ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಪ್ರಕರಣದಲ್ಲಿ ಐಪಿಎಸ್ ಹಿರಿಯ ಅಧಿಕಾರಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಮಿತಿ ರಚನೆ ಮಡಿದೆ.
ಪ್ರಕರಣದ ವಿಚಾರಣೆಯ ಸಮಯದಲ್ಲಿ ಬಂಧಿತ ಆರೋಪಿ ರನ್ಯಾ ರಾವ್ ಅವರು ಪೊಲಿಸ್ ಶಿಷ್ಟಾಚಾರ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡು, ಅಕ್ರಮವನ್ನು ಮಾಡಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ರಾಜ್ಯ ಐಪಿಎಸ್ ವೃಂದದ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲ ಸೌಕರ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಶಿಷ್ಟಾಚಾರ ಸೌಲಭ್ಯಗಳ ಬಳಕೆಯನ್ನು ಪಡೆದುಕೊಳ್ಳಲು ಕಾರಣವಾದ ಸಂಗತಿಗಳು ಹಾಗೂ ಸಂದರ್ಭಗಳು ಮತ್ತು ಈ ಪ್ರಕರಣದಲ್ಲಿ ಕಂಡು ಬಂದರೆ ಪತ್ತೆ ಹಚ್ಚಿ, ತನಿಖಾ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಲು ಸೂಚಿಸಲಾಗಿದೆ.
ಸದರಿ ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಮತ್ತು ಎಲ್ಲ ರೀತಿಯ ನೆರವನ್ನು ನೀಡಲು ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರು(ಪೊಲೀಸ್ ಪಡೆಗಳ ಮುಖ್ಯಸ್ಥರು), ಕರ್ನಾಟಕ ರಾಜ್ಯ ಮತ್ತು ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೂ ಸೂಚಿಸಲಾಗಿದೆ.
ಕೆಲವರಿಗೆ ಆತಂಕ
ವಿದೇಶದಿಂದ ಅಕ್ರಮವಾಗಿ ಸಾಗಾಣಿಕೆ ಆರೋಪದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಜೈಲು ಕಂಬಿಗಳ ಹಿಂದೆ ನರಳುತ್ತಿದ್ದಾರೆ, ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಇದು ನಮಗೆಲ್ಲಿ ಅಂಟಿಕೊಳ್ಳುತ್ತದೆಯೋ ಎಂದು ಆತಂಕಗೊಂಡಿದ್ದಾರೆ.
ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳಾಗಿರುವ ರನ್ಯಾ ರಾವ್ ಹಲವಾರು ಮಂದಿ ಉದ್ಯಮಿಗಳು ರಾಜಕಾರಣಿಗಳು ಮತ್ತು ಪ್ರತಿಷ್ಠಿತ ಜ್ಯೋತಿಷಿಗಳಿಗೆ ಆಪ್ತರಾಗಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಈ ಎಲ್ಲರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ.
ರನ್ಯಾ ಅವರನ್ನು ಬಂಧಿಸಿರುವ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆ ನಡೆಸಿರುವ ಬೆನ್ನಲ್ಲೇ ಅವರ ಮೊಬೈಲ್ ಪಡೆದುಕೊಂಡಿದ್ದು ಅದರಲ್ಲಿನ ಕಾಂಟ್ಯಾಕ್ಟ್ ನಂಬರ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಗಿದ್ದಾರೆ ಇದು ಆಕೆಯ ಜತೆಗೆ ಸಂಪರ್ಕದಲ್ಲಿದ್ದ ರಾಜಕಾರಣಿಗಳಿಗೆ ನಡುಕ ಉಂಟಾಗುವಂತೆ ಮಾಡಿದೆ.
ರಾನ್ಯಾ ಜೊತೆ ಸಂಪರ್ಕದಲ್ಲಿದ್ದ ಅನೇಕ ರಾಜಕಾರಣಿಗಳು, ಚಿನ್ನ ಕಳ್ಳ ಸಾಗಾಣಿಕೆ ಅಕ್ರಮದಲ್ಲಿ ಯಾರು ಶಾಮೀಲು ಎಂಬ ಬಗ್ಗೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವಂತೆ ಈ ಪ್ರಕರಣ ಮಾಡಿದೆ.
ರನ್ಯಾ ಜೊತೆ ಸಂಪರ್ಕದಲ್ಲಿದ್ದ ಚಿನ್ನಾಭರಣ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಮಾಹಿತಿಯನ್ನು ಡಿಆರ್ಐ ಅಧಿಕಾರಿಗಳು ಕಲೆ ಹಾಕಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲು ಪೂರ್ವಭಾವಿ ಸಿದ್ಧತೆ ಆರಂಭಿಸಿದ್ದಾರೆ.