Homeಕರ್ನಾಟಕಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ತೆರೆ; ಕಲಾಪದ ಪ್ರಮುಖ ಬೆಳವಣಿಗೆಗಳೇನು?

ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ತೆರೆ; ಕಲಾಪದ ಪ್ರಮುಖ ಬೆಳವಣಿಗೆಗಳೇನು?

ಕರ್ನಾಟಕ ಎಂದು ಹೆಸರಾಗಿ 50ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ರಾಜ್ಯದೆಲ್ಲಡೆ ಮನೆ ಮಾಡಿದೆ. ಈ ಸಂಭ್ರಮದ ನಡುವೆಯೇ ಜರುಗಿದ ಬೆಳಗಾವಿ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಸದನ ಕಲಾಪಗಳನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ಈ ಅಧಿವೇಶನದಲ್ಲಿ ಸುಮಾರು 66 ಗಂಟೆಗಳಿಗೂ ಹೆಚ್ಚು ಕಾರ್ಯಕಲಾಪ ನಡೆದಿದೆ. 2023-24ನೇ ಸಾಲಿನ ಪೂರಕ ಅಂದಾಜು, 2023-24ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ, ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 17 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ.

ರಾಜ್ಯದ 04 ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕೃತ ನಿರ್ಣಯ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಬೆಳಗಾವಿಗೆ ಆಗಮಿಸಿದ ಶತಮಾನೋತ್ಸವದ ಸಂಭ್ರಮದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕುರಿತು ಖಾಸಗಿ ಸದಸ್ಯರ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ.

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ಹಾಗೂ ಮಧ್ಯಂತರ ವರದಿ, ಸಾರ್ವಜನಿಕ ಉದ್ಯಮಗಳ ಸಮಿತಿಯ 136ನೇ ವರದಿ, ಕರ್ನಾಟಕ ವಿಧಾನಸಭೆಯ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2023-24 ನೇ ಸಾಲಿನ ಮೊದಲನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಒಟ್ಟು 09 ಅಧಿಸೂಚನೆಗಳು, 03 ಅಧ್ಯಾದೇಶಗಳು ಮತ್ತು 61 ವಾರ್ಷಿಕ ವರದಿಗಳು, 105 ಲೆಕ್ಕ ಪರಿಶೋಧನಾ ವರದಿಗಳು ಹಾಗೂ 01 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.

ನಿಯಮ 60 ರಡಿಯಲ್ಲಿ ನೀಡಿದ್ದ 04 ಸೂಚನೆಗಳ ಪೈಕಿ 03 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, ಒಟ್ಟು 05 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ. ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಾಲ್ಕು ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲು ಸಭಾಧ್ಯಕ್ಷರಿಗೆ ಸದನವು ಅಧಿಕಾರ ನೀಡಲಾಗಿದೆ.

ಒಟ್ಟು 3038 ಪ್ರಶ್ನೆಗಳನ್ನು ಶಾಸಕರಿಂದ ಸ್ವೀಕರಿಸಲಾಗಿದೆ. ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 148 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2206 ಪ್ರಶ್ನೆಗಳ ಪೈಕಿ 2010 ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲಾಗಿದೆ. ನಿಯಮ 351 ರಡಿಯಲ್ಲಿ 200 ಸೂಚನೆಗಳನ್ನು ಅಂಗೀಕರಿಸಿದ್ದು, 110 ಸೂಚನೆಗಳ ಉತ್ತರಗಳನ್ನು ನೀಡಲಾಗಿದೆ.

ಗಮನ ಸೆಳೆಯುವ 174 ಸೂಚನೆಗಳ ಪೈಕಿ 140 ಸೂಚನೆಗಳನ್ನು ಸದನದಲ್ಲಿ ಚರ್ಚಿಸಲಾಗಿದೆ. ಒಟ್ಟಾರೆಯಾಗಿ 197 ಸೂಚನೆಗಳಿಗೆ ಉತ್ತರವನ್ನು ನೀಡಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 31 ಸೂಚನೆಗಳನ್ನು ಚರ್ಚಿಸಲಾಗಿದೆ. 18 ಅರ್ಜಿಗಳನ್ನು ಒಪ್ಪಿಸಲಾಗಿದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್ ವಿವರಿಸಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾದ ಚರ್ಚೆ

ಈ ಬಾರಿಯ ವಿಧಾನ ಸಭಾ ಕಲಾಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ವಿಶೇಷ ಚರ್ಚೆ ಜರುಗಿದೆ. 42 ಶಾಸಕರು 11 ಗಂಟೆ 04 ನಿಮಿಷಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮಾತನಾಡಿದರು.

ಬರಗಾಲ ನಿರ್ವಹಣೆಗೆ ಸದನದ ಬದ್ದತೆ

ರಾಜ್ಯದಲ್ಲಿ ಆವರಿಸಿರುವ ಬರಗಾಲದ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ಜರುಗಿತು. ಶಾಸಕರು ಹಾಗೂ ಮಂತ್ರಿಗಳು ಬರಗಾಲದ ಬಗ್ಗೆ ಯುದ್ದ ಸನದ್ಧ ರೀತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ನೀತಿಗಳನ್ನು ರೂಪಿಸಿದರು. ಯುವ ಶಾಸಕರು ಹವಮಾನ ಬದಲಾವಣೆ ಹಾಗೂ ಅದರ ಗಂಭೀರತೆಯ ಬಗ್ಗೆ ಸದನಲ್ಲಿ ಗಹನ ವಿಚಾರಗಳನ್ನು ಮಂಡಿಸಿದರು.

ಅಧಿವೇಶನಕ್ಕೆ ಸಾಂಸ್ಕೃತಿಕ ಮೆರಗು

ಕರ್ನಾಟಕ ಎಂದು ಹೆಸರಾಗಿ 50ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸುವರ್ಣ ಕರ್ನಾಟಕ ಸಂಭ್ರಮದ ನಡುವೆ ಜರುಗಿದ ಬೆಳಗಾವಿ ಅಧಿವೇಶನಕ್ಕೆ ಈ ಬಾರಿ ಸಾಂಸ್ಕತಿಕ ಮೆರಗು ದೊರಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುವರ್ಣ ಸೌಧದ ಮುಂದೆ ಶಾಸ್ತ್ರೀಯ ಹಾಗೂ ನವ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ನಡುವೆಯೇ ಸುವರ್ಣ ಸೌಧಕ್ಕೆ ಶಾಶ್ವತ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments