Homeಕರ್ನಾಟಕಕಸ ವಿಲೇವಾರಿಗೆ ಅಡ್ಡಿಪಡಿಸಿದರೆ ಮನೆ, ಕಚೇರಿ ಮುಂದೆ ಸುರಿಯುತ್ತೇವೆ: ಡಿಸಿಎಂ ಡಿ ಕೆ ಶಿವಕುಮಾರ್‌ ಎಚ್ಚರಿಕೆ

ಕಸ ವಿಲೇವಾರಿಗೆ ಅಡ್ಡಿಪಡಿಸಿದರೆ ಮನೆ, ಕಚೇರಿ ಮುಂದೆ ಸುರಿಯುತ್ತೇವೆ: ಡಿಸಿಎಂ ಡಿ ಕೆ ಶಿವಕುಮಾರ್‌ ಎಚ್ಚರಿಕೆ

  • ಬಿಜೆಪಿ ಶಾಸಕರ ಬ್ಲ್ಯಾಕ್‌ ಮೇಲ್‌ಗೆ ಬಗ್ಗುವುದಿಲ್ಲ: ಡಿ ಕೆ ಶಿವಕುಮಾರ್‌
  • ಗೌರವದಿಂದ ಇದ್ದರೆ ಸರಿ, ಇಲ್ಲದಿದ್ದರೆ ಎಸ್ಮಾ ಕಾಯ್ದೆ ಅಡಿ ಕ್ರಮ

ಗೌರವದಿಂದ ಇದ್ದರೆ ಸರಿ. ಇಲ್ಲ ಅಂದರೆ ಕಸ ವಿಲೇವಾರಿಗೆ ಅಡ್ಡಿ ಪಡಿಸುವವರು ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸಹ ಎಸ್ಮಾ ಕಾಯ್ದೆ ಅಡಿ, ಯಾವುದೇ ಕರುಣೆ ಇಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಲೋಡ್‌ ಕಸವನ್ನು ತೆಗೆದುಕೊಂದು ಹೋಗಿ ಹಾಕಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿರುವ ಬಗ್ಗೆ ಕೇಳಿದಾಗ, “ಶಾಸಕರು ಕಸ ಹಾಕಬಾರದು ಹಾಗೂ ನಮಗೆ ಅನುದಾನ ಬೇಕು ಎಂದು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ. ಮಂಗಳವಾರದಂದು ಅರವಿಂದ ಲಿಂಬಾವಳಿ, ಇಂದು ದೊಡ್ಡಬಳ್ಳಾಪುರ ಶಾಸಕರು ಬ್ಲಾಕ್‌ ಮೇಲ್‌ ಮಾಡಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಕಸವು ಆರ್‌.ಅಶೋಕ್‌, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ. ಇವರುಗಳು ಯಾರಿಗೆ ಎಂದು ಬ್ಲಾಕ್‌ ಮೆಲ್‌ ಮಾಡುತ್ತಿದ್ದಾರೆ” ಎಂದರು.

ಯಾವ ಉದ್ದೇಶಕ್ಕೆ ಶಾಸಕರುಗಳು ಬ್ಲಾಕ್‌ ಮೆಲ್‌ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಈ ಹಿಂದಿನಿಂದ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ” ಎಂದು ಹೇಳಿದರು.

ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅಪಘಾತ ಆಗಬಾರದಿತ್ತು ಆಗಿದೆ. ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್‌.ಟಿ.ಸೋಮಶೇಖರ್‌, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್‌ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.

