ಮೊದಲ ಬಾರಿ ರಾಜಕೀಯ ಅಖಾಡಕ್ಕೆ ಇಳಿದು ಭರ್ಜರಿ ಜಯಭೇರಿ ಬಾರಿಸಿರುವ ದಳಪತಿ ವಿಜಯ್ ಅವರು ಗುರುವಾರೂ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಬೆಂಬಲದೊಂದಿಗೆ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರಳೇಕರ್ ಅವರು ಸತತ ಎರಡನೇ ದಿನವೂ ನಿರಾಸೆ ಮೂಡಿಸಿದ್ದಾರೆ. “ಬಹುಮತ ಸಾಬೀತುಪಡಿಸಲು ಅಗತ್ಯವಿರುವ 118 ಶಾಸಕರ ಸಹಿಗಳೊಂದಿಗೆ ಬನ್ನಿ” ಎಂದು ಸ್ಪಷ್ಟವಾಗಿ ಸೂಚಿಸಿ ರಾಜ್ಯಪಾಲರು ಜೋಸೆಫ್ ವಿಜಯ್ ಅವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿದ್ದಾರೆ.
ಇಂದು ಬೆಳಗ್ಗೆ ಚೆನ್ನೈನ ಲೋಕಭವನಕ್ಕೆ ಆಗಮಿಸಿ, ಎರಡನೇ ಬಾರಿಗೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಮತ್ತೊಮ್ಮೆ ಹಕ್ಕು ಮಂಡಿಸಿದರು. ಈ ವೇಳೆ ಟಿವಿಕೆ ಹಿರಿಯ ನಾಯಕರು ವಿಜಯ್ ಅವರೊಂದಿಗೆ ಇದ್ದರು.
ರಾಜ್ಯಪಾಲರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದ ವಿಜಯ್ ಅವರು ಟಿವಿಕೆ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಆದರೆ ರಾಜ್ಯಪಾಲರು ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲ ನಿಮ್ಮ ಬಳಿ ಇದೇಯೇ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸದಿದ್ದರೆ ಟಿವಿಕೆ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರಗಳಿಂದ ಗೆದ್ದ ವಿಜಯ್, ಬುಧವಾರ ಟಿವಿಕೆಗೆ ಔಪಚಾರಿಕವಾಗಿ ಬೆಂಬಲ ನೀಡಿದ ಐದು ಕಾಂಗ್ರೆಸ್ ಶಾಸಕರು ಸೇರಿದಂತೆ 113 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದರು. ಇನ್ನೂ ಐದು ಶಾಸಕರ ಬೆಂಬಲ ಅಗತ್ಯ ಇದೆ.


