ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 28 ಕ್ಷೇತ್ರಗಳನ್ನು ಗೆಲ್ಲಿಸುವುದಾಗಿ ಹೇಳಿದ್ದಾರೆ. ಅದರಂತೆಯೇ ಈ ಭಾಗದ ಬಿಜೆಪಿ ಕಾರ್ಯಕರ್ತರು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳನ್ನು ಗೆಲ್ಲಿಸಿ ಅವರ ಕೈಯಲ್ಲಿ ಇರಿಸಬೇಕು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.
ದಿಬ್ಬೂರಿನಲ್ಲಿ ಬಿಜೆಪಿ ಗ್ರಾಮ ಪರಿಕ್ರಮ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಪಾಲ್ಗೊಂಡು ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ರೈತರ ಕಲ್ಯಾಣಕ್ಕಾಗಿ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೆಗೆದು ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು.
“29 ರೂ. ಗೆ ಒಂದು ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕಿಸಾನ್ ಸಮ್ಮಾನ್ನಡಿ ಕೇಂದ್ರ ಸರ್ಕಾರ 6 ಸಾವಿರ ರೂ. ನೀಡಿದರೆ, ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ 4 ಸಾವಿರ ರೂ. ಸೇರಿಸಿ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮೊದಲಿಗೆ 4 ಸಾವಿರ ರೂ. ರದ್ದುಪಡಿಸಿ ರೈತರ ಕೆಂಗಣ್ಣಿಗೆ ಗುರಿಯಾಗಿದೆ” ಎಂದು ಹೇಳಿದರು.
ದಲಿತರು ಪ್ರತಿಭಟಿಸಿ
“ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 11 ಸಾವಿರ ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗೆ ಬಳಸಿಕೊಂಡಿದೆ. ಇದು ದಲಿತರ ವಿಚಾರದಲ್ಲಿ ಸರ್ಕಾರ ಮಾಡಿದ ದೊಡ್ಡ ಅಪರಾಧ. ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡಿದೆ. ಇದರ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟಿಸಬೇಕು” ಎಂದು ಕೋರಿದರು.
ಬಿಜೆಪಿಯಲ್ಲಿ ಹೊಸ ಚೈತನ್ಯ
“ಬಿ.ವೈ.ವಿಜಯೇಂದ್ರ ಅವರಿಗೆ ಸಣ್ಣ ವಯಸ್ಸಿನಲ್ಲಿ ಉತ್ತಮ ಅವಕಾಶ ದೊರೆತಿದ್ದು, ಅದನ್ನು ಪಡೆಯಲು ಅವರಿಗೆ ಯೋಗವೂ ಇದೆ, ಯೋಗ್ಯತೆಯೂ ಇದೆ. ಬಿ.ಎಸ್.ಯಡಿಯೂರಪ್ಪ ಅವರ ಗುಣ ರಕ್ತಗತವಾಗಿ ವಿಜಯೇಂದ್ರ ಅವರಿಗೆ ಬಂದಿದೆ. ಅವರು ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ” ಎಂದರು.
“ಇಡೀ ದೇಶದಲ್ಲಿ ಏಕಕಾಲಕ್ಕೆ ಗ್ರಾಮ ಪರಿಕ್ರಮ ಯಾತ್ರೆಗೆ ಚಾಲನೆ ದೊರೆತಿದೆ. ದಿಬ್ಬೂರಿನಿಂದ ರಾಜ್ಯಮಟ್ಟದ ಯಾತ್ರೆಗೆ ಚಾಲನೆ ದೊರೆತಿದೆ. ದಿಬ್ಬೂರು ಒಂದು ಕಾಲದಲ್ಲಿ ಅತಿ ಹಿಂದುಳಿದ ಗ್ರಾಮವಾಗಿತ್ತು. ಇಲ್ಲಿ ಏಳು ಕೆರೆ ಇದ್ದರೂ ಸಾವಿರದೈನೂರು ಅಡಿ ಆಳ ಕೊರೆದರೂ ನೀರು ಸಿಗುತ್ತಿರಲಿಲ್ಲ. ಇಲ್ಲಿ ತರಕಾರಿ, ಹೂವು ಬೆಳೆಯಲಾಗುತ್ತಿದೆ. ಇದಕ್ಕಾಗಿ ಏಳು ಕೆರೆಗಳಲ್ಲಿ ನೀರು ತುಂಬಿಸುವ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ. ಈ ಗ್ರಾಮ ಈಗ ಸಂಪದ್ಭರಿತ ಪ್ರದೇಶವಾಗಿದೆ” ಎಂದರು.
500 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ: ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ” ಹಾಲಿಗೆ ಪ್ರೋತ್ಸಾಹಧನ ನೀಡಲು ತೀರ್ಮಾನ ಮಾಡಿದ್ದೇ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ. ಆದರೆ ಕಾಂಗ್ರೆಸ್ ಸರ್ಕಾರ 715 ಕೋಟಿ ರೂ. ಗೌರವಧನ ಉಳಿಸಿಕೊಂಡಿದೆ. ಮೊಸಳೆ ಕಣ್ಣೀರು ಹಾಕುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಿಂದ 500 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೀಕರ ಬರಗಾಲ ಬಂದಿರುವ ಸಮಯದಲ್ಲಿ ಏಳು ಗಂಟೆ ವಿದ್ಯುತ್ ಕೊಡಲು ಆಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಡಾ.ಕೆ.ಸುಧಾಕರ್ ಅವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಗ್ರಾಮದ ಬೂತ್ ಅಧ್ಯಕ್ಷ ಮಂಜುನಾಥ ಅವರ ಮನೆಗೆ ಭೇಟಿ ನೀಡಿದರು. ಬೂತ್ ಮಟ್ಟದಲ್ಲಿ ಜನರು ಹಾಗೂ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.