ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಒಳಪಡುವ ಖಾಲಿ ಭೂಮಿಯನ್ನು ಆರ್ಥಿಕ ಚಟುವಟಿಕೆಗಳ ಸಂವರ್ಧನೆಗೆ ಬಳಸಿಕೊಳ್ಳುವ ಕುರಿತು ಮತ್ತು ರಾಜ್ಯದಲ್ಲಿನ ಅರಣ್ಯ ಪ್ರದೇಶವನ್ನು ಮತ್ತು ಅರಣ್ಯ ಉತ್ಪನ್ನಗಳನ್ನು ಆದಾಯದ ಮೂಲಗಳನ್ನಾಗಿ ಪರಿವರ್ತಿಸುವ ಕುರಿತಂತೆ ಚಿಂತನೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯದ ಪ್ರತಿ ಭಾಗಗಳಲ್ಲೂ ಆರ್ಥಿಕತೆಯ ವೃದ್ಧಿಗೆ ಅಗತ್ಯವಿರುವ ಸಾಮರ್ಥ್ಯವಿದ್ದು, ಆ ಸಾಮರ್ಥ್ಯವನ್ನು ಗುರುತಿಸಿ ಬಳಸಿಕೊಳ್ಳುವ ಇಚ್ಛಾಶಕ್ತಿಯೊಂದಿಗೆ ಸರ್ಕಾರ ರೂಪಿಸಿರುವ ಲೀಪ್ (LEAP – Local economic accilorate program) ಯೋಜನೆಯನ್ನು ಅನುಷ್ಠಾನಕ್ಕೆ ತರುವ ಸಂಬಂಧ ಸಚಿವರು ಇಂದು ಬೆಂಗಳೂರಿನಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಕಲಬುರಗಿ ಜಿಲ್ಲೆ ಹಾಗೂ ರಾಜ್ಯದ ಇತರೆಡೆ ಲಭ್ಯವಿರುವ ಸರ್ಕಾರದ ಖಾಲಿ ಭೂಮಿಯಲ್ಲಿ ಬಿದಿರು, ಗೇರು ಹಾಗೂ ಔಷಧೀಯ ಸಸ್ಯಗಳನ್ನು ಬೆಳಸಿ ಅವುಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಕುರಿತು ಚರ್ಚಿಸಲಾಯಿತು. ಕಲಬುರಗಿ ಜಿಲ್ಲೆಯ ಸುಮಾರು 125 ಹೆಕ್ಟೇರ್ ಭೂಮಿಯನ್ನು ಸುಸ್ಥಿರ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಿ, ಚಿಂಚೋಳಿ ಅರಣ್ಯ ಪ್ರದೇಶದಲ್ಲಿನ ಭೂಮಿಯನ್ನು ಆರ್ಥಿಕ ವೃದ್ಧಿಗೆ ಬಳಸಿಕೊಳ್ಳುವ ಸಲಹೆ ನೀಡಿದರು.
ಇಕೋ ಟೂರಿಸಮ್ ವೃದ್ಧಿಗೆ ರೂಪಿಸಬುದಾದ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಆಯಾಮಗಳ ಕಾರ್ಯಕ್ರಮ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಿರ್ದೇಶಿಸಿದರು. ಆರು ತಿಂಗಳಲ್ಲಿ ಫಲಿತಾಂಶ ನೀಡಬಲ್ಲ ಅಲ್ಪಾವಧಿ ಕಾರ್ಯಕ್ರಮಗಳು ಮತ್ತು ಮೂರು ವರ್ಷದ ಗುರಿಯಲ್ಲಿ ಫಲಿತಾಂಶ ನೀಡಬಲ್ಲ ಕಾರ್ಯಕ್ರಮಗಳನ್ನು ರೂಪಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಕುಮಾರ್ ಪುಷ್ಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು.


