ಜೂನ್ 13ರಂದು ಇರಾನ್ನ ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿತ್ತು. ಜೊತೆಗೆ ಇರಾನ್ ಸೇನಾ ನೆಲೆಗಳ ಮೇಲೂ ದಾಳಿ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್ ಸಹ ನೂರಾರು ಕ್ಷಿಪಣಿಗಳನ್ನು ಇಸ್ರೇಲ್ನ ಜೆರುಸಲೇಂ ಹಾಗೂ ಟೆಲ್ ಅವೀವ್ಗೆ ತೂರಿಬಿಟ್ಟಿದೆ. ಇದರಿಂದ ಅಪಾರ ಪ್ರಮಾಣ ಹಾನಿ ಉಂಟಾಗಿದೆ.
ಸೋಮವಾರ ಬೆಳಿಗ್ಗೆ ಟೆಹರಾನ್ನ ವಿವಿಧೆಡೆಯೂ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ನಾಲ್ಕು ದಿನಗಳ ಈ ಸಂಘರ್ಷದಲ್ಲಿ ದೇಶದಲ್ಲಿ 224 ಮಂದಿ ಮೃತಪಟ್ಟಿದ್ದು, 1,277ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ನ ವಿಶ್ವಸಂಸ್ಥೆಯ ರಾಯಭಾರಿ ತಿಳಿಸಿದ್ದಾರೆ.
‘ಆಪರೇಷನ್ ರೈಸಿಂಗ್ ಲಯನ್’ ಹೆಸರಿನಡಿ ಇಸ್ರೇಲ್ ನಡೆದ ಕಾರ್ಯಾಚರಣೆಯಲ್ಲಿ ಇರಾನ್ ಸೇನೆಯ ಅತ್ಯುನ್ನತ ಶ್ರೇಣಿಯ ಅಧಿಕಾರಿ, ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಫೇರಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್ಜಿಸಿ) ಮುಖ್ಯಸ್ಥ ಹುಸೇನ್ ಸಲಾಮಿ ಅವರು ಶುಕ್ರವಾರ ಮೃತಪಟ್ಟಿದ್ದರು.
ಇಸ್ರೇಲ್ ಇರಾನ್ನ ಅಣ್ವಸ್ತ್ರ ಕೇಂದ್ರಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಇದುವರೆಗೆ 14 ಪರಮಾಣು ವಿಜ್ಞಾನಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಇರಾನ್ನ ಟೆಹ್ರಾನ್ನಲ್ಲಿರುವ ಭೂಗತ ಶಸ್ತ್ರಗಾರವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂದು ವರದಿಯಾಗಿದೆ.
ಇಸ್ರೇಲ್ ನಾಗರೀಕರ ಸಾವಿನಿಂದ ಕೆರಳಿ ಕೆಂಡವಾಗಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು, ನಮ್ಮ ನಾಗರೀಕರ ಸಾವಿಗೆ ಇರಾನ್ ಭಾರೀ ಬೆಲೆ ತರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಅತ್ತ ಈ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಅನ್ನು ‘ಕಠಿಣ ಶಿಕ್ಷೆ’ಗೆ ಗುರಿಪಡಿಸಲಾಗುವುದು ಎಂದು ಇರಾನ್ನ ಪರಮೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ.