Homeಕರ್ನಾಟಕ2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಅಂಗೀಕಾರ

2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಅಂಗೀಕಾರ

2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಈ ವಿಧೇಯಕವನ್ನು ಮಂಡಿಸಿದರು. ವಿರೋಧ ಪಕ್ಷದ ನಾಯಕರು, ಶಾಸಕರು ಚರ್ಚೆ ನಡೆಸಿದ ನಂತರ ಅನುಮೋದನೆ ನೀಡಲಾಯಿತು.

ಸ್ಪಷ್ಟನೆಗಾಗಿ ತಿದ್ದುಪಡಿ ತರಲಾಗಿದೆ

2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಇದರಲ್ಲಿ ಒಂದು ಸಣ್ಣ ಸ್ಪಷ್ಟನೆ ನೀಡುವುದಿದೆ. ಏಕೆಂದರೆ ಮಸೂದೆ ಅಂಗೀಕಾರಗೊಂಡಿದ್ದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಹೀಗಾಗಿ ಈ ಮಸೂದೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ” ಎಂದು ತಿಳಿಸಿದರು.

ಈ ತಿದ್ದುಪಡಿಯ ಉದ್ದೇಶ ಹಾಗೂ ಇದರ ಪರಿಣಾಮವೇನು ಎಂಬ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಈಗ ಜಾರಿಯಲ್ಲಿರುವ ಕಾಯ್ದೆ ಅನುಸಾರ ಜಿಬಿಎ ಅಡಿಯಲ್ಲಿ ರಚಿಸಲಾಗಿರುವ ಪಾಲಿಕೆಗಳ ವಿಚಾರದಲ್ಲಿ ಪ್ರಾಧಿಕಾರವು ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ಯಾರೋ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಅಂಶವನ್ನು ಪ್ರಸ್ತುತ ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಿಲ್ಲ. ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಪಾಲಿಕೆಗಳ ಕಾರ್ಯಚಟುವಟಿಕೆಯಲ್ಲಿ ಜಿಬಿಎ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆ ನೀಡಲು ಈ ತಿದ್ದುಪಡಿ ತರಲಾಗಿದೆ” ಎಂದು ಹೇಳಿದರು.

ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಮಾತನಾಡಿ, “ನೀವು ಯಾವ ರೀತಿ ನಿಯಂತ್ರಣಕ್ಕೆ ತರಲು ಮುಂದಾಗಿದ್ದಿರಿ, ಈಗ ಯಾಕೆ ಅದನ್ನು ಹಿಂಪಡೆದಿದ್ದೀರಿ, ನ್ಯಾಯಾಲಯದಲ್ಲಿ ಅರ್ಜಿ ಹಾಕಿದವರ ಆಕ್ಷೇಪಗಳೇನು ವಿವರಿಸಿ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸದಿದ್ದರೂ ಮುಂದೆ ಯಾವುದೇ ರೀತಿಯ ಗೊಂದಲಗಳು ಇರಬಾರದು ಎಂಬ ಕಾರಣಕ್ಕೆ ಈ ತಿದ್ದುಪಡಿ ತರುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಮೇಯರ್ ಹಾಗೂ ಪಾಲಿಕೆ ಸದಸ್ಯರಿಗೆ ಸಂಪೂರ್ಣ ಅಧಿಕಾರ ಇರಬೇಕು ಎಂಬುದು ನಮ್ಮ ಉದ್ದೇಶ. ಮುಂದೆ ನಾನು, ನೀವು ಅಧಿಕಾರದಲ್ಲಿ ಇರುತ್ತೇವೋ ಇರುವುದಿಲ್ಲವೋ ಗೊತ್ತಿಲ್ಲ. ಆದರೆ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಅದನ್ನು ತೆಗೆದುಹಾಕಿದ್ದೇವೆ” ಎಂದು ತಿಳಿಸಿದರು.

ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗದಂತೆ ಕ್ರಮ

ಶಾಸಕರ ಚರ್ಚೆ ನಂತರ ಮಾತನಾಡಿದ ಶಿವಕುಮಾರ್ ಅವರು, “ನಾನು ಕೊಟ್ಟ ವಿವರಣೆ ಸುರೇಶ್ ಕುಮಾರ್ ಹಾಗೂ ಅಶೋಕ್ ಅವರಿಗೆ ಅರ್ಥವಾಗಿದೆ. ಆದರೆ ಬಹಳ ಓದಿಕೊಂಡಿರುವ ಅಶ್ವತ್ ನಾರಾಯಣ ಅವರಿಗೆ ಅರ್ಥವಾಗಿಲ್ಲ. ನಾನು ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಬಗ್ಗೆ ಅಧ್ಯಯನ ಮಾಡಿದ್ದೇನೆ. ನಾನು ನನ್ನ 47ನೇ ವಯಸ್ಸಿಗೆ ಪದವಿ ಪೂರ್ಣಗೊಳಿಸಿದೆ. ರಾಜಕೀಯ ಶಾಸ್ತ್ರ ವಿಷಯದಲ್ಲಿ ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ನನಗೆ ಅತಿಹೆಚ್ಚು ಅಂಕ ಸಿಕ್ಕಿತ್ತು. ರಾಜೀವ್ ಗಾಂಧಿ ಅವರು 73, 74ನೇ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಆಗ ನಾನು ಈ ತಿದ್ದುಪಡಿಯ ಉದ್ದೇಶದ ಬಗ್ಗೆ ಅವರ ಬಳಿ ಕೇಳಿದೆ. ಪಂಚಾಯ್ತಿಯಿಂದ ಸಂಸತ್ತಿನವರೆಗೆ ನಾಯಕರು ಇರಬೇಕು. ಹೀಗಾಗಿ ಇದು ನಾಯಕರನ್ನು ತಯಾರು ಮಾಡುವ ಅಡಿಪಾಯ ಎಂದರು. ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಲು ಇವುಗಳಿಗೆ ಸ್ವಾಯತ್ತತೆ ನೀಡಬೇಕು ಎಂದು ಹೇಳಿದರು” ಎಂದರು.

