ಜೆಡಿಎಸ್-ಬಿಜೆಪಿ ನಾಯಕರ ನಡುವೆ ಯಾವುದೇ ವಿಶ್ವಾಸ ಕಡಿಮೆಯಾಗಿಲ್ಲ. ನಮ್ಮ ಶಕ್ತಿ ಬಗ್ಗೆ ಮಾತನಾಡಿದ್ದೇವೆ. ಬಿಜೆಪಿ ಹೈಕಮಾಂಡರ್ ನಾಯಕರು ನಮ್ಮನ್ನು ತುಂಬಾ ಗೌರವಯುತವಾಗಿ ನೋಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಪ್ರಾರಂಭದಿಂದಲೂ ನಾವು ಮೂರು ಕ್ಷೇತ್ರ ಕೇಳಿದ್ದೇವೆ. ನಾವು ಕೇಳಿದ್ದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೌರವಿಸಿದ್ದಾರೆ. ಸೋಮವಾರದ ಸಭೆಯಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಬೇಕು ಅಂತ ಚರ್ಚೆಯಾಗಿದೆ” ಎಂದರು.
ಬಿಜೆಪಿ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಕಾರಣ
“ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ಕಾಂಗ್ರೆಸ್. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ. ಜನ ತಿರಸ್ಕಾರ ಮಾಡಿದಾಗ ನಮ್ಮ ಮನೆ ಬಾಗಿಲಿಗೆ ಬಂದ್ದಿದ್ದು ನೀವು. ಈಗ ಬನ್ನಿ ಕಾಂಗ್ರೆಸ್ಗೆ ಅಂತ ಡಿ ಕೆ ಶಿವಕುಮಾರ್ ಕರೆಯುತ್ತಿದ್ದಾರೆ” ಎಂದರು.
“ಕಾಂಗ್ರೆಸ್ ಜತೆ ಸರ್ಕಾರ ಮಾಡಿದಾಗ ಪಕ್ಷ ನಾಶಕ್ಕೆ ಹೊರಟಿದ್ದರು. ನಮ್ಮ ಶಾಸಕರಿಗೆ ಬ್ರೈನ್ ವಾಶ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡರು. ಹಂತ ಹಂತವಾಗಿ ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡಿದ್ರಿ. ಯಾವ ರೀತಿ ನಮ್ಮ ಶಕ್ತಿ ಕುಂದಿಸಲು ಯತ್ನಿಸಿದ್ದೀರಿ” ಎಂದು ಗೊತ್ತು ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
“ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಡಿ ಕೆ ಶಿವಕುಮಾರ್ ಅಯ್ಯೋ ಪಾಪ ಎಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನೀವು ಮಂಡ್ಯದಲ್ಲಿ ಏನೂ ಮಾಡಿದ್ದಿರಾ ಅಂತ ಗೋತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಜಯದೇವ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ನೀವು ಕಾರಣ” ಎಂದರು.
“ನಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್ಗೆ ಬನ್ನಿ ಎಂದು ಕರೆ ಕೊಡುತ್ತಿರಾ? ನನ್ನ ಕಾರ್ಯಕರ್ತರಿಗೆ ನಿಮ್ಮಿಂದ ರಕ್ಷಣೆ ಪಡೆಯುವ ದುಸ್ಥಿತಿ ಬಂದಿಲ್ಲ. ಪದೇ ಪದೇ ಬಿಜೆಪಿ ಬಿಟೀಮ್ ಬಿಟೀಮ್ ಎಂದು ಹೇಳಿದ್ರಿ. ಹಂತ ಹಂತವಾಗಿ ನಮ್ಮ ಪಕ್ಷ ಮುಗಿಸಲು ಪ್ರಯತ್ನ ಪಟ್ಟಿದ್ದಾರೆ. ರಾಜಕೀಯವಾಗಿ ನಮಗೆ ವಿಷ ಹಾಕಿದ್ದಿರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.