ಇಸ್ರೇಲ್ ಮತ್ತು ಲೆಬನಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳು ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಮತ್ತೊಂದು ಪ್ರಮುಖ ರಾಜತಾಂತ್ರಿಕ ತಿರುವನ್ನು ಸೂಚಿಸುತ್ತಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್ ಜೊತೆ ನೇರ ಮಾತುಕತೆ ಆರಂಭಿಸಲು ತನ್ನ ಸಚಿವ ಸಂಪುಟಕ್ಕೆ ಸೂಚನೆ ನೀಡಿದ್ದು, ಈ ಸಂವಾದದ ಮುಖ್ಯ ಅಜೆಂಡಾ ಹಿಜ್ಬುಲ್ಲಾ ಸಂಘಟನೆಯನ್ನು ನಿಷಸ್ತ್ರೀಕರಣಗೊಳಿಸುವುದು ಹಾಗೂ ಎರಡು ದೇಶಗಳ ನಡುವೆ ಶಾಂತಿ ಸಂಬಂಧಗಳನ್ನು ಸ್ಥಾಪಿಸುವುದು ಎಂದು ಇಸ್ರೇಲ್ ಸರ್ಕಾರ ಹೇಳಿದೆ.
ನೆತನ್ಯಾಹು ಕಚೇರಿ ನೀಡಿದ ಹೇಳಿಕೆಯ ಪ್ರಕಾರ, ಲೆಬನಾನ್ ಹಲವು ಬಾರಿ ನೇರ ಮಾತುಕತೆಗೆ ಮನವಿ ಮಾಡಿರುವುದರಿಂದ ಇಸ್ರೇಲ್ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದೆ. ಇದರಂತೆ, ಮುಂದಿನ ವಾರ ಅಮೆರಿಕದ ವಾಷಿಂಗ್ಟನ್ನಲ್ಲಿ ಮಾತುಕತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಈ ಪ್ರಕ್ರಿಯೆಯಲ್ಲಿ ಅಮೆರಿಕಾ ಮಧ್ಯಸ್ಥಿಕೆ ವಹಿಸುವ ನಿರೀಕ್ಷೆ ಇದ್ದು, ಇಸ್ರೇಲ್ ತನ್ನ ಪ್ರತಿನಿಧಿಯಾಗಿ ಅಮೆರಿಕದಲ್ಲಿರುವ ರಾಯಭಾರಿ ಯೆಚಿಯೆಲ್ ಲೈಟರ್ ಅವರನ್ನು ನಿಯೋಜಿಸಬಹುದು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಆದರೆ, ಈ ಮಾತುಕತೆ ನಡುವಲ್ಲೇ ಇಸ್ರೇಲ್ ಲೆಬನಾನ್ ಮೇಲೆ ಭಾರೀ ವಾಯುದಾಳಿಗಳನ್ನು ಮುಂದುವರಿಸಿದ್ದು. “under fire” ಎಂಬ ರೀತಿಯಲ್ಲಿ—ಅಂದರೆ ದಾಳಿಗಳು ನಿಲ್ಲಿಸದೇ—ಮಾತುಕತೆ ನಡೆಯಬಹುದು ಎಂಬ ಸೂಚನೆಗಳನ್ನು ನೀಡಿದೆ.
ಲೆಬನಾನ್ನಲ್ಲಿ ಹತ್ಯಾಕಾಂಡ ನಿಲ್ಲಿಸದಿದ್ದರೆ ಹುಷಾರ್
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಇಸ್ರೇಲ್ ವಿರುದ್ಧ ಬಲವಾದ ಹೇಳಿಕೆ ನೀಡಿದ್ದಾರೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳನ್ನು ಶಹಬಾಜ್ ಷರೀಫ್ ಖಂಡಿಸಿದ್ದಾರೆ. ಇಸ್ರೇಲ್ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ಪ್ರದೇಶದಲ್ಲಿ ಅಸ್ಥಿರತೆಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.
ಸಂಭಾವ್ಯ ಕದನ ವಿರಾಮ ಮತ್ತು ಉದ್ವಿಗ್ನತೆಯ ಉಲ್ಬಣವನ್ನು ಕಡಿಮೆ ಮಾಡುವ ಕುರಿತು ಅಮೆರಿಕ ಮತ್ತು ಇರಾನ್ ನಡುವೆ ನಿರ್ಣಾಯಕ ಮಾತುಕತೆಗಳು ನಿಗದಿಯಾಗಿರುವಾಗ ಶಹಬಾಜ್ ಷರೀಫ್ ಹೇಳಿಕೆ ಬಂದಿದೆ. ಇಸ್ಲಾಮಾಬಾದ್ನಲ್ಲಿ ಶನಿವಾರ ನಡೆಯಲಿರುವ ಈ ಮಾತುಕತೆಗಳು ಪ್ರಾದೇಶಿಕ ಶಾಂತಿಗೆ ನಿರ್ಣಾಯಕವೆಂದು ಪರಿಗಣಿಸಲಾಗಿದೆ.
“ಲೆಬನಾನ್ ಪ್ರಧಾನಿ ನವಾಫ್ ಸಲಾಮ್ ಅವರೊಂದಿಗೆ ಮಾತನಾಡಿದ್ದೇನೆ. ಲೆಬನಾನ್ನಲ್ಲಿನ ದಾಳಿಗಳ ಬಗ್ಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದೇನೆ. ಇಸ್ರೇಲ್ನ ಕ್ರಮಗಳನ್ನು ಬಲವಾಗಿ ಟೀಕಿಸಿದ್ದೇನೆ ಎಂದು ಪಾಕಿಸ್ತಾನಿ ಪ್ರಧಾನಿ ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಬರೆದುಕೊಂಡಿದ್ದಾರೆ. ಇಂದು ಸಂಜೆ, ನಾನು ಲೆಬನಾನ್ ಪ್ರಧಾನಿ ನವಾಫ್ ಸಲಾಮ್ ಅವರೊಂದಿಗೆ ಮಾತನಾಡಿದ್ದೇನೆ. ಲೆಬನಾನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನಿರಂತರ ಆಕ್ರಮಣವನ್ನು ನಾನು ಬಲವಾಗಿ ಖಂಡಿಸಿದೆ. ಈ ಹಿಂಸಾತ್ಮಕ ಘರ್ಷಣೆಗಳ ಪರಿಣಾಮವಾಗಿ ಲೆಬನಾನ್ನಲ್ಲಿ ಕಳೆದುಕೊಂಡ ಸಾವಿರಾರು ಅಮೂಲ್ಯ ಜೀವಗಳಿಗೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.


