ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹೆಸರುಕಾಳು, ಸೂರ್ಯಕಾಂತಿ, ಸೋಯಾಬಿನ್ ಹಾಗೂ ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಲಾಗುತ್ತಿದೆ” ಎಂದರು.
“ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಆದೇಶ ಹೊರಡಿಸಲಾಗಿದೆ. ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಿದೆ” ಎಂದು ಹೇಳಿದರು.
“ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಲಿದೆ. ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್ಗೆ ಕ್ವಿಂಟಲ್ ಗೆ ರೂ 4,892 ಹಾಗೂ ಉದ್ದಿನ ಕಾಳಿಗೆ ಕ್ವಿಂಟಲ್ ಗೆ ರೂ 7,400 ಬೆಲೆ ನಿಗದಿಪಡಿಸಲಾಗಿದೆ” ಎಂದರು.
“ಬೆಂಬಲ ಬೆಲೆಯಲ್ಲಿ ಸುಮಾರು 10 ಲಕ್ಷ ಕ್ವಿಂಟಲ್ ಸೋಯಾಬಿನ್ ಮತ್ತು 2 ಲಕ್ಷ ಕ್ವಿಂಟಲ್ ಉದ್ದಿನಕಾಳು ಖರೀದಿ ಮಾಡಲಾಗುವುದು. 2024-25ನೇ ಸಾಲಿನಲ್ಲಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 4.72 ಲಕ್ಷ ಮೆಟ್ರಿಕ್ ಟನ್ ಸೋಯಾಬಿನ್ ಹಾಗೂ 0.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 0.40 ಲಕ್ಷ ಮೆಟ್ರಿಕ್ ಟನ್ ಉದ್ದಿನಕಾಳು ಇಳುವರಿ ನಿರೀಕ್ಷೆ ಮಾಡಲಾಗಿತ್ತು” ಎಂದು ತಿಳಿಸಿದರು.
“ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್ ಗೆ ರೂ 8,682 ರೂ. ಹಾಗೂ ಸೂರ್ಯಕಾಂತಿಗೆ ರೂ 7,280 ನಿಗದಿಪಡಿಸಲಾಗಿದೆ. ಹೆಸರುಕಾಳು ಖರೀದಿಗೆ 172 ಖರೀದಿ ಕೇಂದ್ರ ಗುರುತಿಸಲಾಗಿದ್ದು, 1982 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 19 ಖರೀದಿ ಕೇಂದ್ರ ಗುರುತಿಸಲಾಗಿದ್ದು, 461 ರೈತರು ನೋಂದಣಿ ಮಾಡಿಕೊಂಡಿದ್ದಾರೆ” ಎಂದರು
“ಕೊಬ್ಬರಿ ಖರೀದಿಯಲ್ಲೂ ಈ ಬಾರಿ ಪ್ರಮುಖ ಪಾತ್ರ ವಹಿಸಲಾಗಿದ್ದು, ಇದೇ ಮೊದಲ ಬಾರಿಗೆ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗಿದೆ. ಎಪಿಎಂಸಿ ಯಾರ್ಡ್ ಗಳಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 14ರಿಂದ 15 ಶೀಥಲ ಗೃಹಗಳನ್ನು ಎಪಿಎಂಸಿಗಳಲ್ಲಿ ನಿರ್ಮಾಣ ಮಾಡಲಾಗುವುದು” ಎಂದು ಹೇಳಿದರು.
“ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿಭಾಗಾವಾರು ವಿಜಿಲೆನ್ಸ್ ಸೆಲ್ಗಳನ್ನು ರಚಿಸಲಾಗಿದೆ. ವಿಜಿಲೆನ್ಸ್ ರಚನೆ ಪರಿಣಾಮ ಎಪಿಎಂಸಿ ಆದಾಯ ಕೂಡ ಹೆಚ್ಚಾಗಿದೆ, ಈ ವರ್ಷ ರೂ 380ರಿಂದ ರೂ 400 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು, ಆರ್ಥಿಕ ವರ್ಷದ 5 ತಿಂಗಳಲ್ಲಿ ರೂ 133.15 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ 77.42 ಕೋಟಿ. ಆದಾಯ ಸಂಗ್ರಹವಾಗಿತ್ತು” ಎಂದು ಹೇಳಿದರು.
ಪವರ್ ಲೂಮ್ ವಿದ್ಯುತ್ ಸಬ್ಸಿಡಿ ಮಿತಿ ರದ್ದು
“ರಾಜ್ಯ ಸರ್ಕಾರ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿ ಮಿತಿ ರದ್ದುಪಡಿಸಿದೆ. ಇದರಿಂದ ಪ್ರತಿ ನೇಕಾರರಿಗೆ ವಾರ್ಷೀಕ ಕನಿಷ್ಟ ರೂ 40,000 ಉಳಿತಾಯವಾಗಲಿದೆ” ಎಂದು ತಿಳಿಸಿದರು.
“10.1 HPಯಿಂದ 20 HPವರೆಗಿನ ವಿದ್ಯುತ್ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳು ಬಳಕೆ ಮಾಡುವ ಪೂರ್ಣ ವಿದ್ಯುತ್ಗೆ ಸಬ್ಸಿಡಿ ನೀಡಲಿದ್ದು, ನೇಕಾರರು ಪ್ರತಿ ಯೂನಿಟ್ ಗೆ ರೂ 1.25 ಮಾತ್ರ ಪಾವತಿ ಮಾಡಬೇಕು. ಸರ್ಕಾರದ ಈ ಕ್ರಮದಿಂದ 4000 ಘಟಕಗಳಿಗೆ ಅನುಕೂಲವಾಗಲಿದೆ” ಎಂದರು.
“ಇದುವರೆಗೆ ಮಾಸಿಕ 500 ಯೂನಿಟ್ ಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿತ್ತು. ಹೆಚ್ಚುವರಿ ಬಳಕೆಯ ವಿದ್ಯುತ್ಗೆ ನೇಕಾರರು ವಿದ್ಯುತ್ ಕಂಪನಿಗಳು ನಿಗದಿಪಡಿಸಿರುವ ದರದಲ್ಲಿ ವಿದ್ಯುತ್ ಶುಲ್ಕ ಪಾವತಿಸಬೇಕಿತ್ತು. ಸರ್ಕಾರ ಸಬ್ಸಿಡಿ ಮಿತಿ ರದ್ದುಪಡಿಸಿರುವುದರಿಂದ ಮಾಸಿಕ ಎಷ್ಟೇ ಯೂನಿಟ್ ವಿದ್ಯುತ್ ಬಳಕೆ ಮಾಡಿದರೂ ರೂ 1.25 ದರ ವಿಧಿಸಲಾಗುವುದು” ಎಂದು ವಿವರಿಸಿದರು.