ನೀಡಲು ಸರ್ಕಾರ ನಿರ್ಧರಿಸಿದ್ದು ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದರು.
ಕರೋನಾ ಸಂದರ್ಭದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ ಶ್ರಮಿಕ ವರ್ಗದಲ್ಲಿ ಸಫಾಯಿ ಕರ್ಮಚಾರಿಗಳ ಪಾತ್ರ ದೊಡ್ಡದು, ಇಂತಹ ಸಫಾಯಿ ಕರ್ಮಚಾರಿಗಳ ಬದುಕಿನ ಹಿತ ಕಾಪಾಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ ಆಗಿದ್ದು ಈ ದಿಸೆಯಲ್ಲಿ ಅರ್ಥಿಕ ಇಲಾಖೆಯು ಹೆಚ್ಚು ಯೋಚನೆ ಮಾಡದೇ ಅವರ ಬದುಕು ಕಟ್ಟಿಕೊಳ್ಳುವುದಕ್ಕೆ ಪೂರಕವಾಗಿ ಹಣಕಾಸು ಸೌಲಭ್ಯವನ್ನು ಬಿಡುಗಡೆ ಮಾಡಬೇಕು ಎಂದು ಈ ವೇಳೆ ಅವರು ಆರ್ಥಿಕ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ರಾಜ್ಯದಲ್ಲಿರುವ 7000 ಕ್ಕೂ ಹೆಚ್ಚು ಮಂದಿಗೆ ಬದುಕು ಕಲ್ಪಿಸುವ ಬಹುದೊಡ್ಡ ಮಹಾತ್ವಕಾಂಕ್ಷಿ ಯೋಜನೆಯು ಶ್ರಮಿಕ ಕೈಗಳಿಗೆ ನಾವು ಸಲ್ಲಿಸುವ ಗೌರವ ಎಂದು ಸಚಿವರು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.


