ಬೆಂಗಳೂರು- ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದ ಮಳೆ ಬಾರದೇ ಇದ್ದರೂ, ಮುಂದಿನ ಎರಡು ತಿಂಗಳ ಕಾಲ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ ಅವರು ರಾಜ್ಯದ ಜನತೆಗೆ ಅಭಯ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಆರಂಭವಾಗಿ ಹಲವು ದಿನಗಳು ಕಳೆದರೂ ರಾಜ್ಯದಲ್ಲಿ ವಾಡಿಕೆಯಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಆದರೆ ಮುಂದಿನ ಎರಡು ತಿಂಗಳು ಕಾಲ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಜನರು ಆತಂಕಕ್ಕೆ ಒಳಗಾಗಬಾರದು ಎಂದು ಅಭಯ ನೀಡಿದರು.
ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆಆರ್ ಎಸ್ ಅಣೆಕಟ್ಟಿನಲ್ಲಿ ಪ್ರಸ್ತುತ 11 ಟಿಎಂಸಿ ನೀರು ಸಂಗ್ರಹಣೆವಾಗಿದೆ ಹವಾಮಾನ ಇಲಾಖೆಯ ಪ್ರಕಾರ ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವಿರುವುದರಿಂದ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮೇಕೆದಾಟು ನದಿ ನೀರು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ.ಇದು ಸಂಪೂರ್ಣವಾಗಿ ಕುಡಿಯುವ ನದಿ ನೀರು ಯೋಜನೆಯ ನಾವು ನೀರನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ. ಇದು ಗೊತ್ತಿದ್ದು ತಮಿಳುನಾಡಿ ಸರ್ಕಾರ ಸುಖ-ಸುಮ್ಮನೆ ಖಾತೆ ತೆಗೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮೇಕೆದಾಟು ನದಿ ನೀರು ಯೋಜನೆ, ಕರ್ನಾಟಕದ ಮಹತ್ವಕಾಂಕ್ಷಿಯ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ ಹೊಸದಾಗಿ ಆಣೆಕಟ್ಟು ಕಟ್ಟಿ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿನ ಬಳಕೆಗೆ ಬಳಸಿಕೊಳ್ಳುತ್ತೇವೆ ಆದರೆ ತಮಿಳುನಾಡು ಸರ್ಕಾರ ಅನಗತ್ಯವಾಗಿ ಯೋಜನೆಗೆ ಅಡ್ಡಿಪಡಿಸುತ್ತದೆ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅವರು ಹೇಳಿದರು.
ಮೇಕೆದಾಟು ನದಿ ನೀರು ಯೋಜನೆ ಜಾರಿಯಾದರೆ ರಾಜಧಾನಿ ಬೆಂಗಳೂರಿಗೆ 4.75 ಟಿಎಂಸಿ ನಮಗೆ ಲಭ್ಯವಾಗುತ್ತದೆ ಅಲ್ಲದೆ 400 ವಿದ್ಯುತ್ ಕೂಡ ಉತ್ಪಾದನೆ ಮಾಡಬಹುದು ಯೋಜನೆಗಲ್ಲಿ ನಾವು ಇದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದೇವೆ.. ಆದರೂ ಅಲ್ಲಿನ ರಾಜಕಾರಣಕ್ಕಾಗಿ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.
ಈ ಯೋಜನೆಯಿಂದ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಕೆ ಮಾಡಿಕೊಳ್ಳುವುದಿಲ್ಲ. ಈ ಭಾಗದಲ್ಲಿ ವ್ಯವಸಾಯಕ್ಕೆ ನೀರು ಲಭ್ಯವಿರುವುದಿಲ್ಲ. ಏಕೆಂದರೆ ಈ ಪ್ರದೇಶದಲ್ಲಿ 4-5 ವರ್ಷಕ್ಕೊಮ್ಮೆ ಮಳೆ ಕಮ್ಮಿಯಾಗುತ್ತದೆ. ಇದು ಸಂಪೂರ್ಣವಾಗಿ ಕುಡಿಯುವ ನೀರಿನ ಯೋಜನೆ ಎಂದು ಪುನರುಚ್ಚರಿಸಿದರು.
ತಮಿಳುನಾಡಿಗೆ ನಾವು ಕೇಂದ್ರದ ನಿದೇರ್ಶನದ ಪ್ರಕಾರ ತಿಂಗಳಿಗೊಮ್ಮೆ ನೀರು ಹರಿಸಬೇಕು. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ 19 ಟಿಎಂಸಿ ನೀರನ್ನು ಬಿಡಬೇಕಿದೆ. ಇದು ಹಿಂದೆಯೇ ತೀರ್ಮಾನವಾಗಿದೆ. ಜೊತೆಗೆ ಕೇಂದ್ರದ ಜಲ ಆಯೋಗದ ತೀರ್ಮಾನವೂ ಇದೇ ಆಗಿದೆ.ಪ್ರಸ್ತುತ ನಮ್ಮ ಬಳಿ 16 ಟಿಎಂ ಸಿ ನೀರು ಸಂಗ್ರಹವಾಗಿದೆ. ಕುಡಿಯುವ ನೀರು ಬಿಟ್ಟು ಬರೀ 3 ಟಿಎಂಸಿ ಇದೆ . ಸಂಕಷ್ಟದ ಸಂದರ್ಭದಲ್ಲಿ ನೀರು ಹರಿಸುವ ಬಗ್ಗೆ ಸಲಹೆ ಪಡೆಯಲು ಚಿಂತನೆ ಇದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಜೂನ್ ನಲ್ಲಿ 9.19 ಟಿಎಂಸಿ ಬಿಡಬೇಕು ನಾವು, ಇಲ್ಲಿಯವರೆಗೂ 2 ಟಿಎಂಸಿ ನೀರು ಹರಿಸಿದ್ದೇವೆ. ನಮ್ಮ ಬಳಿ 3 ಟಿಎಂಸಿ ನೀರು ಇದೆ ಅಷ್ಟೇ. ಅಣೆಕಟ್ಟು ಕಟ್ಟಿ ನೀರು ಸಂಗ್ರಹ ಮಾಡಿದರೆ ಅವರಿಗೆ ಅನುಕೂಲ. ಮಳೆ ಬಂದು ಅಣೆಕಟ್ಟುಗಳು ತುಂಬಿದರೆ ಯಾವುದೇ ತೊಂದರೆ ಇರುವುದಿಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ಎಲ್ಲರೂ ಕೂಡ ಒಗ್ಗಟ್ಟಿನಿಂದ ಹೋರಾಡಬೇಕು. ನೀರು ಸಂಗ್ರಹವಾದರೆ ತಮಿಳುನಾಡು ರೈತರಿಗೆ ಉಪಯೋಗವಾಗುತ್ತದೆ. ನ್ಯಾಯಾಲಯಕ್ಕೆ ಹೋಗುವುದಕ್ಕಿಂತ ಕೂತು ಮಾತನಾಡುವುದು ಸೂಕ್ತ. ಕೃಷ್ಣಾ ಮೇಲ್ದಂಡೆ ಯೋಜನೆ 13-14 ವರ್ಷದಿಂದ ಪರಿಹಾರ ಆಗಿಲ್ಲ. ಅದಕ್ಕೆ ಕೂತು ಪರಿಹಾರ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಮೇಕೆದಾಟು ನದಿ ನೀರು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೊರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ಈಗಾಗಲೇ ತಿರಸ್ಕಾರವಾಗಿದೆ. ಅಲ್ಲದೆ ಪುನರ್ ಪರಿಶೀಲನಾ ಅರ್ಜಿಯನ್ನು ಸಹ ಸುಪ್ರೀಂಕೋರ್ಟ್ ಎರಡು ಬಾರಿ ತಿರಸ್ಕಾರ ಮಾಡಿದೆ. ಕಾನೂನು ಹೋರಾಟದಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಆದರೂ ಅಲ್ಲಿನ ಮುಖ್ಯಮಂತ್ರಿ ಜೋಸೆಪ್ ವಿಜಯನ್ ಅವರು ಮೇಕೆದಾಟು ಯೋಜನೆ ವಿರೋಧಿಸಿ ಹೋರಾ ಮಾಡಬೇಕೆಂದು ಹೇಳಿದ್ದಾರೆ. ನಮಗೆ ನಿಗದಿಪಡಿಸಿರುವ ನೀರೇ ಸಾಕು. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಿದರೆ ಸಂಕಷ್ಟದ ಸಂದರ್ಭದಲ್ಲಿ ನೀರು ಹರಿಸಬಹುದಲ್ಲವೇ ಎಂದು ಪ್ರಶ್ನೆ ಮಾಡಿದರು.
ಈ ಯೋಜನೆ ಅನುಷ್ಠಾನವಾದರೆ ತಮಿಳುನಾಡು ರೈತರಿಗೂ ಅನುಕೂಲವಾಗುತ್ತದೆ. ವಿರೋಧಿಸಿದರೆ ಅವರಿಗೇ ನಷ್ಟ. ಈಗಾಗಲೇ ವಿಸ್ತೃತ ಯೋಜನಾ ವರದಿ( ಡಿಪಿಆರ್) ತಯಾರಾಗಿದೆ. ತಮಿಳುನಾಡಿಗೆ ನಿಗದಿಪಡಿಸಿರುವ ನೀರಿನಲ್ಲಿ ನಮಗೆ ಒಂದೇ ಒಂದು ಹನಿ ನೀರೂ ಜಾಸ್ತಿ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದರು.
ಚುನಾವಣೆ ಆದಮೇಲೆ ವಿರೋಧ ಮರೆತುಬಿಡಬೇಕು. ನೀರು ಕೊಡುವ ಮತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ಇದೇ ವಿಚಾರವಾಗಿ ಮೊನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಮಹದಾಯಿ ವಿಚಾರ, ಮೇಕೆದಾಟು ವಿಚಾರ ಸೇರಿದಂತೆ ಬಾಕಿ ಇರುವ ನೀರಾವರಿ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಮ್ಮನ್ನೂ ಕರೆಸಿ ಮಾತನಾಡಿ ಎಂದು ಮನವಿ ಮಾಡಿದ್ದೇವೆ ಎಂದು ರಾಮಲಿಂಗಾರಡ್ಡಿ ಅವರು ಹೇಳಿದರು.