ನಿಮಗೆ ಬೇಡವಾದರೆ ಹೇಳಿ, ವಿಧೇಯಕ ಹಿಂಪಡೆಯುತ್ತೇವೆ:

“ನಿಮಗೆ ಇದರಲ್ಲಿ ಆಸಕ್ತಿ ಇಲ್ಲ ಎಂದಾದರೆ ನಾನು ಈ ತಿದ್ದುಪಡಿ ವಾಪಸ್ ಪಡೆಯಲು ಸಿದ್ಧ. ನಾವು ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಬೇರೊಬ್ಬರು ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ತಿದ್ದುಪಡಿ ತಂದಿದ್ದೇವೆ. ಮುಂದೆ ಸರ್ಕಾರ ಹಾಗೂ ಪಾಲಿಕೆಗೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಾಗ ಸರಕಾರ ಪಾಲಿಕೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಾರದು ಎಂಬುದು ನಮ್ಮ ಉದ್ದೇಶ” ಎಂದರು.

“ಸುರೇಶ್ ಕುಮಾರ್, ರಾಮಲಿಂಗ ರೆಡ್ಡಿ ಸೇರಿದಂತೆ ಅನೇಕರು ಪಾಲಿಕೆ ಸದಸ್ಯರಾಗಿ ನಂತರ ವಿಧಾನಸಭೆಗೆ ಬಂದಿದ್ದೀರಿ. ಜವಾಹರಲಾಲ್ ನೆಹರೂ ಅಲಹಬಾದ್ ಮುನ್ಸಿಪಲ್ ನ ಮೊದಲ ಅಧ್ಯಕ್ಷರಾಗಿದ್ದರು. ರಾಜಗೋಪಾಲಚಾರಿ, ಸರ್ದಾರ್ ಪಟೇಲ್, ಕೆಂಗಲ್ ಹನುಮಂತಯ್ಯ ಅವರು ಪಾಲಿಕೆ ಅಧ್ಯಕ್ಷರಾಗಿದ್ದರು. ತಮಿಳುನಾಡು ಸಿಎಂ ಸ್ಟಾಲಿನ್ ಅವರು ಚೆನ್ನೈ ಪಾಲಿಕೆ ಮೇಯರ್‌ ಆಗಿದ್ದವರು, ಬಿ.ಡಿ ಜತ್ತಿ, ವಿಲಾಸ್ ರಾವ್ ದೇಶಮುಖ್ ಪಂಚಾಯ್ತಿ ಚೇರ್ಮನ್ ಗಳಾಗಿದ್ದವರು” ಎಂದು ವಿವರಿಸಿದರು.

“ಬೆಂಗಳೂರಿನ ಭವಿಷ್ಯದ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ, ನಾನು ಅದನ್ನು ಮಾಡುವುದೂ ಇಲ್ಲ. ನಾವು ಪಾಲಿಕೆಗಳಿಗೆ ತೆರಿಗೆ ಸಂಗ್ರಹಕ್ಕೆ ಅಧಿಕಾರ, ಆರ್ಥಿಕ ಸ್ವಾಯತ್ತತೆ, ಚುನಾವಣೆ, ಮೀಸಲಾತಿ ಸೇರಿದಂತೆ ಯಾವುದೇ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಸಂವಿಧಾನದ 74ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ರಕ್ಷಣೆ ಮಾಡಲಾಗಿದೆ. ಈ ತಿದ್ದುಪಡಿ ಸ್ಪಷ್ಟನೆಗಾಗಿ ತಂದಿದ್ದು, ಇದನ್ನು ಅಂಗೀಕರಿಸಬೇಕು” ಎಂದು ಮನವಿ ಮಾಡಿದರು.

ಈ ವೇಳೆ ಅಡ್ಡಿಪಡಿಸಲು ಮುಂದಾದ ಮುನಿರತ್ನ ಅವರಿಗೆ ತಿರುಗೇಟು ನೀಡಿದ ಶಿವಕುಮಾರ್ ಅವರು, “ಮುನಿರತ್ನ ಅವರೇ ನಿಮಗೂ ಚರ್ಚೆ ಮಾಡಲು ಅವಕಾಶ ನೀಡುತ್ತೇವೆ. ನಿಮ್ಮನ್ನು ತಯಾರು ಮಾಡಿದ್ದು ನಾವೇ. ನಿಮ್ಮ ಮಾತನ್ನೂ ಆಲಿಸುತ್ತೇವೆ. ನೀನು ತನಿಖೆ ಮಾಡಲು ಎಲ್ಲೇಲ್ಲೋ ಸುತ್ತುತ್ತಿದ್ದೀಯಾ, ಹೀಗಾಗಿ ನಿನ್ನ ಹೆಸರು ಮರೆತಿದ್ದೇವೆ. ನಿನ್ನ ಬಗ್ಗೆಯೂ ನಾವು ತನಿಖೆ ಮಾಡಬೇಕಿದೆ” ಎಂದು ಕುಟುಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments