Homeಕರ್ನಾಟಕರಾಹುಲ್ ಗಾಂಧಿ ಪಾದಯಾತ್ರೆ ದೇಶಕ್ಕೆ ಶಾಂತಿ ಸಂದೇಶ ನೀಡಿದೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ರಾಹುಲ್ ಗಾಂಧಿ ಪಾದಯಾತ್ರೆ ದೇಶಕ್ಕೆ ಶಾಂತಿ ಸಂದೇಶ ನೀಡಿದೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ಭಾರತ ಜೋಡೋ ಯಾತ್ರೆಯ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಶ್ರೀ ಬಿ.ಕೆ. ಹರಿಪ್ರಸಾದ್ ಅವರು, ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಜಾತಿ-ಧರ್ಮ ವೈಷಮ್ಯ, ಹಿಂಸೆ ಮತ್ತು ದ್ವೇಷದ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಅವರು ನಡೆಸಿದ ಪಾದಯಾತ್ರೆ ದೇಶದ ಏಕತೆ ಮತ್ತು ಸೌಹಾರ್ದತೆಯನ್ನು ಕಾಪಾಡಲು ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಭಾರತ ಜೋಡೋ ಯಾತ್ರೆಯ ಮೂಲ ಉದ್ದೇಶವನ್ನು ನೆನಪಿಸಿಕೊಂಡ ಹರಿಪ್ರಸಾದ್, “ದೇಶದಲ್ಲಿ ಜಾತಿ, ಧರ್ಮಗಳ ವೈಷಮ್ಯದಿಂದ ಹತ್ಯೆ, ದಲಿತರ ಮೇಲೆ ಹಲ್ಲೆ, ದನದ ಮಾಂಸ ಹೊಂದಿದ್ದಾರೆ ಎಂದು ಹಲ್ಲೆ ಮಾಡುತ್ತಿದ್ದರು. ಬಿಜೆಪಿಯವರು ಹಿಂಸೆಯ ವಾತಾವರಣ ಸೃಷ್ಟಿಸಿದಾಗ ಅವರಿಗೆ ಉತ್ತರ ಕೊಡುವವರು ಯಾರೂ ಇರಲಿಲ್ಲ” ಎಂದು ಹೇಳಿದರು.

ಗುಜರಾತ್‌ನ ಬಲ್ಕಿಸ್ ಬಾನು ಪ್ರಕರಣವನ್ನು ಉಲ್ಲೇಖಿಸಿ, ಮಗುವಿನ ಮುಂದೆ ತಾಯಿಯ ಮೇಲೆ ಅತ್ಯಾಚಾರ ಮತ್ತು 3 ವರ್ಷದ ಮಗುವಿನ ಹತ್ಯೆ ನಡೆದಿದ್ದು, ಬಾಂಬೆ ಹೈಕೋರ್ಟ್ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ನೆನಪಿಸಿದರು. “ನಂತರ ಬಿಜೆಪಿಯವರು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಿ, ಹೂವಿನ ಹಾರ ಹಾಕಿ ಸಿಹಿ ಹಂಚಿದರು. ಸಮಾಜ ಇಷ್ಟು ಕುಸಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ” ಎಂದು ಅವರು ಟೀಕಿಸಿದರು.

ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೆಮುಲ ಅಸ್ಪೃಶ್ಯತೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸ್ಮರಿಸಿ, “ಆತನ ತಾಯಿಯ ಕಣ್ಣೀರು ಒರೆಸಲು ರಾಹುಲ್ ಗಾಂಧಿ ಹೋದರು. ಇಂತಹ ನೂರಾರು ಘಟನೆಗಳು ಬಿಜೆಪಿ ಬಂದ ನಂತರ ನಡೆದವು. ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ ಎಂದು ಆತ್ಮಸ್ಥೈರ್ಯ ತುಂಬಿದ್ದು ರಾಹುಲ್ ಗಾಂಧಿ ಮಾತ್ರ” ಎಂದು ಹೇಳಿದರು.

