ನವದೆಹಲಿಯಲ್ಲಿ ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ, ದಾವಣಗೆರೆ ಲೋಕಸಭಾ ಕ್ಷೇತ್ರದ ನಾಗರಿಕರಿಂದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಜನಪರ ಹಾಗೂ ಅಭಿವೃದ್ಧಿ ಪರವಾದ ವಿಷಯಗಳ ಕುರಿತು ಅಮೂಲ್ಯ ಸಲಹೆಗಳನ್ನು ಆಹ್ವಾನಿಸಿದ್ದಾರೆ.
ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಹಿತವನ್ನು ಕಾಪಾಡುವಂತಹ ಪ್ರಮುಖ ವಿಚಾರಗಳು, ಅಭಿವೃದ್ಧಿಗೆ ಸಂಬಂಧಿಸಿದ ಅಭಿಪ್ರಾಯಗಳು ಹಾಗೂ ಯುವಜನತೆ, ರೈತರು, ಮಹಿಳೆಯರು, ಕಾರ್ಮಿಕ ವರ್ಗ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗೆ ಸಂಬಂಧಿಸಿದ ಸಲಹೆಗಳು ತಮ್ಮ ಸಂಸತ್ ಕಾರ್ಯಕ್ಕೆ ಮಹತ್ವದ ಮಾರ್ಗದರ್ಶನವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಜನರು ಸರ್ಕಾರದ ಕಾರ್ಯಗಳು ಹಾಗೂ ನೀತಿ-ನಿರ್ಣಯಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು. ಅತ್ಯುತ್ತಮ ಸಲಹೆಗಳನ್ನು ಆಯ್ಕೆ ಮಾಡಿ ಪ್ರಶಂಸೆಯೊಂದಿಗೆ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ನಾಗರಿಕರು ತಮ್ಮ ಸಲಹೆಗಳನ್ನು “ದಾವಣಗೆರೆಯ ಭವಿಷ್ಯಕ್ಕಾಗಿ ನಿಮ್ಮ ಸಲಹೆ” ಎಂಬ ಶೀರ್ಷಿಕೆಯಡಿ prabhamallikarjun76@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


