ಸಮಾಜ ಬದಲಾಗಬೇಕು, ಜನರು ಬದಲಾಗಬೇಕು ಎಂದು ಬಯಸುವ ’ನಾನು’ ಮೊದಲು ಆ ಹಾದಿಯನ್ನು ತುಳಿಯಬೇಕು. ವ್ಯಕ್ತಿ ಬದಲಾವಣೆಯೇ ಸಮಾಜ ಬದಲಾವಣೆಗೆ ಮುನ್ನುಡಿ. ಆ ನಂತರ ಸಾಮುದಾಯಿಕ ಹೊಣೆಗಾರಿಕೆ ಮತ್ತು ಪಾಲ್ಗೊಳ್ಳುವಿಕೆ ತನ್ನಿಂದ ತಾನೇ ಆಗುತ್ತದೆ ಎಂದು ನಂಬಿದ್ದಾರೆ ಎಂ.ಪಿ. ಗಿರೀಶ್.
’ಜೀವನವು ಉದ್ದವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು’
– ಡಾ.ಬಿ.ಆರ್.ಅಂಬೇಡ್ಕರ್
ಹೌದು, ಬಾಬಾ ಸಾಹೇಬರ ಈ ಉಕ್ತಿ ಬಹಳ ಶ್ರೇಷ್ಠವಾದುದು. ಜೀವ ಜಗತ್ತಿಗೆ ಪ್ರವೇಶಿಸುವ ಯಾವುದೇ ಜೀವಿಗೆ ಅದರದ್ದೇ ಕಾರ್ಯಕಾರಣ ಇದ್ದೇ ಇರುತ್ತದೆ. ಅದಿಲ್ಲದೇ ಒಂದು ವಸ್ತುವಿನ ಸೃಷ್ಟಿ ಸಾಧ್ಯವೇ ಇಲ್ಲ. ಮನುಷ್ಯ ಕೂಡ ಇದರ ಒಂದು ಭಾಗ. ನಾವು ಹುಟ್ಟಿದ ಮೇಲೆ ಜೀವನದ ಸಾರ್ಥಕ್ಯವನ್ನು ಕಂಡುಕೊಳ್ಳಲೇಬೇಕು. ಆದರೆ ಬದುಕು ಸಾರ್ಥಕ ಎನಿಸಿಕೊಳ್ಳುವುದು ಹೇಗೆ?
ಕೊಟ್ಟ ಹಣ ಕ್ಷಣಿಕ.. ಕೊಡಿಸಿದ ಆಭರಣ ಅವಸರಕ್ಕೆ ಸೀಮಿತ.. ಕೂಡಿಸಿ ಕೊಟ್ಟ ಆಸ್ತಿ ತನ್ನವರಿಗೆ ಸೀಮಿತ.. ಇದೆಲ್ಲವನ್ನೂ ಬಿಟ್ಟು ಸಮಾಜವನ್ನು ವಿಶಾಲ ದೃಷ್ಟಿಯಲ್ಲಿ ಪರಿವರ್ತಿಸುವ ಸಂಕಲ್ಪ ಪ್ರತಿಯೊಬ್ಬರಿಂದಲೂ ಆಗಬೇಕು. ಅದನ್ನು ಬಾಬಾ ಸಾಹೇಬರು ಒಂದು ಸಾಲಿನಲ್ಲಿ ಹೀಗೆ ವಿವರಿಸಿದ್ದಾರೆ… ’ಶಿಕ್ಷಣವು ಸಿಂಹಿಣಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು…’
ಶಿಕ್ಷಣ ಎಂದರೆ ನಾಲ್ಕು ಗೋಡೆಗಳ ಮಧ್ಯೆ ಗುರು ಕಲಿಸಿದ್ದು ಮಾತ್ರವಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದ ಚಿಂತಕರ ಬದುಕನ್ನು ಅರಿತು ಸಮಾಜಕ್ಕೆ ಅರ್ಪಿಸುವುದು. ಈ ಮಹನೀಯರ ವಿಚಾರಧಾರೆಗಳನ್ನು ಹಂಚುವುದೂ ಒಂದು ಸಾಮಾಜಿಕ ಜವಾಬ್ದಾರಿ.
ಬಹುತೇಕರು ಇಂತಹ ವೈಚಾರಿಕ ಹಾದಿ ತುಳಿಯುವುದು ಅಪರೂಪ. ಆದರೆ, ಬೆಂಗಳೂರಿನಂತಹ ಮಾಯಾನಗರಿಯ ಮಡಿಲಲ್ಲೇ ಇರುವ ದೇವನಹಳ್ಳಿ ತಾಲೂಕಿನ ಮಲ್ಲಾಪುರದ ಎಂ.ಪಿ. ಗಿರೀಶ್ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹರಡುವುದೇ ನನ್ನ ಜೀವನದ ಸಂಕಲ್ಪ ಎಂದು ಬದುಕುತ್ತಿದ್ದಾರೆ. 2022ರಿಂದ ಈ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕಾರ್ಯಗಳು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿವೆ.
’ಹುಟ್ಟು ಮತ್ತು ಸಾವಿನ ನಡುವಿನ ಅಂತರವೇ ಜೀವನ. ಈ ಅಂತರವನ್ನು ನೀವು ಎಷ್ಟು ವರ್ಷ ಬದುಕಿದ್ದೀರಿ ಎಂಬುದರಿಂದ ಅಳೆಯಲಾಗುವುದಿಲ್ಲ, ಬದಲಿಗೆ ಎಷ್ಟು ಜನರ ಹೃದಯದಲ್ಲಿ ಬದುಕಿದ್ದೀರಿ ಎಂಬುದರಿಂದ ಅಳೆಯಲಾಗುತ್ತದೆ’ ಹೀಗೆ ಬದುಕಿ ತೋರಿಸುತ್ತಿದ್ದಾರೆ ಎಂ.ಪಿ.ಗಿರೀಶ್.
ಗಿರೀಶ್ ಅವರಿಗೆ ಈಗ 37 ವರ್ಷ (ಸೆಪ್ಟೆಂಬರ್ 6). ತಮ್ಮ ಜನ್ಮ ದಿನವನ್ನೇ ಇವರು ಅಂಬೇಡ್ಕರ್ ವಿಚಾರ ಪ್ರಚಾರದ ಕರ್ಮದಿನವನ್ನಾಗಿ (ಕರ್ತವ್ಯದಿನ) ಪರಿವರ್ತಿಸಿಕೊಂಡಿದ್ದಾರೆ. 30 ವರ್ಷದವರೆಗೂ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳದ ಅವರು ತಮ್ಮ ಅಪಾರ ಸ್ನೇಹ ವಲಯದ ಒತ್ತಾಯಕ್ಕೆ ಮಣಿದು 2022ರಲ್ಲಿ ಮೊದಲಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು ಸುಮಾರು 5,೦೦೦ಕ್ಕೂ ಅಧಿಕ ಮಂದಿಗೆ ಊಟಹಾಕಿಸಿದ್ದರು. ಆದರೆ, ಆ ದಿನ ಗಿರೀಶ್ ಅವರ ಬದುಕಲ್ಲಿ ಸಾರ್ಥಕ ಬದಲಾವಣೆಗೆ ಆದಿ ಮೊದಲಾಯಿತು. ಅವತ್ತು ಅಂಬೇಡ್ಕರ್ ಅವರ ಬದುಕು, ಹೋರಾಟ, ವಿಚಾರಧಾರೆ ಮತ್ತು ತತ್ವಗಳನ್ನು ಇಡೀ ಸಮಾಜಕ್ಕೆ ತಲುಪಿಸಬೇಕು ಎನ್ನುವ ಮನೋಸಂಕಲ್ಪ ಅವರಿಗಾಗಿತ್ತು. ನನ್ನ ಜನ್ಮದಿನ ಅಂಬೇಡ್ಕರ್ ವಿಚಾರ ಹರಿವಿನ ಸಂಕಲ್ಪ ದಿನ ಆಗಬೇಕು ಎಂದು ಅವರು ಅಂದು ತೊಟ್ಟ ಸಂಕಲ್ಪ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ.
ಇದನ್ನೇ ಅಣ್ಣ ಬಸವಣ್ಣ,
’ಮತ್ತೊಂದ ಕಾಣದೆ, ಮತ್ತೊಂದ ಕೇಳದೆ,
ನಿಮ್ಮ ಶರಣರ ಪಾದವಲ್ಲದೆ
ಅನ್ಯವಿಷಯಕ್ಕೆಳಸದಂತೆ ಇರಿಸಯ್ಯಾ,
ಕೂಡಲಸಂಗಮದೇವಾ’ ಎಂದಿದ್ದು.
’ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಈ ಜೀವನದ ನಿಜವಾದ ಉದ್ದೇಶ ಜ್ಞಾನವನ್ನು ಪಡೆಯುವುದು ಮತ್ತು ಸ್ವಾರ್ಥವನ್ನು ಬಿಟ್ಟು ಇತರರಿಗಾಗಿ ಬದುಕುವುದು’ ಎಂಬ ಮಾತಿನಂತೆ ಗಿರೀಶ್ ಅವರು ಹೆಜ್ಜೆ ಹಾಕುತ್ತಿದ್ದಾರೆ.
2023ರಲ್ಲಿ ಮೊದಲ ಬಾರಿಗೆ 186 ಜನರನ್ನು ವಿಮಾನದಲ್ಲಿ ಮುಂಬೈಗೆ ಕರೆದೊಯ್ದಿದ್ದರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಾಧಿ, ನಿವಾಸ, ಸ್ಮಾರಕ ಹೀಗೆ ಬದುಕು ಮತ್ತು ಹೋರಾಟದ ಐತಿಹ್ಯ ಸಾರುವ ಎಲ್ಲ ಸ್ಥಳಗಳ ಪರಿಚಯ ಮಾಡಿಸಿದ್ದರು. ಅಷ್ಟಕ್ಕೆ ನಿಲ್ಲಲಿಲ್ಲ ಅವರ ಈ ಯಾನ. ಪ್ರತಿವರ್ಷ ನೂರಾರು ಜನರನ್ನು ಮುಂಬೈಗೆ ಕರೆದೊಯ್ದು ಅಂಬೇಡ್ಕರ್ ಜೀವನ ದರ್ಶನ ಮಾಡಿಸುವ ಕೆಲಸ ನಿರಂತರವಾಗಿ ಸಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರು ಅಂಬೇಡ್ಕರ್ ಅವರನ್ನು ಅರಿತುಕೊಳ್ಳಲು ದೊಡ್ಡ ವೇದಿಕೆಯನ್ನೇ ಕಲ್ಪಿಸಿದ್ದಾರೆ ಗಿರೀಶ್.
ಎಲ್ಲ ಸಮುದಾಯವನ್ನೂ ಒಳಗೊಂಡು ಪ್ರವಾಸಕ್ಕೆ ಕೊಂಡೊಯ್ಯುವ ಮೂಲಕ ಅಂಬೇಡ್ಕರ್ ಅವರು ಯಾರೊಬ್ಬರ ವಿರೋಧಿಯಲ್ಲ. ಸರ್ವ ಸಮುದಾಯದ ಹಿತೈಷಿ ಎಂದು ನಿರೂಪಿಸುವ ಪರಿವರ್ತನೆಯ ಕೆಲಸ ಇವರಿಂದ ಆಗಿದೆ. ಅಷ್ಟೇ ಅಲ್ಲ, ವೀರಬ್ರಹ್ಮೇಂದ್ರ ಸ್ವಾಮಿಗಳ ಸಮಾಧಿ ಸೇರಿ ಹಲವು ಮಹನೀಯರ ಸ್ಮಾರಕಗಳಿಗೂ ಜನರನ್ನು ಕೊಂಡೊಯ್ದು ಸಮಸಮಾಜದ ಕಲ್ಪನೆಗೆ ಸಂಕಲ್ಪವಾಗಿ ನಿಂತಿದ್ದಾರೆ ಗಿರೀಶ್.
ಅಂಬೇಡ್ಕರ್ ಅವರ ಬಗ್ಗೆ ಕೆಲ ಸಮುದಾಯಗಳಲ್ಲಿ ಹರಡಿದ್ದ ತಪ್ಪು ಕಲ್ಪನೆಯನ್ನು ನಿವಾರಣೆ ಮಾಡುತ್ತಿದ್ದೇನೆ ಎಂದು ಗಿರೀಶ್ ಹೆಮ್ಮೆ ಪಡುತ್ತಾರೆ. ಆ ಮೂಲಕ ಅಸ್ಪೃಷ್ಯತೆ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ಅಂಬೇಡ್ಕರ್ ವಿರೋಧಿಸಿದ್ದರು ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.
ಅಂಬೇಡ್ಕರ್ ಅವರ ಸಮಾಧಿ ಸ್ಥಳದಲ್ಲೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ಅಲ್ಲಿಯೇ ಜನ್ಮದಿನದ ಸಾರ್ಥಕ್ಯ ಸಾಧ್ಯವಾಗಿದೆ.

