ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು “ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಬಾಗಿಲು ಮುಚ್ಚಬಾರದು” ಎಂದು ಹೇಳುತ್ತಿದ್ದಾರೆ. ಹಾಗಾದರೆ ಸಂಘಪರಿವಾರದ ದೇಶದ್ರೋಹದ ವ್ಯಾಖ್ಯಾನ ಬದಲಾಗಿದೆಯೇ? ಅಥವಾ ಸಂಘ ಪರಿವಾರ ಹೇಳಿದರೆ ದೇಶಭಕ್ತಿ, ವಿರೋಧ ಪಕ್ಷ ಹೇಳಿದರೆ ದೇಶದ್ರೋಹವೇ ಎಂದು ಬಿ ಕೆ ಹರಿಪ್ರಸಾದ್ ಕಟುವಾಗಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನವನ್ನು ಶತೃರಾಷ್ಟ್ರವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕುವ ಮೂಲಕ “ಪಾಕಿಸ್ತಾನ ಒಂದು ನೆರೆಯ ರಾಷ್ಟ್ರವೇ ಹೊರತು ಶತ್ರು ರಾಷ್ಟ್ರವಲ್ಲ” ಎಂದು ಕೇಂದ್ರ ಸರ್ಕಾರದ್ದೇ ದಾಖಲೆಯೊಂದಿಗೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದೆ. ಇಡೀ ಬಿಜೆಪಿ ಮತ್ತು ಸಂಘ ಪರಿವಾರ ನನ್ನ ಮೇಲೆ ದೇಶಭಕ್ತಿಯ ಪ್ರಮಾಣ ಪತ್ರ ಕೇಳುತ್ತಾ ಮುಗಿಬಿದ್ದಿತ್ತು ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರ ಪ್ರತಿ ಚುನಾವಣೆಯಲ್ಲಿ ಮಾತ್ರ ಪಾಕ್ ಅನ್ನು ಉಗ್ರರಾಷ್ಟ್ರ, ಶತೃದೇಶ ಎಂದು ಬೊಬ್ಬೆ ಹಾಕುತ್ತದೆ. “ಪಾಕಿಸ್ತಾನ” ಹೆಸರನ್ನು ಜಪಿಸದೆ ಮತ ಕೇಳದೇ ಗೆದ್ದ ಇತಿಹಾಸವೇ ಇಲ್ಲ. ಆದರೆ ಈಗ ಬಿಜೆಪಿ ಮತ್ತು ಸಂಘಪರಿವಾರ ಪಾಕಿಸ್ತಾನ ಕುರಿತು ಏಕಾಏಕಿ ಶಾಂತಿಯ ಪಾರಿವಾಳಗಳಾಗುವುದು ರಾಜಕೀಯ ಪಾಖಂಡದ ಪರಾಕಾಷ್ಠೆ ಎಂದು ಕುಟುಕಿದ್ದಾರೆ.
2019ರಲ್ಲಿ ಪಾಕಿಸ್ತಾನ ಪ್ರೇರಿತ ಪುಲ್ವಾಮಾ ದಾಳಿಯಲ್ಲಿ ನಮ್ಮ ಯೋಧರು ರಕ್ತಸಿಕ್ತರಾಗಿದ್ದ ಹುತಾತ್ಮಾರದರು. ಪಹಲ್ಗಾಮ್ ನಲ್ಲಿ ಅಮಾಯಕ ಯಾತ್ರಿಕರ ಮೇಲೆ ಉಗ್ರರ ಗುಂಡು ಮಳೆ ಸುರಿಯಿತು. ಗಡಿಯಲ್ಲಿ ಪ್ರತಿದಿನ ಭಾರತೀಯ ಸೈನಿಕರು ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಬೇಕು ಎನ್ನುವ ಮಾತು ಕೇಳಿಬರುತ್ತಿದೆಯಾದರೆ ಪಾಕಿಸ್ತಾನದ ಮೇಲಿನ ಬಿಜೆಪಿಯದ್ದು ಹುಸಿ ದ್ವೇಷವೇ? ಎಂದು ಕುಟುಕಿದ್ದಾರೆ.
ದ್ವಿ ರಾಷ್ಟ್ರ ಸಿದ್ದಾಂತ ಪ್ರತಿಪಾದನೆ ಮಾಡಿದ ಸಾವರ್ಕರ್ ಬಿಜೆಪಿಗೆ ವೀರನಾಗುತ್ತಾನೆ. ದೇಶವನ್ನೇ ಇಬ್ಭಾಗ ಮಾಡಿದ ಮಹಮ್ಮದ್ ಅಲಿ ಜಿನ್ನಾ ಬಿಜೆಪಿಯ ಭೀಷ್ಮರಿಗೆ ಜಾತ್ಯಾತೀತ ನಾಯಕರಾಗುತ್ತಾರೆ. ಭಾರತದ ಸೈನಿಕರ ಮೇಲಿ ಸಂಚಿನ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಜೊತೆಗ ಮಾತುಕತೆ ನಡೆಸಬೇಕಂತೆ. ಬಿಜೆಪಿ ಮತ್ತು ಸಂಘ ಪರಿವಾರದ ರಾಜಕೀಯವೇ ದ್ವಿಮುಖ ನೀತಿಯ ಪಾಠಪುಸ್ತಕವಾಗಿದೆ. ವೇದಿಕೆಯ ಮೇಲೆ ಯುದ್ಧ ಘೋಷಣೆ, ಒಳಗಡೆ ಮಾತುಕತೆಯ ಬಾಗಿಲು — ಇದೇ ಅವರ ದೇಶಭಕ್ಕಿಯ ಅಸಲಿ ಮುಖ. ಸೈನಿಕರ ತ್ಯಾಗವನ್ನು ಚುನಾವಣಾ ಭಾಷಣಗಳಿಗೆ ಬಳಸಿಕೊಳ್ಳುವವರು, ಇಂದು ದೇಶಕ್ಕೆ ನೀತಿ ಬೋಧನೆ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶಭಕ್ತಿ ಎನ್ನುವುದು ಟಿವಿ ಸ್ಟುಡಿಯೋಗಳಲ್ಲಿ ಕೂಗುವುದಲ್ಲ; ದೇಶದ ಜನರ ಜೀವ, ಸೈನಿಕರ ತ್ಯಾಗ ಮತ್ತು ರಾಷ್ಟ್ರೀಯ ಗೌರವದ ಬಗ್ಗೆ ಒಂದೇ ರೀತಿಯ ನಿಲುವು ಹೊಂದಿರುವುದು. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಅದು ಸಾಧ್ಯವಾಗುವುದಿಲ್ಲ. ಬ್ರಿಟಿಷರ ಒಡೆದಾಳುವ ನೀತಿಗೆ ಬೆಂಬಲವಾಗಿ ನಿಂತು, ಗುಲಾಮಗಿರಿ ಮಾಡಿ ಭಾರತವನ್ನೇ ಇಬ್ಭಾಗ ಮಾಡಿದವರು ಇಂದು ದೇಶಭಕ್ತಿಯ ಮಾತಾಡವುದು ಹಾಸ್ಯಸ್ಪದ ಎಂದಿದ್ದಾರೆ.


