ತಮಿಳುನಾಡು ವಿಧಾನಸಭೆಯಲ್ಲಿ ತಮಿಳಗ ವೆಟ್ರಿ ಕಳಗಂ ಸರ್ಕಾರ ವಿಶ್ವಾಸಮತ ಗೆದ್ದಿದೆ. ವಿಧಾನಸಭೆ ಅಧಿವೇಶನದಲ್ಲಿ ಸಿಎಂ ವಿಜಯ್ ವಿಶ್ವಾಸಮತ ಯಾಚನೆ ಮಾಡಿದ್ದರು. ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ ಸೇರಿ ಹಲವು ಪಕ್ಷಗಳು ವಿಶ್ವಾಸಮತ ಯಾಚನೆ ವೇಳೆಯೂ ತಮ್ಮ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, 108 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ, ಸರ್ಕಾರ ರಚನೆಗೆ ಭಾರಿ ಕಸರತ್ತು ನಡೆಸಿತ್ತು. ಈ ವೇಳೆ ಕಾಂಗ್ರೆಸ್ ಮೊದಲಿಗೆ ವಿಜಯ್ ಅವರಿಗೆ ಬೆಂಬಲ ಘೋಷಿಸಿತ್ತು. ಬಳಿಕ ಡಿಎಂಕೆ ಮಿತ್ರ ಪಕ್ಷಗಳಾದ ಎಡಪಕ್ಷಗಳು, ವಿಸಿಕೆ ಸೇರಿ ಹಲವು ಪಕ್ಷಗಳು ಬೆಂಬಲ ಘೋಷಿಸಿದ್ದವು.
ಆರಂಭದಲ್ಲಿ ರಾಜ್ಯಪಾಲರು, ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಮೊದಲು ಬಹುಮತದ ಬೆಂಬಲ ಪಡೆಯುವಂತೆ ಒತ್ತಾಯಿಸಿದ್ದರು. ನಂತರ ಟಿವಿಕೆ ಪಕ್ಷ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳಿಂದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಹಾಗಾಗಿ ವಿಜಯ್ ಮೇ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಕೂಡ ಸ್ವೀಕರಿಸಿದ್ದರು.
ವಿಜಯ್ ಸಿಎಂ ಆಗಿ ಪದಗ್ರಹಣ ಮಾಡಿದ ಮರು ದಿನ ಅಂದರೆ ಮೇ 11 ರಂದು ತಮಿಳುನಾಡಿನ 17ನೇ ವಿಧಾನಸಭೆಯ ಮೊದಲ ಅಧಿವೇಶನ ಕೂಡ ಆರಂಭವಾಗಿದೆ, ಅಧಿವೇಶನ ಆರಂಭವಾದ ಮೊದಲ ದಿನ ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ದಿನ, ಸ್ಪೀಕರ್ ಮತ್ತು ಉಪ ಸ್ಪೀಕರ್ ಆಯ್ಕೆಯೂ ನಡೆದಿದೆ.


