ವಿಪಕ್ಷ ನಾಯಕರನ್ನೇ ಗುರಿಯಾಗಿಸಿಕೊಂಡು ಕೇಂದ್ರೀಯ ತನಿಖಾ ಸಂಸ್ಥೆಗಳು ದಾಳಿ ನಡೆಸುವ ಮರ್ಮವೇನು? ಈ ತನಿಖಾ ಸಂಸ್ಥೆಗಳ ಪ್ರಕಾರ ಬಿಜೆಪಿಯಲ್ಲಿರುವವರೆಲ್ಲರೂ ಪರಮ ಪ್ರಾಮಾಣಿಕರೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, “ತನಿಖಾ ಸಂಸ್ಥೆಗಳ ಪ್ರಕಾರ ಬಿಜೆಪಿಯವರು ಭ್ರಷ್ಟಾಚಾರ ಮಾಡೇ ಇಲ್ಲವೇ? ಬಿಜೆಪಿಯವರ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪವಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆಗಳ್ಯಾಕೆ ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸುವುದಿಲ್ಲ?” ಎಂದು ವಾಗ್ದಾಳಿ ನಡೆಸಿದ್ದಾರೆ.
“ಭ್ರಷ್ಟ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸದಿರಲು ನರೇಂದ್ರ ಮೋದಿಯವರ ಪ್ರಭಾವ ಇಲ್ಲದೆ ಬೇರೇನು ಕಾರಣವಿದೆ?” ಎಂದು ಕೇಳಿದ್ದಾರೆ.
“ಸ್ವತಂತ್ರ ಭಾರತದಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಗರಿಷ್ಟ ಮಟ್ಟದಲ್ಲಿ ದುರಪಯೋಗಪಡಿಸಿಕೊಂಡ ಯಾವುದಾದರೂ ಸರ್ಕಾರವಿದ್ದರೆ ಅದು ಮೋದಿ ಸರ್ಕಾರ ಮಾತ್ರ. ಮೋದಿಯವರ ಆಡಳಿತದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ದಾಖಲಿಸಿರುವ ಪ್ರಕರಣಗಳಲ್ಲಿ ಶೇ.95% ರಷ್ಟು ಪ್ರಕರಣಗಳು ವಿಪಕ್ಷ ನಾಯಕರ ವಿರುದ್ಧ. ಈ ಅಂಕಿ- ಅಂಶವೇ ತನಿಖಾ ಸಂಸ್ಥೆಗಳ ದುರ್ಬಳಕೆಯ ಸತ್ಯ ದರ್ಶನ ತೋರಿಸುತ್ತವೆ” ಎಂದಿದ್ದಾರೆ.
“ಮೋದಿಯವರಿಗೆ ಹಾಗೂ ಅವರ ಸರ್ಕಾರಕ್ಕೆ ವಿರೋಧ ಪಕ್ಷಗಳನ್ನು ರಾಜಕೀಯವಾಗಿ ಎದುರಿಸುವ ಎದೆಗಾರಿಕೆ ಇಲ್ಲ. ಹಾಗಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿಪಕ್ಷದವರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.