– ವಿವಾದ ಸುಪ್ರೀಂ ಪೀಠದಲ್ಲಿ ಇರುವಾಗಲೇ ನಿಷೇಧ ಹಿಂಪಡೆದು ನ್ಯಾಯಾಂಗ ವ್ಯವಸ್ಥೆಗೆ ಅಪಮಾನ
– ಹಿಜಾಬ್ ನಿಷೇಧ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ ಜೋಶಿ ಕಿಡಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿಜಾಬ್ ನಿಷೇಧ ಹಿಂಪಡೆದು ತನ್ನ ತುಷ್ಟೀಕರಣ ನೀತಿಯನ್ನು ಶೈಕ್ಷಣಿಕ ಅಂಗಳಕ್ಕೂ ಹೇರಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ವಿವಾದದ ಅರ್ಜಿಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಹಿಂಪಡೆದಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಖಂಡಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ‘ಸಮವಸ್ತ್ರ ಸಂಹಿತೆ’ ವಿದ್ಯಾರ್ಥಿಗಳಲ್ಲಿ ಸಮಾನತೆ ಬೆಳೆಸುವ ಮೂಲ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಧರ್ಮಾಧಾರಿತ ಎನ್ನುವಂತೆ ಸಮವಸ್ತ್ರ ಸಂಹಿತಿಗೆ ಧಕ್ಕೆ ತರುತ್ತಿದೆ. ಸಮಾನತೆ ಬದಲು ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
*ನ್ಯಾಯಾಂಗ ವ್ಯವಸ್ಥೆಗೆ ಅಪಮಾನ:* ನ್ಯಾಯಾಂಗದ ಪ್ರಕ್ರಿಯೆಯನ್ನು ಕಡೆಗಣಿಸಿ ಸರ್ಕಾರ ಹಿಜಾಬ್ ನಿಷೇಧ ಹಿಂಪಡೆದಿರುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಪಮಾನವಾಗಿದೆ. ಒಂದು ನಿರ್ದಿಷ್ಟ ವರ್ಗವನ್ನು ಓಲೈಸಲು ಹೋಗಿ ಇಡೀ ಶೈಕ್ಷಣಿಕ ವಾತಾವರಣವನ್ನೇ ಹಾಳು ಮಾಡುತ್ತಿದೆ ಎಂದು ಸಚಿವರು ಕಿಡಿ ಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಲ್ಲೂ ‘ವಿಭಜಕ ನೀತಿ’ ಅನುಸರಿಸಿ ಶಾಲಾ ಶಿಸ್ತನ್ನು ಹದಗೆಡಿಸುವ ಹುನ್ನಾರಕ್ಕೆ ಮುಂದಾಗಿರುವುದು ನಿಜಕ್ಕೂ ಶೋಚನೀಯ ಎಂದು ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರ ದೇಶದೆಲ್ಲೆಡೆ ಏಕರೂಪ ನಾಗರಿಕ ಸಂಹಿತೆ ಜಾರಿ ತರುತ್ತಿರುವ ಬೆನ್ನಲ್ಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಧರ್ಮಗಳನ್ನು ಒಡೆದಾಳುವ ನೀತಿಗೆ ಕೈ ಹಾಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕೇಸರಿ ಶಾಲು ಧಾರ್ಮಿಕವಲ್ಲ, ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಬಣ್ಣ ಹಾಕಬೇಕು, ಹಾಕಬಾರದೆಂಬ ಹಕ್ಕನ್ನೇ ಕಸಿದುಕೊಳ್ಳುವ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.