ಕರ್ನಾಟಕದಲ್ಲಿ ಹಿಜಾಬ್, ಆಜಾನ್, ಹಲಾಲ್ ವಿವಾದಗಳನ್ನು ಬಿಜೆಪಿ ಪೋಷಿತ ಸಂಘಟನೆಗಳು ಹುಟ್ಟುಹಾಕಿದ್ದನ್ನು ಟೀಕಿಸಿ, “ಭಾರತ ದೇಶ ಇವರ ಅಪ್ಪನ ಮನೆ ಆಸ್ತಿಯೇ? ಬೇರೆ ಧರ್ಮದವರು ಸಹ ಸ್ವಾತಂತ್ರ್ಯಕ್ಕಾಗಿ ರಕ್ತ ಮತ್ತು ಬೆವರು ಹರಿಸಿದ್ದಾರೆ. ಪ್ರತಿಯೊಬ್ಬರಿಗೂ ಇಲ್ಲಿ ಹಕ್ಕಿದೆ” ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಮಣಿಪುರದಿಂದ ಮುಂಬೈವರೆಗೆ ಒಟ್ಟು ಸುಮಾರು 10 ಸಾವಿರ ಕಿ.ಮೀ. ಪಾದಯಾತ್ರೆ ನಡೆಸಿದ್ದನ್ನು ನೆನಪಿಸಿ, ಅದು ಮಹಾತ್ಮಾ ಗಾಂಧಿಯವರ ದಂಡಿ ಯಾತ್ರೆಯಂತೆ ಬಿಜೆಪಿಗೆ ನಡುಕ ಹುಟ್ಟಿಸಿದೆ ಎಂದು ಹೇಳಿದರು. “ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಲು ಪಾದಯಾತ್ರೆ ಮಾಡಲಿಲ್ಲ. ಅವರು ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು, ಸಫಾಯಿ ಕರ್ಮಚಾರಿಗಳು, ದೇವದಾಸಿಯರೊಂದಿಗೆ ಸಂವಾದ ನಡೆಸಿ ಬಡವರ ನೋವು ಅರಿತರು” ಎಂದು ಅವರು ವಿವರಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಕೇವಲ ಗ್ಯಾರಂಟಿ ಯೋಜನೆಗಳಿಂದಲ್ಲ, ರಾಜ್ಯದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲಸಲು ಎಂದು ಹೇಳಿ, “ಅಂಧಭಕ್ತರು, ಸೆಗಣಿ ಭಕ್ತರು ಕೋಮುದ್ವೇಷ ಹರಡುತ್ತಿದ್ದುದನ್ನು ನಿಲ್ಲಿಸಿದ್ದು ನಮ್ಮ ದೊಡ್ಡ ಸಾಧನೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆದಿದ್ದೇವೆ” ಎಂದು ಹರಿಪ್ರಸಾದ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು “ವಿಷಗುರು” ಮತ್ತು “ತಡಿಪಾರ್” ಎಂದು ಕರೆದ ಅವರು, ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ 1.40 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವಂತೆ ಮಾಡಲು ಮುಂದಾಗಿದ್ದರು ಎಂದು ಆರೋಪಿಸಿದರು. ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಗಟ್ಟಿಯಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

“ರಾಜಕಾರಣಕ್ಕೆ ಬರುವುದು ಜೀವನ ಮಾಡಲಲ್ಲ, ಜನರ ಜೀವನ ಬದಲಿಸಲು. ಸಮಾಜದ ಕೊನೆಯ ವ್ಯಕ್ತಿಯ ಕಣ್ಣೀರು ಒರೆಸಲು ಸರ್ಕಾರ ಬದ್ಧವಾಗಿರಬೇಕು ಎಂಬ ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ್ ಅವರ ಸಂದೇಶವನ್ನು ಪಾಲಿಸೋಣ” ಎಂದು ಹರಿಪ್ರಸಾದ್ ಅವರ ಮಾತುಗಳನ್ನು ಕೊನೆಗೊಳಿಸಿದರು. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳ ಹಿಂದೆ ನಿಂತು, ರಾಹುಲ್ ಗಾಂಧಿ ಅವರ ಶಾಂತಿ-ಸೌಹಾರ್ದತೆಯ ಸಂದೇಶವನ್ನು ಹರಡಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments