ಬಿಜೆಪಿಯ ಹಲವು ‘ಅತೃಪ್ತ’ ಶಾಸಕರು ನನ್ನನ್ನು ಸಂಪರ್ಕಿಸಿದ್ದಾರೆ. ಜನವರಿ 26ರ ನಂತರ ನಾವು ಮುಂದಿನ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಎಷ್ಟು ಮಂದಿ ಕಾಂಗ್ರೆಸ್ಗೆ ಸೇರುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯ ಬಿಜೆಪಿ ಮುಖಂಡ ಕುಮಾರ್ ಯಳ್ಳಿಗುತ್ತಿ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, “ಬಿಜೆಪಿಯಿಂದ ಬಂದವರಿಗೆ ಅನ್ಯಾಯ ಆಗಬಾರದು. ಹಾಗಾಗಿ ಅವರ ಇಚ್ಛೆಯಂತೆ ಕಾಂಗ್ರೆಸ್ಗೆ ಸೇರುವವರನ್ನು ಗೌರವಯುತವಾಗಿ ಸ್ವಾಗತಿಸಲಾಗುವುದು. ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಲು ನೀಲನಕ್ಷೆ ಸಿದ್ಧವಾಗಿದೆ” ಎಂದು ತಿಳಿಸಿದರು.
ಲಿಂಗಾಯತ ಸಮುದಾಯದ ಶಾಸಕರನ್ನು ಸೆಳೆಯುವ ಜವಾಬ್ದರಿ ತಮಗೆ ನೀಡಲಾಗಿದೆಯೇ ಎಂದು ಪ್ರಶ್ನಿಸಿದಾಗ, ” ಲಿಂಗಾಯತರು ಮಾತ್ರವಲ್ಲ, ಕಾಂಗ್ರೆಸ್ ಎಲ್ಲರನ್ನು ಸ್ವಾಗತಿಸುತ್ತದೆ” ಎಂದು ಸವದಿ ಸ್ಪಷ್ಟಪಡಿಸಿದರು.
“ಇವತ್ತಿನ ಪರಿಸ್ಥಿತಿಯಲ್ಲಿ ಯಾರೇ ಅಧ್ಯಕ್ಷರಾದರೂ ಚೇತರಿಸಿಕೊಳ್ಳೋದು ಬಹಳ ಕಷ್ಟ ಇದೆ. ಈಗಾಗಲೇ ಬಿಜೆಪಿಯಲ್ಲಿ ಬಹಳಷ್ಟು ಅಸಮಾಧಾನ ಇದೆ. ಸ್ಪೋಟ ಆಗೋದು ಮಾತ್ರ ಬಾಕಿ ಇದೆ. ಕೆಲವರು ಒಳಗೊಳಗೆ ಕುದಿಯುತ್ತಿದ್ದು, ಯಾವಾಗ ಜ್ವಾಲಾಮುಖಿ ಹೊರಗೆ ಬೀಳುತ್ತೆ ಗೊತ್ತಿಲ್ಲ, ಆದ್ರೆ ಅಸಮಧಾನ ಸ್ಪೋಟಗೊಳ್ಳೋದು ಖಂಡಿತ” ಎಂದು ಸವದಿ ಭವಿಷ್ಯ ನುಡಿದರು.
“ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚು ಕೇಂದ್ರೀಕೃತವಾಗಿದ್ದರೆ, ವಿಜಯೇಂದ್ರ ಅವರು ದಕ್ಷಿಣ ಕರ್ನಾಟಕದ ಮೈಸೂರು, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಪಕ್ಷದ ನಿರ್ಧಾರಕ್ಕೆ ಬಿಜೆಪಿಯ ಹಲವು ನಾಯಕರಿಗೆ ಒಪ್ಪಿಗೆಯಿಲ್ಲ. ವಿಜಯೇಂದ್ರ ಅವರಂತಹ ಕಿರಿಯ ನಾಯಕರ ಅಡಿಯಲ್ಲಿ ಕೆಲಸ ಮಾಡುವುದು ಹೇಗೆ ಎಂದು ಹಿರಿಯ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ” ಎಂದು ಹೇಳಿದರು.