ಈ ವರ್ಷ ಸರ್ಕಾರಿ ಶಾಲೆ ಮಕ್ಕಳು, ಅನಾಥಾಶ್ರಮದ ಮಕ್ಕಳು, ಉದ್ಯಮಿಗಳು, ಅರ್ಚಕರು, ಸಮಾಜಸೇವಕರು ಹೀಗೆ ನಾನಾ ಕ್ಷೇತ್ರಗಳ ಜನರನ್ನು ಮುಂಬೈಗೆ ಕರೆದೊಯ್ಯುವ ವಿಶಿಷ್ಟ ಪ್ರಯತ್ನವನ್ನು ಗಿರೀಶ್ ಅವರು ಮಾಡಿದ್ದಾರೆ. ಇದೆಲ್ಲದರ ಹಿಂದೆ ಅವರಿಗೆ ಪ್ರಚಾರ ಗಿಟ್ಟಿಸಿಕೊಳ್ಳುವ ಹಂಬಲವಿಲ್ಲ. ವೈಭವೀಕರಿಸಿಕೊಳ್ಳುವ ಆಸೆಯೂ ಇಲ್ಲ. ನಿಸ್ವಾರ್ಥವಾಗಿ ಸಮುದಾಯದ ಒಳಿತಿನ ಚಿಂತನೆ ನಡೆದಿದೆ.
ಅಂಬೇಡ್ಕರ್ ಅವರನ್ನು ಜನ್ಮಜಯಂತಿಗಳಿಗೆ ಮಾತ್ರ ಸೀಮಿತಗೊಳಿಸದೆ ಸಮಾಜ ಪರಿವರ್ತನೆಯ ನಿತ್ಯ ಸಂದೇಶವಾಗಿಸಬೇಕು ಎನ್ನುವ ಕಾಳಜಿ ಗಿರೀಶ್ ಅವರದ್ದು. ಬಸವಣ್ಣ, ವೀರಬ್ರಹ್ಮೇಂದ್ರರು ಹೀಗೆ ಅನೇಕ ಸಮಾಜ ಸುಧಾರಕರ ಮೌಲ್ಯಗಳನ್ನೂ ಪ್ರಚಾರ ಮಾಡುವ ಮೂಲಕ, ತಾನೂ ಸೇರಿದಂತೆ ಜನರು ಅಳವಡಿಸಿಕೊಂಡಾಗ ತಾರತಮ್ಯ ರಹಿತ ಸಮಾಜ ನಿರ್ಮಾಣ ಸಾಧ್ಯ ಎನ್ನುವುದು ಗಿರೀಶ್ ಅವರ ನಂಬಿಕೆ. ತಮ್ಮ ಸ್ನೇಹ ಬಳಗದ ಮೂಲಕ ಇದನ್ನೊಂದು ಕಾಯಕಯಾತ್ರೆಯನ್ನಾಗಿ ಅವರು ಪರಿವರ್ತಿಸಿದ್ದಾರೆ.
ಇದಿಷ್ಟೇ ಅಲ್ಲ, ಅವರು ತಮ್ಮ ಆಸುಪಾಸು ಪ್ರದೇಶಗಳಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಕೈಜೋಡಿಸುವ ಮೂಲಕ ಸಮಾಜದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಹರಡುವ ಕೆಲಸವನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
’ಟೀಂ ಎಂಪಿಜಿಎಸ್ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ, ಹಲವರು ಸಂಘಟಿಸುವ ಕಾರ್ಯಕ್ರಮಗಳಿಗೆ ನೆರವಾಗಿದ್ದಾರೆ.
ಇದೇ ಸೆಪ್ಟಂಬರ್ 6ರಂದು ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ನಲ್ಲೂರಿನಲ್ಲಿ ’ಗಂಗಮ್ಮ ತಾಯಿ ದೇವರ ಹರಕೆಯ ಔತಣಕೂಟ’ವನ್ನೂ ಏರ್ಪಡಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ಸಹಸ್ರಾರು ಜನರಿಗೆ ಮಾಂಸಾಹಾರ ಮತ್ತು ಸಸ್ಯಾಹಾರ ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಇಲ್ಲೂ ಅಂಬೇಡ್ಕರ್ ಅವರೂ ಸೇರಿದಂತೆ ಸಮಾಜಸುಧಾರಕರ ಜೀವನ ಮೌಲ್ಯದ ಪ್ರಚಾರ ಮಾಡುವ ಪ್ರಯತ್ನ ಗಿರೀಶ್ ಅವರಿಂದ ಆಗುತ್ತಿದೆ.
ಹೀಗೆ ವೈಚಾರಿಕ ಪ್ರಚಾರ ಕ್ರಾಂತಿಯ ಕೆಲಸದಲ್ಲಿ ಎಲೆಮರೆ ಕಾಯಿಯಂತೆ ಸಾಗುತ್ತಿರುವ ಎಂ.ಪಿ. ಗಿರೀಶ್ ಅವರದ್ದು ದೇವನಹಳ್ಳಿ ತಾಲೂಕು. 1990ರಲ್ಲಿ ಜನಿಸಿದ ಅವರು ಮಲ್ಲಾಪುರದಲ್ಲಿ ಪ್ರಾಥಮಿಕ ಓದನ್ನು ಮುಗಿಸಿ ದೇವನಹಳ್ಳಿಯಲ್ಲಿ ಡಿಗ್ರಿ ಶಿಕ್ಷಣ ಪಡೆದರು. ಕಲಾ ವಿಭಾಗದಲ್ಲಿ ಪದವೀಧರರಾದ ನಂತರ ಉದ್ಯಮ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು.
ವೃತ್ತಿ ಬದುಕಿನಾಚೆಗೆ ಸಮಾಜಕ್ಕೆ ನಾನು ಏನನ್ನಾದರೂ ನೀಡಬೇಕು ಎನ್ನುವ ಹಂಬಲ ಅವರನ್ನು ಸಮಸಮಾಜ ಕಟ್ಟುವ ಆಶಯದ ಹಾದಿಗೆ ತಂದು ನಿಲ್ಲಿಸಿದೆ. ಸಾಹಿತ್ಯದ ಓದು, ಸಾಮಾಜಿಕ ಚಟುವಟಿಕೆಗಳ ಆಸಕ್ತಿ ಇವರಲ್ಲಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿದೆ. ಸಾಮಾಜಿಕ ಅರಿವು ಸಮಾಜದಲ್ಲಿ ಆರೋಗ್ಯಕರ ವಾತಾವರಣ ತರಬಲ್ಲದು ಎನ್ನುವ ಅಚಲ ನಂಬಿಕೆ ಇಟ್ಟು ಸಾಗುತ್ತಿದ್ದಾರೆ.
ಸಮಾಜ ಬದಲಾಗಬೇಕು, ಜನರು ಬದಲಾಗಬೇಕು ಎಂದು ಬಯಸುವ ’ನಾನು’ ಮೊದಲು ಆ ಹಾದಿಯನ್ನು ತುಳಿಯಬೇಕು. ವ್ಯಕ್ತಿ ಬದಲಾವಣೆಯೇ ಸಮಾಜ ಬದಲಾವಣೆಗೆ ಮುನ್ನುಡಿ. ಆ ನಂತರ ಸಾಮುದಾಯಿಕ ಹೊಣೆಗಾರಿಕೆ ಮತ್ತು ಪಾಲ್ಗೊಳ್ಳುವಿಕೆ ತನ್ನಿಂದ ತಾನೇ ಆಗುತ್ತದೆ ಎಂದು ನಂಬಿದ್ದಾರೆ ಎಂ.ಪಿ. ಗಿರೀಶ್.
ಎಐ ಜಗತ್ತಿನ ತಾಂತ್ರಿಕತೆಯ ತುದಿಬೆರಳಿನ ತಾಳಕ್ಕೆ ಕುಣಿಯುವ ಯುವ ಮನಸ್ಸುಗಳು ವೈಚಾರಿಕ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್, ಬಸವಣ್ಣ ಅವರಂತಹ ಸುಧಾರಕರ ವಿಚಾರಗಳನ್ನು ಹರಡುವ ನದಿಗಳಾಗಬೇಕು ಎನ್ನುವ ಗಿರೀಶ್ ಅವರ ಸಂಕಲ್ಪ ಈಗಿನ ತಲೆಮಾರಿಗೆ ಅನುಕರಣೀಯ.ಅವರ ಈ ಸಮಾಜ ಪರಿವರ್ತನೆಯ ಪಯಣ ಯಶಸ್ವಿಯಾಗಿ ಸಾಗಲಿ.
ಬರೆಹ: ಅಭಿಮನ್ಯು


