Homeಕರ್ನಾಟಕಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

ಕುವೆಂಪು ಥೀಮ್ ಪಾರ್ಕ್‌ ಲೋಕಾರ್ಪಣೆಗೊಳಿಸಿದ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ

– ಸರ್ವಜ್ಞನಗರದಲ್ಲಿ ಕೆಪಿಟಿಸಿಎಲ್ ಸಿಎಸ್ಆರ್ ನಿಧಿಯಲ್ಲಿ ಥೀಮ್ ಪಾರ್ಕ್ ನಿರ್ಮಾಣ
– ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವಧ್ವಯರಿಂದ ಚಾಲನೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ಮಿಸಿರುವ ‘ಕುವೆಂಪು ಥೀಮ್ ಪಾರ್ಕ್’ಅನ್ನು ಇಂಧನ ಮತ್ತು ಪ್ರಾವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಸಿ.ಬಿ.ಕೃಷ್ಣಬೈರೇಗೌಡ ಅವರು ಮಂಗಳವಾರ ಉದ್ಘಾಟಿಸಿದರು.

ಕೆಪಿಟಿಸಿಎಲ್ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಹೆಚ್‌ಬಿಆರ್‌ ಬಡಾವಣೆಯಲ್ಲಿ ಈ ಥೀಮ್ ಪಾರ್ಕ್ ನಿರ್ಮಿಸಿದೆ. ಉದ್ಯಾನ ಉದ್ಘಾಟಿಸಿ ಮಾತನಾಡಿದ ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, “ಹಸಿರು ಬೆಂಗಳೂರಿಗೆ ಈ ಥೀಮ್ ಪಾರ್ಕ್ ಅತ್ಯುತ್ತಮ ಕೊಡುಗೆಯಾಗಿದ್ದು, ಸ್ವಚ್ಛ ಮತ್ತು ಹಸಿರು ಬೆಂಗಳೂರು ನಿರ್ಮಾಣದ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ,” ಎಂದರು.

“ಕೆಪಿಟಿಸಿಎಲ್ ತನ್ನದೇ ಸ್ಥಳದಲ್ಲಿ ಸಿಎಸ್‌ಆರ್‌ ಅನುದಾನದಲ್ಲಿ ಈ ಸುಂದರ ಪಾರ್ಕ್ ನಿರ್ಮಿಸಿದೆ. ಇದರಿಂದಾಗಿ ಹೆಚ್‌ಬಿಆರ್‌ ಬಡಾವಣೆಯಲ್ಲಿ ಕುರುಚಲು ಕಾಡಿನಂತೆ ಇದ್ದ ಸ್ಥಳ ಈಗ ಆಕರ್ಷಕ ತಾಣವಾಗಿದೆ. ಈ ಪಾರ್ಕ್ ನಿರ್ಮಾಣಕ್ಕೆ ಸಹಕಾರ ನೀಡಿದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇದನ್ನು ಸುಂದರವಾಗಿ ನಿರ್ಮಿಸಲು ನೆರವಾದ ಕೆಪಿಟಿಸಿಎಲ್ ಅಧಿಕಾರಿಗಳು, ಸಿಬ್ಬಂದಿಗೆ ಕ್ಷೇತ್ರದ ಜನತೆ ಹಾಗೂ ಸಮಗ್ರ ಬೆಂಗಳೂರು ನಾಗರಿಕರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ,” ಎಂದು ತಿಳಿಸಿದರು.

ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, “ಸರ್ವಜ್ಞನಗರ ಕ್ಷೇತ್ರದ ಶಾಸಕರೂ ಆಗಿರುವ ಸಚಿವರಾದ ಕೆ.ಜೆ.ಜಾರ್ಜ್ ಅವರು ತಮ್ಮ ಇಲಾಖೆಯನ್ನು ಯಶಸ್ವಿಯಾಗಿ ನಡೆಸುತ್ತಿರುವುದಲ್ಲದೆ, ಸುಂದರ ಬೆಂಗಳೂರು ನಿರ್ಮಾಣಕ್ಕೂ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಕೆಪಿಟಿಸಿಎಲ್ ತನ್ನದೇ ಆಸ್ತಿಯನ್ನು ಕ್ಷೇತ್ರದ ಜನತೆಗೆ ಮುಕ್ತವಾಗಿಸಿದ್ದು, ನಿಗಮದ ಸಹಕಾರದಿಂದ ಗಿಡಗಂಟೆಗಳಿದ್ದ ಸ್ಥಳ ಈಗ ಅತ್ಯುತ್ತಮ ಉದ್ಯಾನವಾಗಿ ರೂಪತಳೆದಿದೆ. ಮಕ್ಕಳು ಹಿರಿಯರಾದಿಯಾಗಿ ಎಲ್ಲರಿಗೂ ಸ್ಥಳ ಸಮುದಾಯ ಚಟುವಟಿಕೆ ಕೇಂದ್ರವಾಗಿ ಮುನ್ನಡೆಯಲಿದೆ. ಬೆಂಗಳೂರನ್ನು ಸುಂದರಗೊಳಿಸುವ ಈ ತಾಣ ಮುಖ್ಯವಾಗಲಿದೆ,” ಎಂದು ಹೇಳಿದರು.

ಉದ್ಯಾನ ಲೋಕಾರ್ಪಣೆ ಬಳಿಕ ಸಚಿವರಿಬ್ಬರೂ ಒಂದು ಸುತ್ತು ಹಾಕಿ ಪಾರ್ಕ್ ವಿಶೇಷತೆಗಳನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಯೋಜನೆಗಳ ವಿಭಾಗದ ನಿರ್ದೇಶಕ ಆರ್‌.ಜಯಕುಮಾರ್, ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಕುವೆಂಪು ಥೀಮ್ ಪಾರ್ಕ್ ವಿಶೇಷತೆ

ಥೀಮ್ ಪಾರ್ಕ್ ಮೂಲಕ ಹೆಚ್‌ಬಿಆರ್‌ ಬಡಾವಣೆಯ 1500 ಚದರ ಅಡಿ ಪ್ರದೇಶವನ್ನು ಹಸಿರು ವಲಯವಾಗಿ ರೂಪಿಸಲಾಗಿದೆ. 700 ಮೀಟರ್ ನಡಿಗೆ ಮಾರ್ಗ, 100 ಜನರು ಕುಳಿತುಕೊಳ್ಳುವ ಬಯಲ ರಂಗಮಂದಿರ, ಕುಡಿಯುವ ನೀರಿನ ಘಟಕ, ಶೌಚಾಲಯ, ಧ್ವಜಸ್ಥಂಭ, ವಿಶ್ರಾಂತಿಗಾಗಿ ಗಜೀಬೋ, ನಂದಿನಿ ಹಾಲಿನ ಕೇಂದ್ರ ಹಾಗೂ ಹಾಪ್‌ ಕಾಮ್ಸ್ ಮಳಿಗೆಗೆ ಸ್ಥಳವಾಕಾಶ ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಆಟದ ಸಾಮಾಗ್ರಿಗಳು ಹಾಗೂ ಓಪನ್ ಜಿಮ್ ಉಪಕರಣಗಳು ಹಾಗೂ ವಿಶ್ರಾಂತಿಗಾಗಿ ಕಲ್ಲು ಬೆಂಚುಗಳು, ವಿಶೇಷ ತಳಿಯ ಸಸ್ಯಗಳು, ಸುಸಜ್ಜಿತವಾದ ದೀಪದ ವ್ಯವಸ್ಥೆ ಎಲ್ಲವೂ ಪಾರ್ಕ್‌ನಲ್ಲಿದೆ. ಸುಮಾರು 4.65 ಕೋಟಿ ರೂ. ವೆಚ್ಚದಲ್ಲಿ ಕೆಪಿಟಿಸಿಎಲ್ ಈ ಪಾರ್ಕ್ ಅಭಿವೃದ್ದಿಪಡಿಸಿದೆ.

