ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಆಡಿದ ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಹಿರಿಯರಿಗೆ ಮತ್ತು ಸ್ಥಾನಕ್ಕೆ ಗೌರವ ನೀಡಲೇಬೇಕು ಎಂದು ಮಾಜಿ ಶಾಸಕ ಸಿಟಿ ರವಿ ಅವರು ಸ್ವಪಕ್ಷದ ಸಂಸದನ ಅವಹೇಳನಕಾರಿ ಮಾತುಗಳನ್ನು ಖಂಡಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, “ಸಿದ್ದರಾಮಯ್ಯ ಅವರ ಮನಸ್ಸಿಗೆ ಘಾಸಿಯುಂಟು ಮಾಡುವ ಭಾಷೆ ಬಳಕೆಯಾದರೆ ಅದನ್ನು ತಾನು ಸಮರ್ಥಿಸುವುದಿಲ್ಲ. ಹೆಗಡೆಯವರ ಕಾರ್ಯಶೈಲಿ ಭಿನ್ನವಾಗಿರಬಹುದು, ಹಾಗಂತ ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಏಕವಚನದಲ್ಲಿ ಮಾತಾಡುವುದು ಸರಿಯಲ್ಲ” ಎಂದರು.
“ಮೊಘಲರ ಆಳ್ವಿಕೆಯಲ್ಲಿ ಮತ್ತ ದಕ್ಷಿಣ ಭಾರತದಲ್ಲಿ ಆದಿಲ್ ಶಾಹಿ, ನಿಜಾಮ ಮೊದಲಾದವರ ಅರಸೊತ್ತಿಗೆಯ ಕಾಲದಲ್ಲಿ 42,000 ಕ್ಕಿಂತ ಹೆಚ್ಚು ದೇವಸ್ಥಾನಗಳನ್ನು ಬೀಳಿಸಿ ಮಸೀದಿಗಳನ್ನು ನಿರ್ಮಿಸಿದ್ದು ಸತ್ಯ, ಮಂದಿರವಿದ್ದ ಜಾಗದಲ್ಲಿ ಕಟ್ಟಲಾಗಿರುವ ಮಸೀದಿಯಲ್ಲಿ ನಮಾಜ್ ಸಲ್ಲಿಸುವುದು ಹರಾಮ್ ಅಂತ ಭಾರತೀಯ ಮುಸಲ್ಮಾನರಿಗೆ ಮನವರಿಕೆಯಾದ ದಿನ ಎಲ್ಲವೂ ತಿಳಿಯಾಗಲಿದೆ” ಎಂದು ರವಿ ಹೇಳಿದರು.
ಅನಂತಕುಮಾರ್ ಹೆಗಡೆ ಮಾತುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೋಮವಾರ ಖಂಡಿಸಿದ್ದರು. ಈಗ ಸಿ ಟಿ ರವಿ ಸೇರಿದಂತೆ ಇತರೆ ನಾಯಕರು ಖಂಡಿಸುತ್ತಿದ್ದಾರೆ.