ಮೈಸೂರಿನ ಸಿದ್ದಿಕಿ ನಗರ, ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿ ರಾ.ಹೆ.275ರಲ್ಲಿ ಉದ್ದೇಶಿತ ಮೇಲ್ಸೇತುವೆ ಸ್ಥಳಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಖುದ್ದು ಭೇಟಿ ನೀಡಿ ವೀಕ್ಷಿಸಿದರು.
ಮೇಲ್ಸೇತುವೆ ಕಾಮಗಾರಿಗೆ ಬನ್ನಿಮಂಟಪ ರಸ್ತೆ, ನಂಜನಗೂಡು ರಸ್ತೆ, ಫೌಂಟನ್ ರಸ್ತೆ, ಹುಣಸೂರು ರಸ್ತೆಗಳ ವಿಭಜಕದೊಳಗೆ ಬೆಳೆಸಲಾಗಿರುವ ಮತ್ತು ಎಡ ಮತ್ತು ಬಲಬದಿಯ ಕೆಲವು ಮರ ಸೇರಿ ಒಟ್ಟು 347 ಮರಗಳು ಅಡ್ಡಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
ಬೀಟೆ, ರೈನ್ ಟ್ರೀ, ಹೊಂಗೆ, ಆಕಾಶ ಮಲ್ಲಿಗೆ, ಗಸಗಸೆ, ಮಹಾಗನಿ, ಮಾವು, ಬೇವು ಸೇರಿದಂತೆ ವಿವಿಧ ಮರಗಳನ್ನು ಕಾಮಗಾರಿಗಾಗಿ ತೆಗೆಯಬೇಕಾಗುತ್ತದೆ. ಹೀಗಾಗಿ ಎಷ್ಟು ಮರಗಳನ್ನು ಉಳಿಸಬಹುದು, ಬೀಟೆ, ಇತ್ಯಾದಿ ಮರಗಳನ್ನು ಸ್ಥಳಾಂತರಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.
ಈ ಭೇಟಿಯ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಮತ್ತಿತರರು ಹಾಜರಿದ್ದರು.


