ದೇಶದಲ್ಲಿ ಜಾತಿ ಗಣತಿ ನಡೆಸುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಮೂಲಕ ಜಾತಿ ಗಣತಿಗೆ ಕೇಂದ್ರವು ಸಮ್ಮತಿಸುವಲ್ಲಿ ಲೋಕಸಭಾ ವಿಪಕ್ಷ ರಾಹುಲ್ ಗಾಂಧಿ ಅವರ ಹೋರಾಟ ಯಶಸ್ವಿಯಾಗಿದೆ.
ನವದೆಹಲಿಯಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, “ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಗಣತಿಯನ್ನು
ಸೇರಿಸಲಾಗುವುದು. ಶೀಘ್ರದಲ್ಲೇ ನಡೆಯಲಿರುವ ಜನಗಣತಿಯೊಂದಿಗೆ ಜಾತಿ ಗಣತಿಯ ಸಮೀಕ್ಷೆಯನ್ನೂ ನಡೆಸಲಾಗುವುದು” ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಜಾತಿಗಣತಿಯ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಭರವಸೆಗಳಲ್ಲಿ ಜಾತಿ ಗಣತಿ ಪ್ರಮುಖವಾಗಿತ್ತು. ಅದಾದ ನಂತರವೂ, ಜಾತಿಗಣತಿ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ನಿರಂತರವಾಗಿ ಒತ್ತಾಯಿಸಿದ್ದರು. ಕಳೆದ ಬಜೆಟ್ ಅಧಿವೇಶನದಲ್ಲಿಯೂ ಜಾತಿ ಗಣತಿ ಬಗ್ಗೆ ಮಾತನಾಡಿದ್ದ ರಾಹುಲ್, “ನೀವು (ಬಿಜೆಪಿ) ನನ್ನನ್ನು ಎಷ್ಟೇ ಟ್ರೋಲ್ ಮಾಡಬಹುದು. ಆದರೆ, ಜಾತಿ ಗಣತಿ ನಡೆಯುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಹೇಳಿದ್ದರು.
“ಕೆಲವು ರಾಜ್ಯಗಳು ಜಾತಿ ಸಮೀಕ್ಷೆ ನಡೆಸಿವೆ, ಅಲ್ಲದ ಜಾತಿ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿವೆ. ಇನ್ನೂ ಕೆಲವು ರಾಜ್ಯಗಳು ಅಂತಹ ಸಮೀಕ್ಷೆಗಳನ್ನು ರಾಜಕೀಯ ದೃಷ್ಟಿಕೋನದಿಂದ ಮಾತ್ರ ಮಾಡಲು ನಿರ್ಧಾರ ಮಾಡಿವೆ. ಅಂತಹ ಸಮೀಕ್ಷೆಗಳು ಸಮಾಜದಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದ್ದಾವು. ನಮ್ಮ ಸಾಮಾಜಿಕ ರಚನೆಯು ರಾಜಕೀಯದಿಂದ ತೊಂದರೆಗೊಳಗಾಗದಂತೆ ನೋಡಿಕೊಳ್ಳಲು, ಸಮೀಕ್ಷೆಗಳ ಬದಲಿಗೆ ಜಾತಿ ಎಣಿಕೆಯನ್ನು ಜನಗಣತಿಯಲ್ಲಿ ಸೇರಿಸುವ ಅವಶ್ಯವಿದೆ” ಎಂದು ವೈಷ್ಣವ್ ಹೇಳಿದ್ದಾರೆ.