ರಾಜ್ಯ ಸರಕಾರವು ಬರಗಾಲದ ಕುರಿತಂತೆ ಸ್ಪಷ್ಟ ಅಂಕಿಅಂಶವನ್ನು ಸಂಗ್ರಹಿಸಬೇಕಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ಹಣ ಬಿಡುಗಡೆ ಮಾಡಿದ ಬಳಿಕ ಕೇಂದ್ರ ಸರಕಾರದ ನೆರವನ್ನು ಕೇಳಲಿ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ 280 ಮಳೆಮಾಪಕಗಳು ಇವೆ. ಅದರಲ್ಲಿ 205 ಮಾತ್ರ ಕೆಲಸ ಮಾಡುತ್ತವೆ. 75 ಹಾಳಾಗಿದ್ದು ಅವನ್ನು ದುರಸ್ತಿ ಮಾಡಿಲ್ಲ ಎಂದು ಟೀಕಿಸಿದರು. 2 ವರ್ಷಗಳಿಂದ ತಿಳಿಸಿದರೂ ಪ್ರಯೋಜನ ಆಗಿಲ್ಲ ಎಂದು ಆಕ್ಷೇಪಿಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ ಬೆಳೆಗೆ ಹವಾಮಾನ ಆಧರಿತ ವಿಮೆಯನ್ನು ಕೊಡುತ್ತಿದ್ದಾರೆ. ಪ್ರೀಮಿಯಂ ಕಟ್ಟಿದ ರೈತರಿಗೆ ಅತಿವೃಷ್ಟಿ ಆದರೂ ವಿಮೆ ಸಿಗುತ್ತದೆ. ಅನಾವೃಷ್ಟಿ ಆದರೂ ವಿಮೆ ಕೊಡಲಾಗುತ್ತದೆ. ಆದರೆ, ಮಳೆಮಾಪಕಗಳು ಸಮರ್ಪಕವಾಗಿ ಕೆಲಸ ಮಾಡದೇ ಇದ್ದರೆ ವಿಮೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸರಕಾರಕ್ಕೆ ಮಳೆಮಾಪಕ ದುರಸ್ತಿ ವಿಚಾರದಲ್ಲಿ ಆಸಕ್ತಿಯೇ ಇಲ್ಲ. ಭತ್ತದ ಬಿತ್ತನೆಯೇ ಆಗುತ್ತಿಲ್ಲ. ಅಡಿಕೆ ಬೆಳೆ ನಾಶವಾಗುತ್ತಿದೆ. ಕೆರೆಗಳು ತುಂಬಿಲ್ಲ. ಏತ ನೀರಾವರಿಯೂ ಕೆಲಸ ಮಾಡುತ್ತಿಲ್ಲ. ಇವೆಲ್ಲ ವಿಚಾರದಲ್ಲಿ ಆಸಕ್ತಿಯೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಜ್ಜಂಪುರದ ಕೆರೆಗಳಲ್ಲಿ ನೀರಿಲ್ಲ. ಕೊಳವೆಬಾವಿ ರೀಚಾರ್ಜ್ ಆಗುತ್ತಿಲ್ಲ. ಏತ ನೀರಾವರಿ ಕೆಲಸಗಾರರಿಗೆ ಸಂಬಳವನ್ನೇ ನೀಡಿಲ್ಲ. ಅವರೂ ಬೀಗ ಹಾಕಿ ತೆರಳಿದ್ದಾರೆ ಎಂದು ವಿವರಿಸಿದರು. ಇಂಥ ದರಿದ್ರಾವಸ್ಥೆಯಲ್ಲಿ ರಾಜ್ಯ ಸರಕಾರ ನಡೆಯುತ್ತಿರುವುದು ನಮ್ಮ ದೌರ್ಭಾಗ್ಯ ಎಂದು ಆಕ್ಷೇಪಿಸಿದರು.
ನಾವು ಸಂಗ್ರಹಿಸಿದ ಮಾಹಿತಿ ಆಧರಿತ ವರದಿಯನ್ನು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರದ ಗಮನಕ್ಕೆ ತರಲಿದ್ದೇವೆ. 6 ತಂಡಗಳು ಒಟ್ಟಾಗಿ ಸೇರಿ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಗ್ರ ವರದಿಯನ್ನು ಸಿದ್ಧಪಡಿಸಲಿದ್ದೇವೆ ಎಂದು ಅವರು ತಿಳಿಸಿದರು. ಶಾಸಕರು, ಜಿಲ್ಲಾ ಅಧ್ಯಕ್ಷರು, ರೈತ ಮೋರ್ಚಾ ಅಧ್ಯಕ್ಷರು ಸೇರಿ ನಾವೆಲ್ಲರೂ ಓಡಾಟ ಮಾಡುತ್ತಿದ್ದೇವೆ ಎಂದು ಹೇಳಿದರು.


