ವಿಜಯಪುರ ವಿಮಾನ ನಿಲ್ದಾಣದಲ್ಲಿ ಬರಲಿದೆ ಮಹತ್ವಾಕಾಂಕ್ಷಿ ಯೋಜನೆ
ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಬಾರಾಮತಿಯಲ್ಲಿ ನೆಲೆಯೂರಿರುವ ಕಾರ್ವರ್ ಏವಿಯೇಷನ್ ಸಂಸ್ಥೆಯು ವಿಮಾನ ಚಾಲನಾ ತರಬೇತಿ ಅಕಾಡೆಮಿಯನ್ನು (ಸ್ಯಾಟಲೈಟ್ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿ) ಸ್ಥಾಪಿಸಲು ಆಸಕ್ತಿ ತೋರಿದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಸದಾವಕಾಶ ಸೃಷ್ಟಿಯಾಗಲಿದೆ. ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಇನ್ನೊಂದು ಸಭೆ ನಡೆಸಿ, ಇದರ ರೂಪುರೇಷೆ ನಿರ್ಧರಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಬುಧವಾರ ತಮ್ಮನ್ನು ಇಲ್ಲಿನ ಖನಿಜ ಭವನದಲ್ಲಿ ಭೇಟಿಯಾದ ಕಾರ್ವರ್ ಏವಿಯೇಷನ್ ಸಂಸ್ಥೆಯ ನಿರ್ದೇಶಕ ನೆವಿಲ್ ಭರೂಚ ಮತ್ತು ವ್ಯವಸ್ಥಾಪಕ ಪರಮೇಶ್ ಪಾರೀಖ್ ಅವರೊಂದಿಗೆ ಸಚಿವರು ಮಾತುಕತೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಸಚಿವರು, ಕಂಪನಿಯು ವಿಜಯಪುರದಲ್ಲಿ ತನ್ನ ಯೋಜನೆಯನ್ನು ಕಾರ್ಯರೂಪಕ್ಕಿಳಿಸಲು ವಿಮಾನ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡಂತೆ 2.5 ಎಕರೆ ಜಾಗವನ್ನು ಕೇಳಿದೆ. ಯೋಜನೆ ಜಾರಿಗೊಂಡರೆ ಇಲ್ಲಿ ವಿಮಾನ ಹಾರಾಟ ತರಬೇತಿ, ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಪೂರಕ ಚಟುವಟಿಕೆಗಳು (ಎಂ.ಆರ್.ಓ), ಗ್ರೌಂಡ್ ಸಪೋರ್ಟ್ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದರು.
ವಿಮಾನ ಹಾರಾಟ ತರಬೇತಿ ಅಕಾಡೆಮಿ ಕಾರ್ಯಾರಂಭ ಮಾಡಿದರೆ ವಿಮಾನ ನಿಲ್ದಾಣದ ರನ್-ವೇ, ಟ್ಯಾಕ್ಸಿವೇ, ಏಪ್ರಾನ್ ಇವುಗಳನ್ನು ಕಂಪನಿ ಬಳಸಿಕೊಳ್ಳಲು ಅವಕಾಶವಿರುತ್ತದೆ. ಅದು ಕೇಳಿರುವ ಸ್ಥಳಾವಕಾಶದಲ್ಲಿ ಹ್ಯಾಂಗರ್ಸ್, ತರಬೇತಿ ಮೂಲಸೌಕರ್ಯ, ವಿಮಾನ ನಿರ್ವಹಣೆಗೆ ಬೇಕಾದ ಸೌಲಭ್ಯಗಳು ಬರಲಿವೆ. ಇದರಿಂದ ಪ್ರಾದೇಶಿಕವಾಗಿ ಉತ್ತರ ಕರ್ನಾಟಕದಲ್ಲಿ ವೈಮಾನಿಕ ಸಂಪರ್ಕ ವ್ಯವಸ್ಥೆ ಸುಧಾರಿಸಲಿದೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು.
ಕಾರ್ವರ್ ಏವಿಯೇಷನ್ 1995ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪರವಾನಗಿ ಹೊಂದಿದೆ. ಮೂಲತಃ ಇದು ಪೈಲಟ್ ತರಬೇತಿ, ವಿಮಾನ ನಿರ್ವಹಣೆ ಮತ್ತು ವೈಮಾನಿಕ ಸೇವೆಗೆ ಬೇಕಾದ ಪೂರಕ ಸೇವೆಗಳ ಪೂರೈಕೆಗೆ ಹೆಸರುವಾಸಿಯಾಗಿದೆ. ಸಂಸ್ಥೆಯು ಈವರೆಗೆ ಅಪಾರ ಸಂಖ್ಯೆಯ ಕಮರ್ಷಿಯಲ್ ಪೈಲಟ್ ಮತ್ತು ಖಾಸಗಿ ಪೈಲಟ್ ಗಳಿಗೆ ತರಬೇತಿ ನೀಡಿದೆ. ಜೊತೆಗೆ ಸಂಸ್ಥೆಯು ಸ್ವತಃ ತಾನೇ ಹಲವು ಸಿಂಗಲ್ ಎಂಜಿನ್ ಮತ್ತು ಬಹುಎಂಜಿನ್ ವಿಮಾನಗಳನ್ನು ಹೊಂದಿದೆ. ಅಂತಿಮವಾಗಿ ವಿಜಯಪುರದಲ್ಲಿ ಈ ಅಕಾಡೆಮಿಯನ್ನು ಹೇಗೆ ಪ್ರಾರಂಭಿಸಬೇಕು, ಇದರ ಚಟುವಟಿಕೆಗಳ ಸ್ವರೂಪ ಹೇಗಿರಬೇಕು ಎನ್ನುವುದನ್ನು ವಿಸ್ತೃತವಾಗಿ ಚರ್ಚಿಸಿ, ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.
ಅಕಾಡೆಮಿ ಆರಂಭವಾದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಆಕರ್ಷಕ ರಿಯಾಯಿತಿ ಕೊಡುವುದಾಗಿ ಕಂಪನಿಯ ಅಧಿಕಾರಿಗಳು ಆಶ್ವಾಸನೆ ಕೊಟ್ಟಿದ್ದಾರೆ. ವಿಮಾನ ನಿಲ್ದಾಣವು ತ್ವರಿತವಾಗಿ ಕಾರ್ಯಾರಂಭ ಮಾಡಿದರೆ ಇಂತಹ ಯೋಜನೆಗಳನ್ನು ಜಾರಿಗೆ ತರಲು ಸಹಕಾರಿಯಾಗಲಿದೆ ಎಂದರು.