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕುವೆಂಪು ಥೀಮ್ ಪಾರ್ಕ್ ಲೋಕಾರ್ಪಣೆಗೊಳಿಸಿದ ಬಳಿಕ ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಕೃಷ್ಣಬೈರೇಗೌಡ ಅವರು, ಸರ್ವಜ್ಞನಗರದ ವಿವಿಧಡೆ ನಡೆಯುತ್ತಿರುವ ನಾಗವಾರ ಮುಖ್ಯ ರಸ್ತೆಯ ವೈಟ್‌ ಟಾಪಿಂಗ್, ಕಾಚರಕನಹಳ್ಳಿ ಕೆರೆ ಪುನರುಜ್ಜೀವನ ಕಾಂಗಾರಿಗಳು ಹಾಗೂ ಕಸ ವಿಂಗಣೆ ಕೇಂದ್ರವನ್ನು ಚಾಲನೆಗೊಳಿಸಿದರು. ಲಿಡ್ಕರ್ ಘಟಕ ಹಾಗೂ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಯೋಜಿಸಿರುವ ಮಾರುಕಟ್ಟೆ ಸ್ಥಳವನ್ನು ಪರಿಶೀಲನೆ ನಡೆಸಿದರು.

ಸಚಿವ ಕೆ.ಜೆ.ಜಾರ್ಜ್ ಅವರನ್ನು ಅಭಿನಂದಿಸಿದ ಕೃಷ್ಣಬೈರೇಗೌಡ

“ಬೆಂಗಳೂರು ಅಭಿವೃದ್ದಿಯಲ್ಲಿ ಈಗ ಹೊಸ ಪರ್ವ ಶುರುವಾಗಿದೆ. ಸಚಿವ ಕೆ.ಜೆ.ಜಾರ್ಜ್ ಅವರ ಸೂಚನೆ ಮೇರೆಗೆ ಕ್ಲೀನ್-ಅಪ್ ಬೆಂಗಳೂರು ಅಭಿಯಾನಕ್ಕೆ ಬೆಸ್ಕಾಂ ಅಭೂತಪೂರ್ವ ಸಹಕಾರ ನೀಡಿದೆ. ರಜಾದಿನಗಳಲ್ಲೂ ಬೆಸ್ಕಾಂ ಸಿಬ್ಬಂದಿ ನಗರಾದ್ಯಂತ ಸಮೀಕ್ಷೆ ನಡೆಸಿ ಪಾದಚಾರಿ ಮಾರ್ಗಗಳಲ್ಲಿನ ಅನುಪಯುಕ್ತ ಕಂಬಗಳು, ಪರಿವರ್ತಕಗಳು, ಮಾರ್ಗದಲ್ಲಿ ಅಡಚಣೆ ಮಾಡುತ್ತಿದ್ದ ಉಪಕರಣಗಳನ್ನು ತೆರವುಗೊಳಿಸಿದ್ದಾರೆ. ಇದರ ಜತೆಗೆ ಕಸವನ್ನೂ ತೆರವುಗೊಳಿಸಿದ್ದಾರೆ. ಅಭಿಯಾನದಲ್ಲಿ ಬೆಸ್ಕಾಂ ಮಹತ್ತರ ಪಾತ್ರವಹಿಸಿದೆ. ಇದಕ್ಕಾಗಿ ಸಚಿವರಾದ ಜಾರ್ಜ್ ಹಾಗೂ ಬೆಸ್ಕಾಂ ಅಧಿಕಾರಿ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ.” ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಸಿ.ಬಿ.ಕೃಷ್ಣಬೈರೇಗೌಡ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments