ಬೆಂಗಳೂರು : ಪ್ರತ್ಯೇಕ ರಾಜ್ಯದ ಕೂಗಿನ ನಡುವೆಯು ರಾಜ್ಯದ ಎರಡನೇ ರಾಜಧಾನಿಯ ಸೌಭಾಗ್ಯ ಪಡೆದಿರುವ ಬೆಳಗಾವಿಗೆ ಈಗ ರಾಜ್ಯ ಕಾಂಗ್ರೆಸ್ ಸರ್ಕಾರ 250 ಕೋಟಿ ರೂಗಳ ಬಂಪರ್ ಲಾಟರಿಯನ್ನೇ ಕರುಣಿಸಿದೆ. ಜೊತೆಗೆ ಜಿಲ್ಲೆಯ ನಿರುದ್ಯೋಗಿಗಳ ಪಾಲಿಗೆ ಈ ಮೂಲಕ ಸಿಹಿ ಸುದ್ದಿಯೊಂದನ್ನು ರವಾನಿಸಿದೆ.
ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ಅವರನ್ನು ಎಸ್ಎಫ್ಎಸ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಫಾರಸ್ ಶಾ ನೇತೃತ್ವದ ನಿಯೋಗ ಭೇಟಿ ಮಾಡಿ ಚರ್ಚಿಸಿದ ಸಂದರ್ಭದಲ್ಲಿ ಈ ಸುಯೋಗ ಜಿಲ್ಲೆಗೆ ಲಭಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಆಪಲ್ ಫೋನ್ ತಯಾರಿಸುವ ಫಾಕ್ಸ್ಕಾನ್ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುವ ಎಸ್ಎಫ್ಎಸ್ ಕಂಪನಿಯು ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದು, ಇದಕ್ಕಾಗಿ 30 ಎಕರೆ ಭೂಮಿಯನ್ನು ಕೇಳಿದೆ. ಇದು ಸ್ವಾಗತಾರ್ಹ ಪ್ರಸ್ತಾವನೆಯಾಗಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಪರೋಕ್ಷವಾಗಿ ಇದರಿಂದ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿದ್ದು ರಾಜ್ಯದ ಆರ್ಥಿಕತೆಗೂ ಲಾಭವಾಗುವ ನಿರೀಕ್ಷೆ ಇದೆ.
ಬೆಳಗಾವಿಯನ್ನು ರಾಜ್ಯದ ಪ್ರಮುಖ ಉದ್ಯಮ ವಲಯಗಳಲ್ಲಿ ಒಂದಾಗಿ ಬೆಳೆಸಲಾಗುತ್ತಿದೆ. ಅಲ್ಲಿ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಇದು ಮುಂಬೈ-ಬೆಂಗಳೂರು-ಚೆನ್ನೈ ಕಾರಿಡಾರ್ನಲ್ಲಿ ಬರುವುದರಿಂದ ಔದ್ಯಮಿಕ ಬೆಳವಣಿಗೆಗೆ ಅಪಾರ ಅವಕಾಶಗಳಿವೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರಕಾರವು ತೀರ್ಮಾನಿಸಿದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.
ಎಸ್ಎಫ್ಎಸ್ ಕಂಪನಿ ಈಗಾಗಲೇ ಬೆಳಗಾವಿಯಲ್ಲಿ ಏರೋಸ್ಪೇಸ್ ಉದ್ಯಮಕ್ಕೆ ಬೇಕಾಗುವ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಈಗ ಅದು ಆಪಲ್ ಫೋನ್ಗೆ ಬೇಕಾಗುವ ಬಿಡಿಭಾಗಗಳ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ತೆರೆಯಲು ಮನಸ್ಸು ಮಾಡಿದೆ. ಇದರಿಂದ ಮುಂದಿನ ಮೂರು ವರ್ಷಗಳಲ್ಲಿ 500 ಜನ ತಂತ್ರಜ್ಞರಿಗೆ ಉದ್ಯೋಗ ಸಿಗಲಿದೆ ಎಂದು ಇದೇ ವೇಳೆ ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಎಸ್ ಕಂಪನಿಯ ನಿರ್ದೇಶಕ ಪ್ರಶಾಂತ್ ಕೋರೆ ಮತ್ತು ರಾಜ್ಯ ಕೈಗಾರಿಕಾ ಇಲಾಖೆ ಅಯುಕ್ತೆ ಗುಂಜನ್ ಕೃಷ್ಣ ಇದ್ದರು.