ಅನುದಾನ ಅಲಭ್ಯತೆಗೆ ಬಿಜೆಪಿ ಸರ್ಕಾರವೇ ಕಾರಣ

ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್‌ ಹೆಚ್ಚಿದೆ, ಕಾಮಗಾರಿ ನಿಲ್ಲಿಸುತ್ತೇವೆ ಎಂದು ಗುತ್ತಿಗೆದಾರರ ಸಂಘ ತಿಳಿಸಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ದೂರು ನೀಡಲು ಅವರಿಗೆ ತಿಳಿಸಿ. ಅವರುಗಳು ಮೊದಲು ಕಾಮಗಾರಿ ನಿಲ್ಲಿಸಲಿ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಅನುದಾನವಿಲ್ಲ ಕೆಲಸ ತೆಗೆದುಕೊಳ್ಳಬೇಡಿ ಎಂದು ಹೇಳಿಲ್ಲವೇ? ಆದರೂ ಏಕೆ ಕೆಲಸಗಳನ್ನು ತೆಗೆದುಕೊಂಡರು. ಆರ್ಥಿಕ ಲಭ್ಯತೆ ಇಲ್ಲದೇ ಇದ್ದರೂ ಸಹ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಕೆಲಸಗಳನ್ನು ತೆಗೆದುಕೊಳ್ಳಲಾಯಿತು. ಬೆಂಗಳೂರು ನಗರದಲ್ಲಿ ಎಷ್ಟು ಹೊಂದಿಸಬೇಕೋ ಆ ಕೆಲಸವನ್ನು ನಾನು ಮಾಡಿದ್ದೇನೆ. ಉದಾಹರಣೆಗೆ 10 ಸಾವಿರ ಕೋಟಿ ಅನುದಾನವಿದ್ದರೆ 30- 40 ಸಾವಿರ ಕೋಟಿ ಟೆಂಡರ್‌ ಕರೆದಿದ್ದಾರೆ. ಇದೆಲ್ಲದ್ದಕ್ಕೂ ಬಿಜೆಪಿ ಸರ್ಕಾರವೇ ಕಾರಣ. ಈಗ ಬಿಲ್‌ ಬಿಲ್‌ ಎಂದರೆ ಏನು ಮಾಡುವುದು. ಅಂದು ಏಕೆ ಕೆಲಸಗಳನ್ನು ತೆಗೆದುಕೊಂಡರು. ನನ್ನ ಇಲಾಖೆಯ ದಾಖಲೆಗಳನ್ನು ನೀಡುತ್ತೇನೆ. ಹಣ ಇಲ್ಲ ಎಂದು ಗೊತ್ತಿದ್ದರೂ ಕೆಲಸಗಳನ್ನು ಏಕೆ ಪ್ರಾರಂಭ ಮಾಡಿದರು” ಎಂದು ಹೇಳಿದರು.

ನಿಮಗೂ ಕೆಲಸ ನಿಲ್ಲಿಸುತ್ತೇವೆ ಎಂದು ಬ್ಲಾಕ್‌ ಮೆಲ್‌ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, “ಕೆಲಸ ನಿಲ್ಲಿಸಿಕೊಳ್ಳುವವರು ನಿಲ್ಲಿಸಿಕೊಳ್ಳಲಿ. ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಸರ್ಕಾರ ಬಜೆಟ್‌ ಪ್ರಕಾರ ಹಣ ನೀಡುತ್ತಿದೆ. ಎಷ್ಟು ಆಗುತ್ತದೆಯೋ ಅಷ್ಟು ಹಣವನ್ನು ನಾವು ಕೊಡುತ್ತೇವೆ. ಬಜೆಟ್‌ ಆದ ನಂತರ ಏನಾದರೂ ಮಾಡೋಣ. ನಮಗೂ ಮಾನವೀಯತೆ ಇದೆ. ಬ್ಲಾಕ್‌ ಮೆಲ್‌ ಮಾಡುತ್ತೇವೆ ಅನ್ನುವವರೆಲ್ಲಾ ಮಾಡಿಕೊಳ್ಳಲಿ” ಎಂದರು.

ನಕಲಿ ಬೆರಳಚ್ಚಿನ ಮೂಲಕ ಅನ್ನಭಾಗ್ಯ ಅಕ್ಕಿ ಲೂಟಿ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಗೊತ್ತಿಲ್ಲ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments