Homeಕರ್ನಾಟಕಆರ್ಟಿಕಲ್ 371ಜೆ ಜಾರಿಯಾಗಿದ್ದಕ್ಕೆ ಉತ್ತರ ಭಾರತದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಆರ್ಟಿಕಲ್ 371ಜೆ ಜಾರಿಯಾಗಿದ್ದಕ್ಕೆ ಉತ್ತರ ಭಾರತದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದ್ದು, ಈ ಕ್ಷೇತ್ರಗಳ ಅಭಿವೃದ್ದಿ ಅದರಲ್ಲೂ ಶೈಕ್ಷಿಣಿಕ ಅಭಿವೃದ್ದಿಯಾಗಬೇಕು. ಇದಕ್ಕೆ ಈ ಭಾಗದ ಸಂಸದರು ಹಾಗೂ ಶಾಸಕರು ವಿಶೇಷ ಒತ್ತು ನೀಡಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಡಿಯಲ್ಲಿ ಜೇವರ್ಗಿಯಲ್ಲಿ ಶನಿವಾರ ನಡೆದ ಕಲ್ಯಾಣ ಪಥ ಯೋಜನೆಗೆ ಅಡಿಗಲ್ಲು ನೆರವೇರಿಸಿ‌ ಅವರು ಮಾತನಾಡಿ, “ಕಕ ಭಾಗದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರದ ಒಟ್ಟು 1166 ಕಿಮಿ ಉದ್ದದ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಆರ್ಟಿಕಲ್ 371 J ಜಾರಿಯಾಗಿರುವುದಕ್ಕೆ ಉತ್ತರ ಭಾರತದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸೋನಿಯಾಗಾಂಧಿ ಅವರ ಇಚ್ಚೆಯಂತೆ ಈ ಭಾಗಕ್ಕೆ ಈ ಸವಲತ್ತು ಸಿಗುವಂತಾಗಿದೆ. ದೇಶದ ಯಾವ ಕಡೆಗೆ ಇಂತಹ ವಿಶೇಷ ಸೌಲಭ್ಯ ಕೊಟ್ಟಿಲ್ಲ. ಕೆಲ ರಾಜ್ಯಗಳಿಗೆ‌ ಕೊಟ್ಟಿದ್ದಾರೆ. ಆದರೆ ರಾಜ್ಯದ ಭಾಗಕ್ಕೆ ಕೊಟ್ಟಿಲ್ಲ” ಎಂದರು.

“ಕಕ ಭಾಗಕ್ಕೆ ವಾರ್ಷಿಕ 5,000 ಕೋಟಿ ಅನುದಾನ ನೀಡಲಾಗುತ್ತಿದೆ ಎನ್ನುವ ಡಿಸಿಎಂ ಮಾತಿಗೆ ಲಘುಹಾಸ್ಯದ ಧಾಟಿಯಲ್ಲೇ ಉತ್ತರಿಸಿದ ಖರ್ಗೆ ಅವರು ಸ್ವಾಮಿ, ಐದು ಸಾವಿರ ಕೋಟಿ ಅಲ್ಲ ಲಕ್ಷ ಕೋಟಿ ಕೊಟ್ಟರು ನಿಮ್ಮಷ್ಟು ನಾವು ಅಭಿವೃದ್ದಿ ಆಗುವುದಿಲ್ಲ. ನಮ್ಮ ಭಾಗ ನಿಮ್ಮಷ್ಟೆ ಅಭಿವೃದ್ಧಿಯಾಗಬೇಕೆಂದರೆ ನಿಮ್ಮಷ್ಟೇ ಸಮಾನವಾದ ಅನುದಾನ ನಮಗೂ ಕೊಡಬೇಕು. ಸರ್ಕಾರದ ಯಾವುದೇ ಯೋಜನೆ ಮೈಸೂರಿನಿಂದ ಪ್ರಾರಂಭವಾಗಿ ದಾವಣಗೆರೆಗೆ ಬಂದು ನಿಂತುಬಿಡುತ್ತದೆ, ಬಳ್ಳಾರಿಯವರೆಗೂ ತಲುಪುವುದಿಲ್ಲ” ಎಂದು ಹೇಳಿದರು.

ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಯನ್ನು ಜಾರಿಗೊಳಿಸಲು ಶ್ರಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಶ್ಲಾಘಿಸಿದ ಖರ್ಗೆ ಅವರು ಈ ಯೋಜನೆಗಳ ಅಡಿಯಲ್ಲಿ ರಾಜ್ಯದ ರಸ್ತೆಗಳು ಅಭಿವೃದ್ದಿ ಹೊಂದಲಿವೆ ಎಂದು ಆಶಿಸಿದರು.

ಸತತ 16 ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ನವರನ್ನು ಕೊಂಡಾಡಿದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅತ್ಯಂತ ಉತ್ತಮ ಬಜೆಟ್. ಡಿಕೆ ಶಿವಕುಮಾರ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವಿಬ್ಬರು ಜೊತೆಯಾಗಿ ಅಭಿವೃದ್ದಿ ಕೆಲಸ ಮಾಡಿ” ಎಂದು ಸಲಹೆ ನೀಡಿದರು.

“ನಾನು ಶಾಸಕನಾಗಿ ಸಚಿವನಾಗಿ ಲೋಕಸಭೆ ಸದಸ್ಯನಾಗಿ, ರಾಜ್ಯಸಭಾ ಸದಸ್ಯನಾಗಿ ಈಗ ಎಐಸಿಸಿ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವುದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ ಎಂದು ಸ್ಮರಿಸಿದ ಖರ್ಗೆ ನೀವು ( ಮತದಾರರು) ಒಮ್ಮೊಮ್ಮೆ ದಾರಿ ತಪ್ಪುತ್ತೀರಿ ಅದು ಕೆಲಸ ಮಾಡುವವರಿಗೆ ಅಡ್ಡಗಾಲು ಹಾಕಿದಂತಾಗುತ್ತದೆ” ಎಂದು ಮಾರ್ಮಿಕವಾಗಿ ಹೇಳಿದರು.

“ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳಿಗೆ ಅದರಲ್ಲೂ ನರೇಗಾ ಯೋಜನೆಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಮಹಾತ್ಮಾ ಗಾಂಧಿ ಹೆಸರಲ್ಲಿ ಪ್ರಾರಂಭಿಸಿದ ಯೋಜನೆ ಅದು. ಕಳೆದ ಹನ್ನೊಂದು ವರ್ಷದಲ್ಲಿ ಮೋದಿ ಹನ್ನೊಂದು ಬಹಳ ದೊಡ್ಡ ಸುಳ್ಳು ಹೇಳಿದ್ದಾರೆ ಎಂದು ಪಟ್ಟಿ ಮಾಡಿದರು.

“1) ಹದಿನೈದು ಲಕ್ಷ ಕಪ್ಪುಹಣ ವಾಪಸ್ ತರುತ್ತೇನೆ ಎಂದಿದ್ದರು, ತರಲಿಲ್ಲ.2) ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು, ಎಲ್ಲಿ ಉದ್ಯೋಗ? 3) ಪೆಟ್ರೋಲ್ ಡಿಸೇಲ್ ದರ ಇಳಿಕೆ ಮಾಡುವುದಾಗಿ ಹೇಳಿದ್ದರು, ನಮ್ಮ ಸರ್ಕಾರದಲ್ಲಿದ್ದ ಬೆಲೆಗಿಂತ ಜಾಸ್ತಿ ಮಾಡಿದ್ದಾರೆ. 4) 2022 ರಲ್ಲಿ ಗಂಗಾ ನದಿ ಸ್ವಚ್ಛೀಕರಣ ಮಾಡುವುದಾಗಿ ಹೇಳಿದ್ದರು, ಎಲ್ಲಿ ಮಾಡಿದರ? 5) ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದನಾ ಕ್ಷೇತ್ರದ ಅಡಿಯಲ್ಲಿ ನೌಕರಿ ಏನಾಯ್ತು ? 6) 2022.ರಲ್ಲಿ ಎಲ್ಲ ಭಾರತೀಯರಿಗೆ ಪಕ್ಕಾ ಮನೆ ಕಟ್ಟಿಸುವುದಾಗಿ ಹೇಳಿದ್ದರು, ಪಕ್ಕಾ ಇರಲಿ ಅದರಲ್ಲಿ ಅರ್ಧ ಮನೆಯೂ ಆಗಿಲ್ಲ. 7) ರೈತರ ಲಾಭ ದ್ವಿಗುಣಗೊಳಿಸುವುದಾಗಿ ಹೇಳಿದ್ದರು, ಆಗಿದೆಯಾ? . 8) ನೋಟ್ ಬಂಧಿ ಮಾಡಿದ ಸಂಧರ್ಭಗಳಲ್ಲಿ ನೀಡಿದ ಮಾತು ಮರೆತರು. 9) ಅಹಮದಬಾದ್ ನಿಂದ‌ ಮುಂಬೈವರೆಗೆ 2022 ರಲ್ಲಿ ಬುಲೆಟ್ ಟ್ರೇನ್ ಪ್ರಾರಂಭಿಸುವುದಾಗಿ ಹೇಳಿದರು, ಆಯ್ತಾ ? 10) ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಲಾಭ ಆಗಲಿಲ್ಲ.11) ದೇಶದ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಓಡಿ ಹೋದವರನ್ನು ಹಿಡಿದು ತರಲಿಲ್ಲ. ಇಷ್ಟಾದರೂ ಕೂಡಾ ಯುವಕರು ಮೋದಿಯನ್ನು ಯಾಕೆ ಬೆಂಬಲಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ನಾನು ಹನ್ನೊಂದು ಚುನಾವಣೆ ಗೆದ್ದಿದ್ದೇನೆ ಆದರೆ ಸುಳ್ಳು ಆಡಿಲ್ಲ. ಹಾಗಾಗಿ, ನನ್ನನ್ನು ಜನರು ಆಶೀರ್ವಾದ ಮಾಡಿದ್ದಾರೆ” ಎಂದರು.

ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಶರಣಪ್ರಕಾಶ್ ಪಾಟೀಲ್, ರಹೀಮ್ ಖಾನ್, ಎಂಪಿ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ ವೈ ಪಾಟೀಲ, ಬಿ.ಆರ್.ಪಾಟೀಲ, ಅಜಯ್ ಸಿಂಗ್, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಅಲ್ಲಮಪ್ರಭು ಪಾಟೀಲ, ರಾಜಾ ವೇಣುಗೋಪಾಲ ನಾಯಕ, ಶರಣು ಸಲಗಾರ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಎ. ವಸಂತ ಕುಮಾರ ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments